ನಾಡಹಬ್ಬ ಮೈಸೂರು ದಸರಾಕ್ಕೆ ರಂಗೋತ್ಸವದ ಮೆರಗು..
ಮೈಸೂರು, ಸೆಪ್ಟೆಂಬರ್ 28: ನಾಡಹಬ್ಬ ಮೈಸೂರು ದಸರಾ ಅಂದರೆ ಸಾಂಸ್ಕೃತಿಕ ಲೋಕದ ಸಡಗರ. ಅದಕ್ಕೆ ಇನ್ನಷ್ಟು ಮೆರಗು ನೀಡಲೆಂದೇ ರಂಗಾಯಣ ನವರಾತ್ರಿ ರಂಗೋತ್ಸವಕ್ಕೆ ವೇದಿಕೆ ಸಿದ್ಧಗೊಳಿಸಿದೆ. ಅತ್ತ ಚಾಮುಂಡಿ ಬೆಟ್ಟದಲ್ಲಿ ದಸರಾಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಇತ್ತ ನವರಾತ್ರಿ ರಂಗೋತ್ಸವಕ್ಕೆ ಚಾಲನೆ ಸಿಗಲಿದೆ.
ಸೆ.29ರಿಂದ ಅ.7ರವರೆಗೆ ನಡೆಯಲಿರುವ ರಂಗೋತ್ಸವದಲ್ಲಿ ಸೆ.29ರ ಸಂಜೆ 6 ಗಂಟೆಗೆ ರಂಗಾಯಣದ ಭೂಮಿಗೀತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅಂದು ರಂಗಾಯಣ ತಂಡದಿಂದ ಕುವೆಂಪು ವಿರಚಿತ ಶೂದ್ರ ತಪಸ್ವಿ ನಾಟಕ ಪ್ರದರ್ಶನಗೊಳ್ಳಲಿದೆ. ಅಕ್ಟೋಬರ್ 7ರವರೆಗೂ ನಾಟಕಗಳು ಮುಂದುವರೆಯುತ್ತವೆ.
ಮೈಸೂರು ದಸರಾದಲ್ಲಿ ಧರೆಗಿಳಿಯಲಿದೆ ಪುಷ್ಪಲೋಕ; ಈ ಬಾರಿ ವಿಶೇಷವೇನು?
ಪ್ರತಿದಿನದ ನಾಟಕ ಪ್ರದರ್ಶನದ ವೇಳೆ ಒಬ್ಬೊಬ್ಬ ರಂಗಭೂಮಿಯ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಎಚ್.ವಿ.ವೆಂಕಟಸುಬ್ಬಯ್ಯ, ಎಂ.ಎಸ್.ವೆಂಕಟರಾಮ್, ಪುರುಷೋತ್ತಮ ತಲವಾಟ, ಹಿರಿಯ ರಂಗನಟ ಬಸಯ್ಯಸ್ವಾಮಿ ಹೆಬ್ಬಾಳಮಠ, ತತ್ವಪದ ಗಾಯಕ ಹುಸೇನ್ಸಾಬ್ ಹ.ಶರೀಫನವರ್, ಹಿರಿಯ ರಂಗಕರ್ಮಿ ಚಂಡೆ ನಾಗರಾಜ್, ನೀಲಮ್ಮ, ನಾಗವೇಣಿ ಶಂಕರ್, ಏಕಪ್ಪ ಆರ್.ಚಿತ್ರಗಾರ ಇವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.
ಇದೆಲ್ಲದರ ನಡುವೆ ರಂಗಾಯಣದ ಆವರಣದಲ್ಲಿ ಕಲಾವಿದರಾದ ಅಶೋಕ್ ಮನ್ಸೂರ್, ಪ್ರಮೋದ್ ಸ್ಟೀಫನ್ ಮತ್ತು ನವೀನ್ಕುಮಾರ್ ಅವರ ಕಲಾಕೃತಿಗಳನ್ನು ಚೈತನ್ಯ ಕ್ಷಣ ಶೀರ್ಷಿಕೆಯಡಿ ಪ್ರದರ್ಶನವೂ ನಡೆಯಲಿದೆ.