ವೈಭವದ ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು
ಮೈಸೂರು, ಆಗಸ್ಟ್.23: ಮಂತ್ರಾಲಯದಲ್ಲಿ ಆಗಸ್ಟ್ 25 ರಂದು ಶನಿವಾರದಿಂದ ರಾಯರ ಆರಾಧನೆ ವಿಜೃಂಭಿಸಲಿದೆ. ಜೊತೆಗೆ ಇದರ ಮೇಲೆ ಏನಾದರೂ ಪರಿಣಾಮ ಬೀರಬಹುದೆಂಬ ಗೊಂದಲಗಳು ಶುರುವಿಟ್ಟುಕೊಂಡಿದೆ. ರಾಯರ ಆರಾಧನೆಗೆ ಹೇಗೆ ನಡೆಯುತ್ತಿದೆ? ಮೂಲವೃಂದಾವನದ ಸ್ಥಿತಿ ಹೇಗಿದೆ? ಆರಾಧನೆಗೆ ಹೋಗಬಹುದೇ ಎಂಬ ಹಲವು ಗೊಂದಲಗಳಿಗೆ ಇಲ್ಲಿದೆ ಉತ್ತರ...
ಮಂತ್ರಾಲಯದ ರಾಯರ ಮೂಲ ಬೃಂದಾವನದ ಸ್ಥಳದಲ್ಲಿರುವ ತುಂಗಾ - ಭದ್ರಾ ನದಿ ತುಂಬಿ ಹರಿಯುತ್ತಿದೆ. ಆದರೆ ಅಪಾಯದ ಮಟ್ಟದಲ್ಲಿಲ್ಲ ಎಂಬುದು ರಾಯರ ಮಠದ ಆಡಳಿತ ಮಂಡಳಿಯ ಸ್ಫಷ್ಟನೆ. ನೆರೆ, ಪ್ರವಾಹದ ಎಫೆಕ್ಟ್ ಇಲ್ಲಿ ತಟ್ಟುವುದಿಲ್ಲ. ಜನರು ಪ್ರತಿ ವರುಷದಂತೆ ಲಕ್ಷೋಪಾದಿಯಲ್ಲಿ ಹರಿದುಬರುತ್ತಾರೆ.
ನದಿ ತುಂಬಿದ್ದು, ಜನರಿಗೆ ನದಿಯ ಬಳಿ ತೆರಳದಂತೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಪೊಲೀಸ್ ಭದ್ರತೆ ಸಹ ನೀಡಲಾಗಿದೆ ಎಂದು ಮಂತ್ರಾಲಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಮನೆಯಲ್ಲೇ ರಾಘವೇಂದ್ರ ಸ್ವಾಮಿ ಆರಾಧನೆ ಮಾಡೋದು ಹೇಗೆ?
ಆರಾಧನೆ ಸಂದರ್ಭ ಭಕ್ತರ ಸಂಖ್ಯೆ ಹೆಚ್ಚುವ ಕಾರಣದಿಂದಾಗಿ 20 ಈಜುಗಾರರನ್ನು ನದಿ ದಡದಲ್ಲಿ ನಿಯೋಜಿಸಲು ಹಾಗೂ ಅಗತ್ಯ ಬಿದ್ದಲ್ಲಿ ಬಳಕೆಗೆ ತೆಪ್ಪಗಳ ವ್ಯವಸ್ಥೆ ಮಾಡಲು ಶ್ರೀಮಠ ತೀರ್ಮಾನ ಕೈಗೊಂಡಿದೆ.
ಮಂತ್ರಾಲಯದಲ್ಲಿ ಈಗ ಗುರು ರಾಘವೇಂದ್ರ ರಾಯರ 347ನೇ ಆರಾಧನ ಮಹೋತ್ಸವ ಸಂಭ್ರಮ ಮನೆಮಾಡಿದೆ. ಆ.25ರಿಂದ 31ರವರೆಗೆ ಏಳು ದಿನಗಳ ಕಾಲ ನಡೆಯಲಿರುವ ಸಪ್ತರಾತ್ರೋತ್ಸವಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥರು ಧ್ವಜಾರೋಹಣ ಮೂಲಕ ಚಾಲನೆ ನೀಡಿದ್ದಾರೆ.
ಉರುಳು ಸೇವೆಗೆ ಮತ್ತೊಂದು ಹೆಸರು ಗೋಪಾಲಕೃಷ್ಣಾಚಾರ್; ಹೀಗೂ ಇರ್ತಾರೆ!
