ತಾತನಹಳ್ಳಿಯವರಿಗೆ ಕೆರೆಯ ನೀರು ಉಳಿಸಿಕೊಳ್ಳುವುದೇ ಸಮಸ್ಯೆಯಾಯಿತಾ?
ಮೈಸೂರು, ಅಕ್ಟೋಬರ್.25: ಈ ಬಾರಿ ಉತ್ತಮವಾಗಿ ಮಳೆಯಾಗಿರುವ ಕಾರಣ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಆದರೆ ಪಿರಿಯಾಪಟ್ಟಣ ತಾಲೂಕಿನ ತಾತನಹಳ್ಳಿ ಗ್ರಾಮದ ಜನಕ್ಕೆ ತಮ್ಮ ಗ್ರಾಮದ ಕೆರೆಯ ನೀರನ್ನು ಉಳಿಸಿಕೊಳ್ಳುವುದೇ ಈಗ ಸಮಸ್ಯೆಯಾಗಿ ಪರಿಣಮಿಸಿದೆ.
ಪಿರಿಯಾಪಟ್ಟಣ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಅದರಂತೆ ತಾತನಹಳ್ಳಿ ಗ್ರಾಮದ ಕೆರೆಯೂ ಭರ್ತಿಯಾಗಿತ್ತು. ಕೆರೆ ಭರ್ತಿಯಾಗಿದ್ದು ಗ್ರಾಮಸ್ಥರಿಗೆ ಸಂತಸವನ್ನು ತಂದಿತ್ತಾದರೂ ಇತ್ತೀಚೆಗೆ ಕೆರೆಯ ನೀರು ಸೋರಿಕೆಯಾಗಿದೆಯಲ್ಲದೆ, ಒತ್ತುವರಿಯಾಗುತ್ತಿರುವುದು ಕೂಡ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
14 ವರ್ಷಗಳ ನಂತರ ತುಂಬಿತು ಮಲ್ಲಯ್ಯನ ಕೆರೆ, ತಂಡೋಪತಂಡವಾಗಿ ಬಂದ ರೈತರು
ಈ ಕೆರೆಯು ಸುಮಾರು 62 ಎಕರೆ 23 ಗುಂಟೆ ವಿಸ್ತೀರ್ಣ ಹೊಂದಿದ್ದು, ಕಳೆದ ಕೆಲವು ವರ್ಷಗಳಿಂದ ಈ ಕೆರೆಯು ಸಮರ್ಪಕವಾಗಿ ಭರ್ತಿಯಾಗಿರಲಿಲ್ಲ. ಈ ಕೆರೆ ಭರ್ತಿಯಾದರೆ ಸುಮಾರು 200 ಎಕರೆಗೂ ಹೆಚ್ಚಿನ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ ಗ್ರಾಮದ ಸುಮಾರು 450 ಕ್ಕೂ ಹೆಚ್ಚು ಕುಟುಂಬಗಳು ಮತ್ತು ಜಾನುವಾರುಗಳು ಕೆರೆಯ ನೀರನ್ನು ಬಳಕೆ ಮಾಡಿಕೊಳ್ಳುತ್ತಿವೆ.
ಐತಿಹಾಸಿಕ ಅರಸನಕೆರೆ ತುಂಬಬೇಕು
ಈ ಕೆರೆ ತುಂಬಬೇಕಾದರೆ ಐತಿಹಾಸಿಕ ಅರಸನಕೆರೆ ತುಂಬಬೇಕು. ಆ ಕರೆ ಭರ್ತಿಯಾದ ನಂತರ ತೂಬಿನ ಪೈಪ್ ಮೂಲಕ ಹರಿದು ಹೋದ ನೀರು ತಾತನಹಳ್ಳಿ ಕೆರೆಯನ್ನು ಸೇರುತ್ತದೆ. ಆದರೆ ಸಮಸ್ಯೆ ಏನಾಗಿದೆ ಎಂದರೆ ಈ ನೀರು ಹರಿದು ಹೋಗುವ ಕಾಲುವೆಯಲ್ಲಿಯೇ ಕೆಲವರು ಮಾಂಸ ಮತ್ತು ಮೀನಿನಂಗಡಿಗಳ ತ್ಯಾಜ್ಯ ವಸ್ತುಗಳನ್ನು ತಂದು ಹಾಕುತ್ತಿದ್ದಾರೆ. ಇದು ಕೆರೆ ಮಲೀನಗೊಳ್ಳಲು ಕಾರಣವಾಗುತ್ತಿದೆ.
