ಗಣರಾಜ್ಯೋತ್ಸವ ಪರೇಡ್: ರಾಜ್ಪಥ್ನಲ್ಲಿ ಎನ್ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ
ಮೈಸೂರು, ಜನವರಿ 26: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಜ.26) ನಡೆದ 73ನೇ ಗಣರಾಜ್ಯೋತ್ಸವದ ಐತಿಹಾಸಿಕ ಪರೇಡ್ನಲ್ಲಿ ಭಾಗವಹಿಸಿದ್ದ ಎನ್ಸಿಸಿ ತಂಡವನ್ನು ಮೈಸೂರಿನ ವಿದ್ಯಾರ್ಥಿನಿ ನೇತೃತ್ವ ವಹಿಸಿದ್ದರು. ಈ ಮೂಲಕ ರಾಜ್ಯದ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ಹಾರಿಸಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನ ಬಿ.ಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ ನೇತೃತ್ವದ ಎನ್ಸಿಸಿ ತಂಡ ಪಥಸಂಚಲನದಲ್ಲಿ ಭಾಗಿಯಾಗಿತ್ತು. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿರುವ ಪ್ರತಾಪ್ ಸಿಂಗ್ ಮತ್ತು ಪುಷ್ಪಾ ಕುನ್ವರ್ ದಂಪತಿಯ ಪುತ್ರಿಯಾಗಿರುವ ಪ್ರಮಿಳಾ, ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ.
ಪ್ರಮೀಳಾ ಅವರ ತಂದೆ ಮೈಸೂರು ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. 2018 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎನ್ಸಿಸಿ ತಂಡದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರಮೀಳಾ ಅವರಿಗೆ 2022ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಎನ್ಸಿಸಿ ತಂಡದ ನೇತೃತ್ವ ವಹಿಸಿರುವುದು ಪೋಷಕರಲ್ಲಿ ಸಂತಸವನ್ನುಂಟು ಮಾಡಿದೆ.
ಮೈಸೂರಿನಿಂದ ಒಟ್ಟು 19 ಕೆಡೆಟ್ಗಳಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್ಸಿಸಿ ಡೈರೆಕ್ಟೊರೇಟ್ ಪಡೆಯನ್ನು ಪ್ರತಿನಿಧಿಸಿದ್ದಾರೆ. ನವದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್ಗಾಗಿ ಭಾರತದ 17 ಡೈರೆಕ್ಟೊರೇಟ್ಗಳಿಂದ ಕೆಡೆಟ್ಗಳನ್ನು ಆಯ್ಕೆ ಮಾಡಲಾಗುತ್ತದೆ. ಎನ್ಸಿಸಿ ಕ್ಯಾಂಪ್ನಲ್ಲಿ ಇವರು ವ್ಯಾಯಾಮ, ಸಾಂಸ್ಕೃತಿಕ ಚಟುವಟಿಕೆಗಳು, ಫ್ಯಾಗ್ ಏರಿಯಾ ಮತ್ತು ಬೆಸ್ಟ್ ಕೆಡೆಟ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಕೊರೊನಾ ಸೋಂಕಿನಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಎನ್ಸಿಸಿ ಕ್ಯಾಂಪ್ಗೆ ಆಯ್ಕೆ ಮಾಡುವ ಕೆಡೆಟ್ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್ನಿಂದ ಒಟ್ಟು 54 ಕೆಡೆಟ್ಗಳನ್ನು ಆಯ್ಕೆ ಮಾಡಲಾಗಿದ್ದು, 2 ತಿಂಗಳ ಹಿಂದೆಯೇ ನವದೆಹಲಿ ತಲುಪಿದ್ದರು.