ಸಂಜೆ 6ರ ನಂತರ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಬ್ರೇಕ್
ಮೈಸೂರು, ಅಕ್ಟೋಬರ್ 22: ದಸರಾ ಮಹೋತ್ಸವದ ವೇಳೆ ಲಕ್ಷಾಂತರ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿರುವ ಮೈಸೂರಿನ ಸೌಂದರ್ಯವನ್ನು ಚಾಮುಂಡಿಬೆಟ್ಟದ ಮೇಲಿನಿಂದ ವೀಕ್ಷಿಸಿ ಸಂಭ್ರಮಿಸಲು ಮುಂದಾಗಿದ್ದವರಿಗೆ ನಿರಾಸೆ ಕಾದಿದೆ. ಮೈಸೂರು ಜಿಲ್ಲಾಡಳಿತ ಸಂಜೆ 6ರ ಬಳಿಕ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.
ನವರಾತ್ರಿಯ ವೇಳೆ ವಿವಿಧ ಬಣ್ಣಬಣ್ಣದ ವಿದ್ಯುದ್ದೀಪಗಳಿಂದ ಮೈಸೂರು ನಗರ ಝಗಮಗಿಸುತ್ತಿದೆ. ಸಂಜೆಯಾಗುತ್ತಿದ್ದಂತೆಯೇ ಬೆಟ್ಟಕ್ಕೆ ತೆರಳಿ ರಾತ್ರಿ ವೇಳೆ ಕಾಣುವ ಮೈಸೂರಿನ ಸೊಬಗನ್ನು ಸವಿಯಲು ಮುಂದಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವರ್ಷವೂ ಮೊದಲ 2 ದಿನ ಜನತೆ ಮುಗಿಬಿದ್ದ ಹಿನ್ನೆಲೆಯಲ್ಲಿ ಕೊರೊನಾ ಹರಡುವಿಕೆ ಭಯದಿಂದ ಮೈಸೂರು ಜಿಲ್ಲಾಡಳಿತ ಸಂಜೆ ವೇಳೆ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಿದೆ.
ಮೈಸೂರು ಅರಮನೆಯ ವರ್ಣಿಸಲಸದಳ ದೃಶ್ಯಗಳು...
ನಿರ್ಬಂಧವನ್ನು ರದ್ದುಗೊಳಿಸಿದ್ದರು
ಈ ವರ್ಷದ ದಸರಾ ಮಹೋತ್ಸವದಲ್ಲಿ 2 ಹಂತಗಳಲ್ಲಿ (ಅ.14 ರಿಂದ ನ.1ರವರೆಗೆ) ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧಿಸುವ ಮೂಲಕ ಕೋವಿಡ್-19 ಸೋಂಕು ಹರಡುವಿಕೆ ತಡೆಗೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಆದರೆ ನವರಾತ್ರಿಯ ಆರಂಭದ ದಿನವಾದ ಅ.17 ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ರದ್ದುಗೊಳಿಸಿದ್ದರು.
ವೀವ್ ಪಾಯಿಂಟ್ ನಿಂದ ಮೈಸೂರು ನಗರ ದೀಪಾಲಂಕಾರ ವೀಕ್ಷಣೆ
ಬಳಿಕ ಅ.18 ಮತ್ತು 19 ರಂದು ಚಾಮುಂಡಿಬೆಟ್ಟಕ್ಕೆ ಸಾವಿರಾರು ಮಂದಿ ಬೆಟ್ಟದ ರಸ್ತೆಯುದ್ದಕ್ಕೂ ಮಾಡಲಾಗಿದ್ದ ದೀಪಾಲಂಕಾರ ವೀಕ್ಷಿಸಿದರು. ಅಲ್ಲದೇ, ವೀವ್ ಪಾಯಿಂಟ್ ನಿಂದ ಮೈಸೂರಿನ ದೀಪಾಲಂಕಾರವನ್ನು ಕಣ್ತುಂಬಿಕೊಂಡಿದ್ದರು. ಕಳೆದ 5 ದಿನಗಳಿಂದ ದೀಪಾಲಂಕಾರ ವೀಕ್ಷಣೆಗಾಗಿ ಸಂಜೆ ವೇಳೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಮೈಸೂರಿನ ಜನರು ಚಾಮುಂಡಿಬೆಟ್ಟಕ್ಕೆ ದಾಂಗುಡಿ ಇಡುತ್ತಿದ್ದಾರೆ.
ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ
ಇದರಿಂದ ಚಾಮುಂಡಿಬೆಟ್ಟ ಸಂಪರ್ಕಿಸುವ ಮೈಸೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಅಲ್ಲದೇ, ದೀಪಾಲಂಕಾರ ವೀಕ್ಷಣೆಗೆ ಬೆಟ್ಟವೇರುವವರು ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ. ಭಾನುವಾರ ಮತ್ತು ಸೋಮವಾರ ಚಾಮುಂಡಿ ಬೆಟ್ಟದಲ್ಲಿ ಸಂಜೆ ವೇಳೆ ಅಪಾರ ಸಂಖ್ಯೆಯ ಪ್ರವಾಸಿಗರು ಕಿಕ್ಕಿರಿದಿದ್ದರು. ಸುಸ್ವಾಗತ' ಫಲಕದ ಬಳಿಯೂ ಸಾವಿರಾರು ಮಂದಿ ನೆರೆದಿದ್ದರು.
ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ
ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಿರುವುದನ್ನು ಮನಗಂಡ ಮೈಸೂರು ಜಿಲ್ಲಾಡಳಿತ ಮಂಗಳ ವಾರ ಸಂಜೆ 6 ರಿಂದ ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತು. ಚಾಮುಂಡಿ ಬೆಟ್ಟದ ಪ್ರವೇಶ ದ್ವಾರದಲ್ಲಿ ತಾವರೆಕಟ್ಟೆ, ನಂದಿ ರಸ್ತೆ, ಉತ್ತನಹಳ್ಳಿ ರಸ್ತೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಟ್ಟದ ನಿವಾಸಿಗಳನ್ನು ಹೊರತುಪಡಿಸಿ ಪ್ರವಾಸಿಗರು ಹಾಗೂ ದೀಪಾಲಂಕಾರ ನೋಡಲು ಬರುವವರನ್ನು ತಡೆದು ವಾಪಸ್ ಕಳುಹಿಸುತ್ತಿದ್ದಾರೆ.