ಪಿರಿಯಾಪಟ್ಟಣದ ಗಣರಾಜ್ಯೋತ್ಸವ ವೇದಿಕೆಯಲ್ಲಿ ಕಿರಿಕಿರಿ!
ಮೈಸೂರು, ಜನವರಿ 27: ಗಣರಾಜ್ಯೋತ್ಸವದ ಮಹತ್ವದ ಕುರಿತು ಮಾತನಾಡುತ್ತಿದ್ದ ಭಾಷಣಕಾರರಿಗೆ ಪುರಸಭೆ ಅಧ್ಯಕ್ಷರು ಭಾಷಣ ನಿಲ್ಲಿಸುವಂತೆ ಹೇಳಿದ ಘಟನೆ ಮೈಸೂರಿನ ಪಿರಿಯಾಪಟ್ಟಣದಲ್ಲಿ ನಡೆದಿದ್ದು, ಇದನ್ನು ಖಂಡಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಪಿರಿಯಾಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಭಾಷಣಕಾರರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಪುಟ್ಟಮಾದಯ್ಯ ಅವರನ್ನು ಕರೆಯಿಸಲಾಗಿತ್ತು.
ಅವರು ವೇದಿಕೆಯಲ್ಲಿ ಭಾಷಣ ಆರಂಭಿಸಿ ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಿದ್ದು, ದೇಶವು ಗೌರವಿಸುವಂತಹ ಸಂವಿಧಾನ ನಮ್ಮಲ್ಲಿದ್ದು ಇದನ್ನು ಗೌರವಿಸದ ಕೆಲವರು ವಿವಿಧ ರೀತಿಯಲ್ಲಿ ತಿರುಚಲು ಯತ್ನಿಸುತ್ತಿದ್ದಾರೆ, ಇದು ಅಪಾಯಕಾರಿಯಾಗಿದೆ ಎಂದರು. ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದ ಪುರಸಭಾಧ್ಯಕ್ಷ ವೇಣುಗೋಪಾಲ್ ಇದು ರಾಜಕೀಯ ಪಕ್ಷದ ವೇದಿಕೆಯಲ್ಲ, ಇದು ಸರ್ಕಾರದ ಕಾರ್ಯಕ್ರಮ, ಭಾಷಣವನ್ನು ನಿಲ್ಲಿಸಿ ಎಂದು ಕಿರಿಕಿರಿ ಆರಂಭಿಸಿದ್ದಾರೆ.
ಇದರಿಂದ ವೇದಿಕೆಯಲ್ಲಿ ಕೆಲಕಾಲ ಗೊಂದಲ ಏರ್ಪಟ್ಟು ಆರೋಪ ಪ್ರತ್ಯಾರೋಪ ನಡೆದು ಕೆಲ ಸಂಘಟನೆಗಳು ಧಿಕ್ಕಾರ ಕೂಗಲು ಆರಂಭಿಸಿದರು.
ತಹಸೀಲ್ದಾರ್ ನಿಯಮದ ಪ್ರಕಾರ ಕಾಲಾವಕಾಶವನ್ನು ನಿಗದಿಪಡಿಸಿ ಭಾಷಣಕಾರರಿಗೆ ತಿಳಿಸಬೇಕಿತ್ತು, ಜೊತೆಗೆ ವೇದಿಕೆಯ ನಡವಳಿಕೆಯ ಬಗ್ಗೆ ಗಣ್ಯರಿಗೆ ತಿಳಿಸಬೇಕಿತ್ತು, ಇದ್ಯಾವುದನ್ನೂ ಮಾಡದ ಪರಿಣಾಮ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಅಗೌರವ ಮಾಡಿದಂತಾಗಿದೆ ಎಂದು ಆರೋಪಿಸಿದ ಕೆಲವು ಸಂಘಟನೆಗಳು ಇದರ ಸಂಪೂರ್ಣ ಹೊಣೆಗಾರಿಕೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿರುವ ಜೆ.ಮಹೇಶ್ ಮತ್ತು ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಹೊರಬೇಕೆಂದು ಆಗ್ರಹಿಸಿ ಅವರ ವಿರುದ್ದ ಪ್ರತಿಭಟನೆ ನಡೆಸಿ ಕ್ಷಮೆ ಕೇಳುವಂತೆ ಒತ್ತಾಯಿಸಿದರು.
ಸಂಘಟನಾಕಾರರ ನೇತೃತ್ವ ವಹಿಸಿದ್ದ ತಾ.ಪಂ. ಸ್ಥಾಯಿಸಮಿತಿ ಅಧ್ಯಕ್ಷ ಎಸ್. ರಾಮುಐಲಾಪುರ ಮಾತನಾಡಿ ಸಂವಿಧಾನವನ್ನು ಜಾರಿಗೊಳಿಸುವ ಸಂದರ್ಭ ಈ ದಿನವನ್ನು ಸಂವಿಧಾನ ದಿನಾಚರಣೆ ಎಂದು ಆಚರಿಸುವಂತೆ ಒತ್ತಾಯಿಸಲಾಗಿತ್ತು, ಆದರೆ ಅಂಬೇಡ್ಕರ್ರವರು ಶೋಷಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಗಣರಾಜ್ಯ ದಿನವಾಗಿ ಆಚರಿಸಲಾಗುತ್ತಿದೆ, ಈ ಸತ್ಯವನ್ನು ಭಾಷಣಕಾರರು ತಿಳಿಸಲು ಮುಂದಾದಾಗ ಅವಕಾಶ ನೀಡದೆ ತಡೆಒಡ್ಡುವುದು ಅಭಿವೃಕ್ತಿ ಸ್ವಾತಂತ್ರಕ್ಕೆ ಧಕ್ಕೆತರುವ ವಿಚಾರ, ಇದನ್ನು ತೀವ್ರವಾಗಿ ಖಂಡಿಸುತ್ತೇವೆ.
ತಹಸೀಲ್ದಾರ್ ಜೆ.ಮಹೇಶ್ ಮತ್ತು ಪುರಸಭೆ ಅಧ್ಯಕ್ಷ ವೇಣುಗೋಪಾಲ್ ವಿರುದ್ಧ ಜಿಲ್ಲಾಧಿಕಾರಿಯು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ವಿಳಂಬವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.