ರವಿ ಪೂಜಾರಿ ಬಂಧನ: ಮೈಸೂರು ಶಾಸಕರ ಪ್ರಕರಣ ತನಿಖೆ ಸಾಧ್ಯತೆ
ಮೈಸೂರು, ಫೆಬ್ರವರಿ 24: ಭೂಗತ ಜಗತ್ತಿನ ಪಾತಕಿ ರವಿ ಪೂಜಾರಿ ಬಂಧನ ಹಿನ್ನೆಲೆಯಲ್ಲಿ ಮೈಸೂರು ಭಾಗದ ಇಬ್ಬರು ಶಾಸಕರ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಹಾಗೂ ಕೆ.ಆರ್ ನಗರ ಕ್ಷೇತ್ರದ ಶಾಸಕ ಸಾ.ರಾ ಮಹೇಶ್ ಗೆ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಕರೆ ಮಾಡಿದ್ದನು.
ರವಿ ಪೂಜಾರಿ ಭೂಗತ ಲೋಕಕ್ಕೆ ಬಂದಿದ್ದು ಹೇಗೆ? ಆತನ ಹಿನ್ನೆಲೆ ಏನು?
ಈ ಹಿಂದೆ 10 ಕೋಟಿ ರುಪಾಯಿ ನೀಡುವಂತೆ ಬೆದರಿಕೆ ಕರೆಗಳು ಹಾಗೂ ಸಂದೇಶ ಬಂದಿತ್ತು ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದರು. ಈ ಬಗ್ಗೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರಾಗಿದ್ದ ರಾಮಲಿಂಗಾರೆಡ್ಡಿ, ಮತ್ತು ಡಿಜಿ ಹಾಗೂ ಐಜಿಪಿ ನೀಲಮಣಿ ರಾಜು ಅವರಿಗೆ ಶಾಸಕ ತನ್ವೀರ್ ಸೇಠ್ ದೂರು ನೀಡಿದ್ದರು.
2018ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ವಿರುದ್ಧ ಎಚ್ಚರಿಕೆ ನೀಡಿದ್ದರ ಬಗ್ಗೆ ರವಿ ಪೂಜಾರಿ ವಿರುದ್ಧ ಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ಶಾಸಕ ಸಾ.ರಾ ಮಹೇಶ್ ದೂರು ದಾಖಲಿಸಿದ್ದರು. ಹೀಗಾಗಿ ಇಬ್ಬರು ಶಾಸಕರ ಪ್ರಕರಣದ ಬಗ್ಗೆ ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ.
ಭೂಗತ ಪಾತಕಿ ರವಿ ಪೂಜಾರಿ ಸೆನೆಗಲ್ ನಿಂದ ಭಾರತಕ್ಕೆ
ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿಯನ್ನು ನಿನ್ನೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆತರಲಾಗಿದೆ. ರವಿ ಪೂಜಾರಿ ಬಂಧನದಿಂದ ಮೈಸೂರು ಭಾಗದ ಇಬ್ಬರು ಶಾಸಕರು ನಿರಾಳರಾಗಿದ್ದಾರೆ.