ರಾಯರ ದರ್ಶನಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರ ದಂಡು ಹರಿದು ಬರುತ್ತಿದೆ. ಭಕ್ತರಿಗಾಗಿ ಮಠದ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಯರ ಆರಾಧನೆ ಅಂಗವಾಗಿ ಸಪ್ತ ರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಗ್ರಂಥಗಳ ಲೋಕಾರ್ಪಣೆ, ಪ್ರವಚನ ಅನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭಗಳು ಶ್ರೀಮಠದ ಪೀಠಾಧಿಪತಿ ಸುಬುದೇಂದ್ರತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ಜರುಗಲಿವೆ.
ಮದುವಣಗಿತ್ತಿಯಂತೆ ಸಿಂಗಾರಗೊಂಡ ಮಂತ್ರಾಲಯ
ನವ ಮದುವಣಗಿತ್ತಿಯಂತೆ ಸಿಂಗಾರಗೊಂಡಿರೋ ನವ ಮಂತ್ರಾಲಯದಲ್ಲಿ ಈಗ ರಾಯರ ಆರಾಧನೆ ನಾದ ಮೊಳಗಿದೆ. ಸಪ್ತರಾತ್ರೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.
ಗೋವು ,ಗಜಾ, ಲಕ್ಷ್ಮೀ ಪೂಜೆ, ಧಾನ್ಯ ಪೂಜೆ ಹಾಗೂ ಪ್ರಭು ಉತ್ಸವ ವಿಜೃಂಭಣೆಯಿಂದ ನಡೆಯುತ್ತಿವೆ. ಧ್ವಜಾರೋಹಣ ಮೂಲಕ ಶ್ರೀಗಳು ಆರಾಧನಾ ಮಹೋತ್ಸವಕ್ಕೆ ಆ.25ಚಾಲನೆ ನೀಡಿದ್ದಾರೆ.
ಮಧ್ಯಾರಾಧನೆ ದಿನ ಸುವರ್ಣ ರಥೋತ್ಸವ ಹಾಗೂ ಉತ್ತರಾರಾಧನೆ ದಿನ ಮಹಾ ರಥೋತ್ಸವ ನಡೆಯಲಿದೆ. ಅಲ್ಲದೆ ಮಠದಲ್ಲಿ ಏಳುದಿನ ಕಾಲ ಪ್ರತಿದಿನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಆ.25ರಂದು ಸಂಜೆ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಆ.27 ಪೂರ್ವಾರಾಧನೆ, 28ರಂದು ಮಧ್ಯಾರಾಧನೆ, 29ರಂದು ಉತ್ತರಾರಾಧನೆ ನಡೆಯಲಿದೆ. ಆ.25 ರಿಂದ 31ರವರೆಗೆ ಸಂಜೆ 6ಕ್ಕೆ ಶ್ರೀ ಮಠದ ಪೂಜಾ ಮಂದಿರದಲ್ಲಿ ಹುಬ್ಬಳ್ಳಿಯ ವಿದ್ವಾನ್ ಶ್ರೀಹರಿ ಆಚಾರ್ಯ ವಾಲ್ವೇಕರ್ ಹಾಗೂ ಪ್ರೊ. ಶ್ರೀಮದ್ ಭಾಗವತ ಸಪ್ತಾಹ ಜರುಗಲಿದ್ದು, 25ರಂದು ಯಜುರ್ವೇದ ನಿತ್ಯ ನೂತನ ಉಪಕರ್ಮ ನಡೆಯಲಿವೆ.
ಪ್ರಶಸ್ತಿ ಪ್ರಧಾನ ಸಮಾರಂಭ
ಪ್ರತಿ ವರುಷದಂತೆ ಈ ಬಾರಿಯೂ ಸಹ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಆ.27ರ ಕೊನೆಯ ದಿನದಂದು ಸಂಜೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸರಾದ ತಿರುಪತಿಯ ಕೆ.ಇ.ದೇವನಾಥನ್, ಧಾರವಾಡದ ಗೋವಿಂದಾಚಾರ್ಯ ವಿ.ನವಲಗುಂದ, ಸಾಮಾಜಿಕ ಸೇವೆಯಡಿ ಬೆಂಗಳೂರಿನ ನಾ.ಕೆ.ಶ್ರೀಧರರಾವ್, ಬಳ್ಳಾರಿಯ ಡಾ.ಬಿ.ಕೆ ಶ್ರೀನಿವಾಸಮೂರ್ತಿ ಅವರಿಗೆ ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಇದೇ ವೇಳೆ ಶ್ರೀಮಠದಿಂದ ಹೊರತಂದ 6 ಗ್ರಂಥಗಳ ಬಿಡುಗಡೆ ಸಮಾರಂಭ ಮತ್ತು 28ರಂದು ತಿರುಪತಿಯ ಟಿಟಿಡಿ ಶೇಷವಸ್ತ್ರ ಸಮರ್ಪಣೆ, 29ರಂದು ಮಹಾರಥೋತ್ಸವ ಜರುಗಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.