ಮೈಸೂರಿನಲ್ಲೊಬ್ಬ ಖತರ್ನಾಕ್ ಕಳ್ಳ : ಪವರ್ ಸ್ಟಾರ್ ಹೆಸರಿನಲ್ಲಿ ವಂಚನೆ
ಮೈಸೂರು, ಜುಲೈ 12 : ಇತ್ತೀಚೆಗೆ ದರ್ಶನ್ ಪಿಎ ಮಾಡಿದ ಲಕ್ಷ ಲಕ್ಷ ಮೋಸದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಮರುಕಳಿಸಿದೆ. ತಾನು ಪವರ್ ಸ್ಟಾರ್ ಪುನೀತ್ ಪಿಎ ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ.
ಪುನೀತ್ ಹೆಸರು ಹೇಳಿಕೊಂಡು ತನ್ನ ತಂಗಿ ಮದುವೆಗೆ ಹಣ ಸಂಗ್ರಹಿಸಿ, ಅದ್ದೂರಿಯಾಗಿ ಮದುವೆ ಮಾಡಿ ನಂತರ ಪರಾರಿಯಾದ ಆ ವ್ಯಕ್ತಿಯ ಹೆಸರು ರವಿ. ಜಿಲ್ಲೆಯ ತಿ.ನರಸೀಪುರದ ಬನ್ನೂರಿನವನು. ಕಳೆದ 20 ವರ್ಷಗಳಿಂದ ಬೆಂಗಳೂರಿನ ವಾಸವಿದ್ದ ಎನ್ನಲಾಗಿದೆ.
ನಗರ ಪಾಲಿಕೆ ಅಧಿಕಾರಿಗಳ ಸೋಗಲ್ಲಿ ನಯವಾಗಿ ವಂಚಿಸಿದ್ದು 10 ಲಕ್ಷ
ಕಳೆದ ವರ್ಷ ಮೈಸೂರು ತಾಲೂಕಿನ ಕುಪ್ಯಾ ಗ್ರಾಮಕ್ಕೆ ಬಂದ ರವಿ ಮೊದಲು ತಮ್ಮ ದೂರದ ಸಂಬಂಧಿಕ ರಮೇಶ್ ಅವರನ್ನು ಪರಿಚಯಿಸಿಕೊಂಡು ಹೊಸ ಬಟ್ಟೆ, ಕೊರಳು ಹಾಗೂ ಕೈಗಳಲ್ಲಿ ಚಿನ್ನದ ಆಭರಣಗಳನ್ನು ಧರಿಸಿ ಶೋ ಆಫ್ ಮಾಡುತ್ತಿದ್ದನು.
ತಾನು ಬೆಂಗಳೂರಿನಲ್ಲಿ ಪುನೀತ್ ರಾಜ್ ಕುಮಾರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ರಮೇಶ್ ಅವರನ್ನು ನಂಬಿಸಿದ್ದನು. ರವಿಯ ಶ್ರೀಮಂತಿಕೆಯ ಮಾತುಗಳನ್ನು ರಮೇಶ್ ನಂಬಿದ್ದಾರೆ. ಇದೇ ವೇಳೆ ರವಿ ತಂಗಿ ಶೃತಿ ಮದುವೆ ಫಿಕ್ಸ್ ಆಗಿದೆ. ಮದುವೆ ಖರ್ಚಿಗೆ ಹಣ ಹೊಂದಿಸಲು ಹಾಕಿದ ಸ್ಕೆಚ್ ಗೆ ಮೊದಲು ಬಲಿಯಾಗಿದ್ದೇ ರಮೇಶ್.
ರಮೇಶ್ ಅವರ ಮಗ ಗಿರೀಶ್ ಗೆ ತನ್ನ ಪ್ರಭಾವ ಬೀರಿ ಕೆಲಸ ಕೊಡಿಸುವ ಆಮಿಷವೊಡ್ಡಿದ ರವಿ ಮದುವೆಗಾಗಿ ಲಕ್ಷಗಟ್ಟಲೇ ಹಣ ಪಡೆದಿದ್ದಾನೆ. ಇದೇ ಅವಧಿಯಲ್ಲಿ ರಮೇಶ್ ಮೂಲಕ ಗುರುಮೂರ್ತಿ ಎಂಬುವರನ್ನು ಪರಿಚಯಿಸಿಕೊಂಡು, ಪುನೀತ್ ರಾಜ್ ಕುಮಾರ್ ಕಾರಿಗೆ ಡ್ರೈವರ್ ಮಾಡುವುದಾಗಿ ಆಮಿಷ ತೋರಿಸಿ ಸುಮಾರು 50 ಗ್ರಾಂ ಚಿನ್ನದ ಸರ ಪಡೆದಿದ್ದಾನೆ.
