ದಲಿತನ ಬೆತ್ತಲೆ ಮೆರವಣಿಗೆ ಪ್ರಕರಣ; ಆಸ್ಪತ್ರೆಗೆ ಪರಿಶಿಷ್ಟ ಜಾತಿ ಆಯೋಗ ತಂಡ ಭೇಟಿ
ಮೈಸೂರು, ಜೂನ್ 18: ಚಾಮರಾಜನಗರದ ಕೆಬ್ಬೆಕಟ್ಟೆ ಗ್ರಾಮದಲ್ಲಿ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತುಗೊಂಡಿರುವ ಇಬ್ಬರು ಎಎಸ್ಐ ಮತ್ತು ವಾಹನ ಚಾಲಕನ ಮೇಲೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿರುವುದಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಉಪಾಧ್ಯಕ್ಷ ಡಾ.ಎಲ್. ಮುರುಗನ್ ತಿಳಿಸಿದ್ದಾರೆ.
ದಲಿತ ವ್ಯಕ್ತಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ, ಇಬ್ಬರ ಬಂಧನ
ಬೆತ್ತಲೆ ಮೆರವಣಿಗೆಯ ಕೃತ್ಯಕ್ಕೆ ಒಳಗಾದ ಪ್ರತಾಪ್ ಮಾನಸಿಕ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಂತರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಜೂನ್ 3ರಂದು ಘಟನೆ ನಡೆದಿದ್ದು, ಜೂನ್ 11ರವರೆಗೂ ಪೊಲೀಸರ ಗಮನಕ್ಕೆ ಬಾರದಿರುವುದು ವಿಪರ್ಯಾಸ. ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಕಾಣುತ್ತಿದೆ. ಈ ಆರೋಪದಡಿ ಅಮಾನತುಗೊಂಡಿರುವ ಗುಂಡ್ಲುಪೇಟೆ ಪೊಲೀಸ್ ಠಾಣೆ ಎಎಸ್ಐ ಮತ್ತು ಹೈವೇ ಪೆಟ್ರೋಲ್ ಉಸ್ತುವಾರಿ ರಾಜೇಂದ್ರ ಪ್ರಸಾದ್, ವಾಹನ ಚಾಲಕ ಶ್ರೀನಿವಾಸ್ ವಿರುದ್ಧ ಪರಿಶಿಷ್ಟ ಜಾತಿ - ಪಂಗಡ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.
ಯುವಕ ಬುದ್ಧಿವಂತನಿದ್ದು, ಗಂಭೀರವಾದ ಮಾನಸಿಕ ಸಮಸ್ಯೆಗಳಿಲ್ಲ. ಯುಪಿಎಸ್ ಸಿ ಪರೀಕ್ಷೆ ಬರೆಯಲು ಅರ್ಹನಿದ್ದಾನೆ. ನೊಂದ ಯುವಕನಿಗೆ 1 ಲಕ್ಷ ಪರಿಹಾರ ನೀಡುವಂತೆ ಚಾಮರಾಜನಗರ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಸದ್ಯ, ಮೊದಲ ಕಂತಿನಲ್ಲಿ 25 ಸಾವಿರ ಪರಿಹಾರ ಧನ ವಿತರಿಸಲಾಗಿದೆ ಎಂದು ತಿಳಿಸಿದರು.