ಪ್ರತಾಪ್ ಸಿಂಹ ಗೆಲ್ಲಲು, ವಿಜಯ್ ಶಂಕರ್ ಸೋಲಲು ಕಾರಣವೇನು ?
ಮೈಸೂರು, ಮೇ 23 : ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಈ ಬಾರಿ ಹೈವೋಲ್ಟೇಜ್ ಎಂದೇ ಕರೆಯಲ್ಪಟ್ಟಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿತ್ತು ಎಂದರೆ ತಪ್ಪಾಗಲಾರದು. ಅಲ್ಲದೇ ದೋಸ್ತಿ ನಾಯಕರು ಉರುಳಿಸುವ ದಾಳದ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇವೆಲ್ಲವೂ ಅಕ್ಷರಶಃ ತಲೆಕೆಳಗಾಗಿದೆ.
ಕಮಲ ಪಾಳಯಕ್ಕೆ ಒಲಿದ ಜಯ
ಈ ಲೋಕಸಭಾ ಕ್ಷೇತ್ರಕ್ಕೆ ಜಿಲ್ಲೆಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮುಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರಗಳ ಜತೆಗೆ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಪುನರಾಯ್ಕೆ ಬಯಸಿದ್ದರು. ಇದರೊಟ್ಟಿಗೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿಕೂಟದಿಂದ ಮಾಜಿ ಸಂಸದ ವಿಜಯಶಂಕರ್ ಸ್ಪರ್ಧಿಸಿದ್ದರು. ಅದರಂತೆ ಈ ಚುನಾವಣೆಯಲ್ಲಿ ಕಮಲ ಪಾಳಯದ ಪ್ರತಾಪ್ ಸಿಂಹ, ವಿಜಯ್ ಶಂಕರ್ ಅವರಿಂದ ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. 1989ರಿಂದ ಅಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ಮೈಸೂರು ಕ್ಷೇತ್ರದಲ್ಲಿ ಯಾರೂ ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿಲ್ಲ. ಆದರೆ ಆ ರೆಕಾರ್ಡ್ ಅನ್ನು ಸಂಸದ ಪ್ರತಾಪ್ ಸಿಂಹ ದಾಖಲಿಸಿದ್ದಾರೆ.
ಚುನಾವಣಾ ಫಲಿತಾಂಶ: ಗೆದ್ದ ಪ್ರತಾಪ್ ಸಿಂಹ, ಸೋತ ವಿಜಯ್ ಶಂಕರ್ ಹೇಳಿದ್ದೇನು?
ಗೆಲುವಿಗೆ ಇದೇ ಸ್ಟ್ರಾಟರ್ಜಿ ಕಾರಣವಾಯಿತೆ?
ಒಂದೆಡೆ ಬಿಸಿಲ ಧಗೆ, ಇನ್ನೊಂದೆಡೆ ಲೋಕಸಭಾ ಚುನಾವಣಾ ಫಲಿತಾಂಶದ ಕಾವು. ಮತದಾರರು, ಅಭ್ಯರ್ಥಿಗಳು ಒಂದು ತಿಂಗಳಿನಿಂದ ಕುತೂಹಲದಿಂದ ಕಾಯುತ್ತಿರುವ ಸಮಯ ಬಂದೇಬಿಟ್ಟಿತು. ಅದೇ ಒಂದು ತಿಂಗಳ ಪ್ರಜಾತಂತ್ರದ ಫಲಿತಾಂಶದ ಹಬ್ಬ. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೇ ಪತ್ರಕರ್ತನೋರ್ವ ತನ್ನದಲ್ಲದ ಕ್ಷೇತ್ರದಿಂದ ಮೈಸೂರು - ಕೊಡಗು ಕ್ಷೇತ್ರದಲ್ಲಿ 2014ರಲ್ಲಿ ಗೆದ್ದರು. ಅದರೊಟ್ಟಿಗೆ ಈ ಬಾರಿಯೂ ಅದೇ ಗೆಲುವಿನ ಓಟವನ್ನು ನಾಗಾಲೋಟದಲ್ಲಿಯೇ ಪಡೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ಹೆಸರಿನ ಜೊತೆಗೆ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಾಪಸಿಂಹ ಮತಯಾಚನೆ ನಡೆಸಿದ್ದರು. ಅಲ್ಲದೇ ತಾವು ಈ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳಾದ ಪಾಸ್ ಪೋರ್ಟ್ ಸೇವಾ ಕೇಂದ್ರ, ರೈಲ್ವೆ ಹೆದ್ದಾರಿ ಸೇರಿದಂತೆ ವಿವಿಧ ಕಾರ್ಯಗಳನ್ನು ಜನರ ಮುಂದಿಡುತ್ತಾ ಬಂದರು. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಮೈತ್ರಿ ಬಗ್ಗೆ ಪರಸ್ಪರ ಅನುಮಾನ ವ್ಯಕ್ತಪಡಿಸುತ್ತಿರುವುದು, ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಬಹಿರಂಗವಾಗಿ ಬೆಂಬಲ ಕೊಡುತ್ತಿರುವುದು, ಪಕ್ಕದ ಕ್ಷೇತ್ರದಲ್ಲಿ ನಡೆದ ಬೆಳವಣಿಗೆಯೂ ಒಂದರ್ಥದಲ್ಲಿ ಸಂಸದ ಪ್ರತಾಪ್ ಸಿಂಹ ಗೆಲುವಿಗೆ ಶ್ರೀರಕ್ಷೆಯೆಂದೆನಿಸಿತು.