ಆಗಾಗ ಪುನೀತ್ ರಾಜ್ ಕುಮಾರ್ ಹೆಸರು ಹೇಳುತ್ತಾ, ಚಿತ್ರರಂಗದ ಕೆಲವು ವ್ಯವಹಾರದ ಆಸೆ ತೋರಿಸಿ ರವಿ ಟ್ರಾವಲ್ಸ್ ಮಾಲೀಕ ಜೆರ್ರಿ ಎಂಬವರ ಬಳಿ ಒಂದು ಲಕ್ಷ ಪಡೆದಿದ್ದಾನೆ.
ಕಲ್ಯಾಣಮಂಟಪಕ್ಕೆ ಹಣ ನೀಡಲು ರಮೇಶ್ ಪುತ್ರ ಗಿರೀಶ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆಸಿ, ಆತನ ಚೆಕ್ ಗಳನ್ನು ನೀಡಿ ಟೋಪಿ ಹಾಕಿದ್ದಾನೆ. ಇಷ್ಟಕ್ಕೇ ನಿಲ್ಲದ ರವಿಯ ಕುತಂತ್ರ ವಿಡಿಯೋಗ್ರಾಫರ್ ಕಿರಣ್ ಬಳಿಯೂ ಮುಂದುವರೆದಿದೆ. ಪುನೀತ್ ಬಳಿ ಆರ್ಡರ್ ಗಳನ್ನು ಕೊಡಿಸುವ ಆಮಿಷ ತೋರಿಸಿ ಮದುವೆ ಕವರೇಜ್ ಮಾಡಿಸಿಕೊಂಡು ಕಿರಣ್ ಗೆ ಕೈ ಕೊಟ್ಟಿದ್ದಾನೆ.
ಫ್ಲವರ್ ಡೆಕೋರೇಷನ್ ಮಾಡುವ ಪವನ್ ಎಂಬುವವರಿಗೂ ಇದೇ ಕಹಿ ಅನುಭವವಾಗಿದೆ. ಪುನೀತ್ ರಾಜ್ ಕುಮಾರ್ ಹೆಸರು ಬಳಸಿದ ರವಿ, ನಾಲ್ಕಾರು ಮಂದಿಯಿಂದ ಲಕ್ಷಾಂತರ ರೂ. ಪಡೆದು ತನ್ನ ತಂಗಿ ಮದುವೆ ಮುಗಿಯುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾನೆ.
ತಂಗಿಯ ಮದುವೆ ಆಮಂತ್ರಣ ಪತ್ರದಲ್ಲಿಯೂ ಪುನೀತ್ ರಾಜ್ ಕುಮಾರ್ ಅವರಿಗೆ ಚಿಕ್ಕಂದಿನಲ್ಲಿ ಕರೆಯುತ್ತಿದ್ದ ಲೋಹಿತ್ ಹೆಸರು ಹಾಕಿಸಿ ಮಂಕುಬೂದಿ ಎರಚಿದ್ದಾನೆ. ಮದುವೆ ನಂತರ ರವಿ ನಾಪತ್ತೆಯಾದಾಗಲೇ ಎಲ್ಲರಿಗೂ ತಾವು ಮೋಸ ಹೋಗಿರುವುದು ಖಚಿತವಾಗಿದೆ.
ಬೆಂಗಳೂರಿನ ಮನೆಯಲ್ಲೂ ರವಿ ಕೈಗೆ ಸಿಗುತ್ತಿಲ್ಲ. ಮೈಸೂರಿನತ್ತ ತಲೆಯೂ ಹಾಕುತ್ತಿಲ್ಲ. ರವಿಯ ಶೋ ಆಫ್ ಮಾತಿಗೆ ಬೆರಗಾಗಿ ಹಣ ಕೊಟ್ಟವರು ಆಕಾಶ ನೋಡುವಂತಾಗಿದೆ. ಪುನೀತ್ ರಾಜ್ ಕುಮಾರ್ ಗೂ ಈತನಿಗೂ ಸಂಬಂಧ ಇದೆಯೋ ಇಲ್ಲವೋ ಗೊತ್ತಿಲ್ಲ? ಆದರೆ ರವಿ ಮಾತ್ರ ಪುನೀತ್ ಹೆಸರು ಬಳಸಿ ವಂಚಿಸಿರುವುದು ಸತ್ಯ.