ಬೆಂಗಳೂರಿನ 10 ಕೆರೆಗೆ ಕೊಳಚೆ ನೀರು: ಡಿಸಿ ಶಂಕರ್ ಮಾಹಿತಿ
ಮಣ್ಣು ತುಂಬಿ ಮುಚ್ಚಿ ಹೋಗಿದೆ
ಕೆರೆ ಏರಿಯ ಮೇಲೆಯೇ ಸತ್ಯಗಾಲ, ಪಂಚವಳ್ಳಿ ಗ್ರಾಮಗಳಿಗೆ ತೆರಳುವ ತಾತನಹಳ್ಳಿ ಮುಖ್ಯ ರಸ್ತೆ ಹಾದು ಹೋಗಿದೆ. ಈ ರಸ್ತೆಯನ್ನು ಅವೈಜ್ಞಾನಿಕವಾಗಿ ಮಾಡಿದ ಕಾರಣ ಇವತ್ತು ಹಲವು ಸಮಸ್ಯೆ ಎದುರಾಗಿದೆ.
ಅದೇನೆಂದರೆ ಕೆರೆ ಏರಿ ಮತ್ತು ಗ್ರಾಮದ ಮಧ್ಯೆ ಇರುವ ಕೋಡಿಯ ಪಕ್ಕದಲ್ಲಿ ರಸ್ತೆಯನ್ನು ನಿರ್ಮಿಸಲಾಗಿದ್ದು, ಹಳ್ಳಕ್ಕೆ ನೀರು ಹರಿದು ಹೋಗಲು ದೊಡ್ಡ ಪೈಪುಗಳನ್ನು ಅಳವಡಿಸುವ ಬದಲಾಗಿ ಚಿಕ್ಕದಾದ ಪೈಪುಗಳನ್ನು ಅಳವಡಿಸಿದ್ದು, ಅದು ಈಗ ಮಣ್ಣು ತುಂಬಿ ಮುಚ್ಚಿ ಹೋಗಿದ್ದು ಅದರಲ್ಲಿ ನೀರು ಹರಿಯಲಾರದ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಕೆರೆ ತುಂಬಿದಾಗ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರಿಗೆ ಇದರಿಂದ ತೊಂದರೆಯಾಗುತ್ತಿದೆ.
ಸೆಪ್ಟಿಕ್ ಟ್ಯಾಂಕ್ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ
ಕೆರೆಯಲ್ಲಿ ಗಿಡಗಂಟಿಗಳು
ಇದೆಲ್ಲದರ ನಡುವೆ ಇತ್ತೀಚೆಗೆ ಕೆರೆ ಬತ್ತಿ ಹೋಗಿದ್ದ ಕಾರಣ ಕೆರೆಗೆ ಸೇರಿದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೆರೆಯು ಜಿ.ಪಂ.ವ್ಯಾಪ್ತಿಗೆ ಸೇರಿದ್ದು ಈ ಕೆರೆಯ ಅಭಿವೃದ್ಧಿ ಕುರಿತಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ತಿಳಿಸಲಾಗಿದ್ದರೂ ಯಾರೂ ಇದರತ್ತ ಗಮನಹರಿಸದ ಕಾರಣದಿಂದ ಕೆರೆಯಲ್ಲಿ ಗಿಡಗಂಟಿಗಳು ಬೆಳೆದು ದುಸ್ಥಿತಿಗೀಡಾಗಿರುವುದು ಕಂಡು ಬರುತ್ತಿದೆ.
ಅಂತರ್ಜಲದ ಸಂಕಷ್ಟ
ಈ ವ್ಯಾಪ್ತಿಯ ಜಿಪಂ ಸದಸ್ಯರು, ಶಾಸಕರು ಇತ್ತ ಗಮನಹರಿಸಿ ಕೆರೆಯ ಅಭಿವೃದ್ಧಿಗೆ ಮುಂದಾಗಬೇಕಿದೆ. ಇಲ್ಲದೆ ಹೋದರೆ ಕೆರೆಯಲ್ಲಿ ಈಗ ತುಂಬಿರುವ ನೀರು ಸೋರಿ ಹೋಗುವುದಲ್ಲದೆ, ಇದ್ದು ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ. ಬಹಳಷ್ಟು ವರ್ಷಗಳ ಬಳಿಕ ಉತ್ತಮವಾಗಿ ಮುಂಗಾರಿನಲ್ಲಿ ಮಳೆ ಸುರಿದಿದ್ದು ಕೆರೆಗಳು ಭರ್ತಿಯಾಗಿವೆ.
ಆದ್ದರಿಂದ ಕೇವಲ ತಾತನಹಳ್ಳಿ ಕೆರೆ ಮಾತ್ರವಲ್ಲ ಹತ್ತಾರು ಕೆರೆಗಳು ಇವತ್ತು ನಿರ್ಲಕ್ಷ್ಯಕ್ಕೀಡಾಗಿವೆ ಅಂತಹ ಕೆರೆಗಳನ್ನು ಅಭಿವೃದ್ಧಿಗೊಳಿಸಬೇಕಾಗಿದೆ. ಇಲ್ಲದೆ ಹೋದರೆ ಮತ್ತೆ ಅಂತರ್ಜಲದ ಸಂಕಷ್ಟಗಳನ್ನು ರೈತರು ಎದುರಿಸಬೇಕಾಗುತ್ತದೆ.