ದಾರಿ ಮಾಡಿಕೊಟ್ಟಿತೇ ಮೈತ್ರಿಯ ಭಿನ್ನಾಭಿಪ್ರಾಯ
ಮೈಸೂರಿನ ಯುವಶಕ್ತಿ ಒಂದರರ್ಥದಲ್ಲಿ ಮೋದಿ ಅಲೆಯೊಟ್ಟಿಗೆ ಕೈಗೂಡಿತು. ಮೈತ್ರಿ ಅಭ್ಯರ್ಥಿ ಶತಾಯ ಗತಾಯ ಸರ್ಕಸ್ ನಡೆಸಿದರೂ ಗೆಲುವು ಅಸಾಧ್ಯವೆಂದೆನಿಸಿತು. ಮೈಸೂರಿನಲ್ಲಿ ಮೈತ್ರಿ ನಾಯಕರ ಅಸಮಾಧಾನವೇ ಪ್ರತಾಪ್ ಸಿಂಹರಿಗೆ ಗೆಲುವು ತಂದೊಡ್ಡಿತು ಎಂದರು ತೆಗೆದು ಹಾಕುವಂತಿಲ್ಲ. ಇತರೆ ಪಕ್ಷಗಳು ಸಹ ಪ್ರತಾಪ್ ಸಿಂಹರ ವಿಜಯಕ್ಕೆ ತಡೆಯೊಡ್ಡಲು ಚುನಾವಣೆ ಹಿಂದಿನ ದಿನವೂ ಸಾಮಾಜಿಕ ಜಾಲತಾಣದಲ್ಲಿ ಬೇಡದ ಪೋಸ್ಟ್ ಗಳನ್ನು ಹಾಕಿ ಮಾನಹಾನಿಗೆ ಮುಂದಾಯಿತು. ಆದರೆ ಅದ್ಯಾವ ಪ್ಲಾನ್ ಗಳು ವರ್ಕೌಟ್ ಆಗಲೇ ಇಲ್ಲ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ನಾಯಕರಲ್ಲಿ ಮೂಡದ ಒಮ್ಮತವೇ ಮುಳುವಾಯಿತೆ
1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಿಂದ ಹಿಡಿದು 1998ರವರೆಗೆ 46 ವರ್ಷಗಳ ಸುದೀರ್ಘ ಅವಧಿಗೆ ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. ಆ ಅಬೇಧ್ಯ ಕೋಟೆಯನ್ನು ಮೊದಲ ಬಾರಿ ಕೆಡವಿದ್ದು ಅಂದಿನ ಬಿಜೆಪಿ ಅಭ್ಯರ್ಥಿ ವಿಜಯಶಂಕರ್. ಆದರೆ, ಈ ಬಾರಿ ಕಾಂಗ್ರೆಸ್ನಿಂದ ಮೈತ್ರಿ ಸರ್ಕಾರದ ಕೆಲಸಗಳೇ ಶ್ರೀರಕ್ಷೆ ಎಂದು ಸಿ.ಎಚ್.ವಿಜಯಶಂಕರ್ ಅಖಾಡಕ್ಕಿಳಿದಿದ್ದರು. ಆರಂಭಿಕ ಹಂತದಲ್ಲಿ ಪ್ರಚಾರಕ್ಕಿಂತ ಹೆಚ್ಚಾಗಿ ಜೆಡಿಎಸ್ ಮುಖಂಡರನ್ನು ಭೇಟಿಯಾಗಿ ಅವರ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದರು.
ವಿಜಯ್ ಶಂಕರ್ ಗೆ ಎದುರಾದ ಸವಾಲುಗಳು ಅನೇಕ. ಮೊದಲಿಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಗೊಂದಲ, ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಕಾಂಗ್ರೆಸ್ ಸಹಕರಿಸಿದರೆ ಮಾತ್ರ ಮೈಸೂರಿನಲ್ಲಿ ಕಾಂಗ್ರೆಸ್ಗೆ ಸಹಕರಿಸಲಿದ್ದಾರೆ ಎಂದು ಹೇಳತೊಡಗಿದರು. ಇದಕ್ಕೆ ಪುಷ್ಟಿಕೊಡುವಂತೆ . ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಆರಂಭಿಕ ಹಂತಗಳಲ್ಲಿ ಪ್ರಚಾರದಿಂದ ದೂರ ಉಳಿದರು. ಅಲ್ಲದೇ ಹಿರಿ ತಲೆಗಳನ್ನು ದೂರ ಇಡಬೇಕೆಂದು ಸಹ ಮೈಸೂರಿಗರು ತಯಾರಿ ನಡೆಸಿದ್ದರು. ಕಾಂಗ್ರೆಸ್ ನಾಯಕರಲ್ಲೇ ಮೂಡದ ಒಮ್ಮತ, ಪ್ರಚಾರದ ಕೊರತೆ, ಜೆಡಿಎಸ್ ನಾಯಕರ ಅಸಮಾಧಾನ ಇವೆಲ್ಲವೂ ವಿಜಯ್ ಶಂಕರ್ ಸೋಲಿಗೆ ಕಾರಣವಾಗಿದೆ ಎನ್ನಬಹುದು.