ಸಾರಿಗೆ ಇಲಾಖೆಯನ್ನು ಅಕ್ರಮ ಕೈಗಳು ಮುನ್ನಡೆಸುತ್ತಿವೆ: ಶಾಸಕ ವಿಶ್ವನಾಥ್
ಮೈಸೂರು, ಜೂನ್ 27: ನಮ್ಮ ಸಾರಿಗೆ ಇಲಾಖೆಯನ್ನು ಒಬ್ಬ ಸಚಿವರಾಗಲೀ ಅಥವಾ ಆಯುಕ್ತರಾಗಲೀ ನಡೆಸುತ್ತಿಲ್ಲ. ಬದಲಿಗೆ ಕಾಣದ ಅಕ್ರಮ ಸಿಂಡಿಕೇಟ್ ನಿಯಂತ್ರಿಸುತ್ತಿದೆ ಎಂದು ಜೆಡಿಎಸ್ ಮುಖಂಡ ಹಾಗೂ ಶಾಸಕ ಅಡಗೂರು ಎಚ್.ವಿಶ್ವನಾಥ್ ಆರೋಪಿಸಿದರು.
ಮೈಸೂರಿನಲ್ಲಿ ಆಯೋಜಿಸಿದ್ದ ಪತ್ರಕರ್ತ ರವಿ ಪಾಂಡವಪುರ ರಚನೆಯ 'ರೈಟ್ ರೈಟ್...' ಮತ್ತು ' ಅಯ್ಯೋ ದ್ಯಾವ್ರೇ....' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆಯನ್ನು ಒಂದು ಅಕ್ರಮ ಸಿಂಡಿಕೇಟ್ ನಿಯಂತ್ರಿಸುತ್ತಿದೆ. ಇದಕ್ಕೆ ಉದಾಹರಣೆ, ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ನಾಲೆಗೆ ಬಿದ್ದ ಬಸ್ ದುರಂತ. ಸುಸ್ಥಿತಿಯಲ್ಲಿರದ ಸಾವಿರಾರು ಬಸ್ ಗಳು ಈಗಲೂ ಸಂಚರಿಸುತ್ತಿವೆ. ಇದಕ್ಕೆ ಯಾರು ಹೊಣೆ..? ಎಂದು ಪ್ರಶ್ನಿಸಿದರು.
ಪುಸ್ತಕ ರೂಪದಲ್ಲಿ ಸುಳ್ವಾಡಿ ವಿಷ ಪ್ರಸಾದ, ಕನಗನಮರಡಿ ಬಸ್ ದುರಂತ
ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ವಿಷ ಪ್ರಸಾದ ದುರಂತದ ಕುರಿತು ಮಾತನಾಡಿ, ಮನುಷ್ಯನಿಗೆ ದೈವದ ಮೇಲಿರುವ ಭಕ್ತಿಯನ್ನೇ ಅಲ್ಲಾಡಿಸಿದ ಘಟನೆ ಇದು. ಯಾರೋ ಒಬ್ಬರ ಕುತಂತ್ರಕ್ಕೆ ಈಗ ಪ್ರಸಾದವನ್ನು ಅನುಮಾನದಿಂದ ನೋಡುವಂತೆ ಆಗಿದೆ ಎಂದರು.
ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಎರಡೂ ದುರಂತಗಳನ್ನು ಅದ್ಭುತವಾಗಿ ನಿಭಾಯಿಸಿದರು. ಘಟನಾ ಸ್ಥಳಕ್ಕೆ ಸ್ವತಃ ಭೇಟಿ ನೀಡಿ ಪರಿಹಾರ ಕಾರ್ಯಕ್ಕೆ ತ್ವರಿತವಾಗಿ ಆದೇಶಿಸಿದರು. ಮತ್ತೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಂಡರು. ಸುಳ್ವಾಡಿ ಘಟನೆಯ ಸಂದರ್ಭದಲ್ಲೂ ಅತ್ಯಂತ ಮಾನವೀಯವಾಗಿ ಸ್ಪಂದಿಸಿದರು ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿ.ಪಿ.ಕೆ, ಪ್ರೊ.ಎಂ.ಕೃಷ್ಣೇಗೌಡ ಅವರು ರವಿ ಪಾಂಡವಪುರ ಅವರ ಪ್ರಯತ್ನವನ್ನು ಶ್ಲಾಘಿಸಿದರು. ರಾಜ್ಯ ಕಂಡ ಎರಡು ದುರಂತಗಳನ್ನು ದಾಖಲಿಸುವ ಪ್ರಯತ್ನವನ್ನು ರವಿಯವರು ಉತ್ತಮವಾಗಿ ಮಾಡಿದ್ದಾರೆ ಎಂದರು.