'ಜುಲೈನಿಂದ ಜಗನ್ಮೋಹನ ಪ್ಯಾಲೇಸ್ ಸಾರ್ವಜನಿಕರ ವೀಕ್ಷಣೆಗೆ'
ಮೈಸೂರು, ಮೇ 29: ಜಗನ್ಮೋಹನ ಅರಮನೆಯ ನವೀಕರಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಜುಲೈ ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ರಾಜಮಾತೆ ಪ್ರಮೋದಾದೇವಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆಯ ಮೂಲ ಸ್ವರೂಪಕ್ಕೆ ಚ್ಯುತಿ ಬಾರದಂತೆ ನವೀಕರಣ ನಡೆದಿದೆ. ಜಿ.ಎನ್. ಹೆರಿಟೇಜ್ ಫೌಂಡೇಷನ್ ಸಹಕಾರದೊಂದಿಗೆ ಈ ಕಾರ್ಯ ಪೂರ್ಣಗೊಂಡಿದೆ. ಸುಮಾರು 8 ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಒಂದು ಹಂತ ತಲುಪಲು ಕೆಲಸಗಾರರ ತಂಡ ಹಗಲಿರುಳು ಕಾರ್ಯ ನಿರ್ವಹಿಸಿದೆ. ಹಳೆಯ ಶೈಲಿಗೆ ಯಾವುದೇ ಧಕ್ಕೆ ಬಾರದಂತೆ ಅದರ ಪರಂಪರೆಯನ್ನು ಹಾಗೆಯೇ ಉಳಿಸಿ ನವೀಕರಿಸಲಾಗಿದೆ ಎಂದರು.
ಪಾರಂಪರಿಕ ಕಟ್ಟಡಗಳ ಬಗ್ಗೆ ಪ್ರಮೋದಾದೇವಿ ಒಡೆಯರ್ ಹೇಳಿದ್ದೇನು?
ಪುರಾತನ ಗೋಡೆಗಳಿಗೆ ಮತ್ತು ಕಂಬಗಳಿಗೆ 6 ರಿಂದ 7 ಪದರಗಳು ಬಣ್ಣ ಬಳಿದಿದ್ದರು. ಅದನ್ನು ತೆಗೆದು ಹೊಸ ಎನಾಮಲ್ ಬಣ್ಣ ಹಚ್ಚಲಾಗಿದೆ. ಅಲ್ಲದೇ 2000ಕ್ಕೂ ಹೆಚ್ಚು ವಸ್ತುಗಳು ಮತ್ತು ಚಿತ್ರ ಪಟಗಳು ಸಂಗ್ರಹಾಲಯದಲ್ಲಿ ಇವೆ. ಅದಕ್ಕೆ ಜಾಗದ ಅವಶ್ಯಕತೆ ಇದೆ. ಮುಂದೆ ಎಲ್ಲವನ್ನೂ ಪ್ರದರ್ಶನಕ್ಕೆ ಇಡಲಾಗುವುದು. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಮೈಸೂರಿನ ಬಗ್ಗೆ, ಅರಮನೆಯ ಇತಿಹಾಸವನ್ನು ತಿಳಿಯಬಹುದಾಗಿದೆ ಎಂದರು.
ಈ ಗ್ಯಾಲರಿ 1861ರಲ್ಲಿ ಇದ್ದ ಹಾಗೆಯೇ ಈಗಲೂ ಕಾಣಬಹುದು. ಮುಂದೆ ಪ್ರವೇಶ ದರ 120ರೂ ಆಗಬಹುದು. ಹಳೆಯ ವಸ್ತುಗಳನ್ನು ರಿಪೇರಿ ಮಾಡಲು ಒಂದು ಸ್ಥಳದಲ್ಲಿ ಲ್ಯಾಬ್ ನಿರ್ಮಾಣದ ಚಿಂತನೆ ಇದೆ ಎಂದರು.
ಹೋಟೆಲ್ ಆಗಿ ಬದಲಾಗುತ್ತಿದೆ ಮೈಸೂರಿನ ಪಾರಂಪರಿಕ ಕಟ್ಟಡ ಗನ್ ಹೌಸ್
ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತು ಸರ್ಕಾರ ಈವರೆಗೆ ಸಲಹೆಗಳನ್ನು ಅಪೇಕ್ಷಿಸಿರಲಿಲ್ಲ. ಅಪೇಕ್ಷಿಸಿದರೆ ಸಲಹೆ ಕೊಡಲು ನಾವು ಸಿದ್ದರಿದ್ದೇವೆ. ಲ್ಯಾನ್ಸ್ ಡೌನ್ ಬಿಲ್ಡಿಂಗ್ ವಿಚಾರವಾಗಿ ನಮ್ಮ ಸಲಹೆ ಕೇಳಿಲ್ಲ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಯಾವ ಕಾರಣಕ್ಕೆ ಅದನ್ನ ಕೆಡವಲು ಮುಂದಾಗಿದ್ದಾರೆ ಗೊತ್ತಿಲ್ಲ. ಈಗಿನ ತಂತ್ರಜ್ಞಾನದಲ್ಲಿ ಏನನ್ನು ಬೇಕಾದರೂ ಮಾಡಬಹುದು. ಪಾರಂಪರಿಕ ಸಲಹಾ ಸಮಿತಿಗೆ ಮಾರ್ಗದರ್ಶನ ನೀಡಲು ಸಿದ್ದವಿರುವೆ, ಸರ್ಕಾರ ಬಯಸಿದರೆ ಸಹಕಾರ ಕೊಡುತ್ತೇನೆ ಎಂದು ತಿಳಿಸಿದರು.
ಅರಮನೆ ಮುಖ್ಯ ಭಾಗ ಸೋರುತ್ತಿರುವ ಬಗ್ಗೆ ಮಾತನಾಡಿ, ಇದು ನ್ಯಾಯಾಲಯದಲ್ಲಿ ಇರುವುದರಿಂದ ಕೆಲಸವನ್ನು ಸರ್ಕಾರ ಮಾಡುವುದೋ ಅಥವಾ ನಾವು ಮಾಡುವುದೋ ನಿರ್ಧಾರ ಆಗಬೇಕಾಗಿದೆ ಎಂದರು.