ಪಡಿತರವನ್ನೂ ಮನೆ ಬಾಗಿಲಿಗೆ ಕೊಡಲಿದೆ ಮೈಸೂರು ಜಿಲ್ಲಾಡಳಿತ
ಮೈಸೂರು, ಏಪ್ರಿಲ್ 03: ಕೊರೊನಾ ವೈರಸ್ ನಿಂದಾಗಿ ಲಾಕ್ ಡೌನ್ ವಿಧಿಸಿ, ಜನರ ಹಾಗೂ ವಾಹನಗಳ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಜನರು ಓಡಾಡುವುದನ್ನು ನಿಯಂತ್ರಿಸಲು ಎರಡು ದಿನಗಳಿಂದೀಚೆಗೆ ತರಕಾರಿ, ದಿನಸಿಯನ್ನು ಮನೆ ಬಾಗಿಲಿಗೇ ತಂದು ಕೊಡುವ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರಿನಲ್ಲಿ ಶುರುವಾಯ್ತು ಮನೆ ಮನೆಗೆ ಹಣ್ಣು, ತರಕಾರಿ ಪೂರೈಕೆ
ಇದೀಗ ತರಕಾರಿ, ದಿನಸಿ ಜೊತೆಗೆ ಪಡಿತರವನ್ನೂ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಅಡಿಯಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲಿ ಕಾರ್ಯರೂಪಕ್ಕೆ ತರುತ್ತಿದ್ದು, ಇಂದು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗುವ ಅವಶ್ಯಕತೆ ಇಲ್ಲ. ಬಿಪಿಎಲ್, ಎಪಿಎಲ್ ಕಾರ್ಡ್ದಾರರಿಗೆ ಪಡಿತರವನ್ನು ಮನೆ ಮನೆಗೆ ನೀಡಲಾಗುವುದು. ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಪಡಿತರ ವಿತರಣೆಗೆ ಚಾಲನೆ ನೀಡಲಾಗಿದೆ. ಪಡಿತರದಲ್ಲಿ 5 ಕೆ.ಜಿ ಅಕ್ಕಿ, 2 ಕೆ.ಜಿ ಗೋಧಿಯನ್ನು ವಿತರಣೆ ಮಾಡಲಾಗುವುದು. ಏಪ್ರಿಲ್, ಮೇ ಎರಡೂ ತಿಂಗಳ ಪಡಿತರ ಒಂದೇ ಬಾರಿಗೆ ನೀಡಲಾಗುವುದು. ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಕಾರ್ಯಕ್ರಮ ಇದಾಗಿದ್ದು, 7 ಲಕ್ಷಕ್ಕು ಹೆಚ್ಚು ಜನರಿಗೆ ಪಡಿತರ ವಿತರಣೆ ಆಗಲಿದೆ.
ಪಡಿತರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ರಾಮದಾಸ್, ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಭಾಗಿಯಾಗಿದ್ದರು.