ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಕೊಲೆ
ಮೈಸೂರು, ಸೆಪ್ಟೆಂಬರ್ 21: ನಗರದ ಮನೆಯೊಂದರಲ್ಲಿ ಒಂಟಿಯಾಗಿ ವಾಸವಿದ್ದ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ ಭಾನುವಾರ, ಸೆ.20ಕ್ಕೆ ನಡೆದಿದ್ದು, ನಗರದ ನಿವಾಸಿಗಳನ್ನು ಬೆಚ್ಚಿ ಬೀಳಿಸಿದೆ.
ಕೊಲೆಯಾದವರನ್ನು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ (67) ಎಂದು ಗುರುತಿಸಲಾಗಿದ್ದು, ಇವರು ಪತ್ನಿಯಿಂದ ಪ್ರತ್ಯೇಕವಾಗಿ ಒಬ್ಬರೇ ವಾಸವಿದ್ದರು.
ಹಾಸನ; ಮಗನ ಕೊಲೆಗೆ ಅಪ್ಪನೇ ಕೊಟ್ಟ ಸುಪಾರಿ
ಮೂಲತಃ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದವರಾದ ಇವರು ಕುವೆಂಪುನಗರ ಪಿಯು ಕಾಲೇಜು, ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಹಾಸನದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿವೃತ್ತರಾಗಿದ್ದರು.
ಪರಶಿವಮೂರ್ತಿ ಬಡ್ಡಿ ವ್ಯವಹಾರವನ್ನು ಮಾಡಿಕೊಂಡು ನಿವೇದಿತಾನಗರದ ಮನೆಯಲ್ಲಿ ಒಬ್ಬರೇ ಇದ್ದರು. ಭಾನುವಾರ ಸಂಜೆ ಬಾಗಿಲು ಹಾಕಿಕೊಂಡು ಪರಶಿವಮೂರ್ತಿ ಅವರು ಮನೆಯ ಒಳಗಿದ್ದರು. ಸಂಜೆ 6.30ರ ಸಮಯದಲ್ಲಿ ಮನೆಗೆ ಯಾರೋ ಇಬ್ಬರು ಪರಿಚಯಸ್ಥರು ಬಂದಿದ್ದಾರೆ. ಬಳಿಕ ಕೆಲ ಹೊತ್ತು ಮನೆಯಲ್ಲಿ ಏನೋ ಮಾತು ಕತೆ ನಡೆದಿದ್ದಾಗಿ ತಿಳಿದುಬಂದಿದೆ. ಸಂಜೆ 7.45 ಸಮಯದಲ್ಲಿ ಇಬ್ಬರು ಸೇರಿ ಪರಶಿವಮೂರ್ತಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಅವರು ಕಿರುಚಿಕೊಂಡಿದ್ದು, ಆ ಇಬ್ಬರು ಪರಾರಿಯಾಗಿದ್ದಾರೆ. ಕಿರುಚಿಕೊಂಡ ಶಬ್ದ ಕೇಳಿ ಪಕ್ಕದ ಮನೆಯವರು ಬಂದು ನೋಡುವ ಹೊತ್ತಿಗೆ ರಕ್ತಸ್ರಾವದಿಂದ ಮನೆಯ ಹಾಲಿನಲ್ಲಿ ಇವರು ಮೃತಪಟ್ಟಿದ್ದರು.
ಸ್ಥಳಕ್ಕೆ ಡಿಸಿಪಿ ಡಾ.ಎ.ಎನ್.ಪ್ರಕಾಶ್ಗೌಡ, ಕೆ.ಆರ್ ವಿಭಾಗದ ಎಸಿಪಿ ಪೂರ್ಣಚಂದ್ರತೇಜಸ್ವಿ, ಸರಸ್ವತಿಪುರಂ ಠಾಣೆ ಪಿಐ ವಿಜಯ್ ಕುಮಾರ್ ಶ್ವಾನದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮನೆಯಲ್ಲಿ ಯಾವುದೇ ಕಳ್ಳತನವಾಗಿಲ್ಲ. ಸರಸ್ವತಿಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.