ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್; ರಂಗಾಯಣ ನಿರ್ದೇಶಕರ ಅಸಮಾಧಾನ
ಮೈಸೂರು, ಸೆಪ್ಟೆಂಬರ್ 26: ಸರ್ಕಾರದ ನಿಯಮ ಪಾಲಿಸಿ ಪ್ರದರ್ಶನ ನೀಡುತ್ತೇವೆ. ಸರ್ಕಾರ 10 ಕೋಟಿ ರೂ. ಅನುದಾನ ನೀಡಿರುವುದು ಮಸಾಲೆ ದೋಸೆ ತಿನ್ನಲು ಅಲ್ಲ. ಕಲಾವಿದರಿಗೆ ಅನುಕೂಲ ಮಾಡಲು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾರಿ ರಂಗಾಯಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಿರುವುದಕ್ಕೆ ಅಡ್ಡಂಡ ಕಾರ್ಯಪ್ಪ ಆಕ್ರೋಶ ವ್ಯಕ್ತಪಡಿಸಿದ್ದು, ಮದುವೆ ಮಾಡಲು ಸರ್ಕಾರ ಅವಕಾಶ ನೀಡಿದೆ. ಸರ್ಕಾರದ ನಿಯಮ ಪಾಲಿಸಿ ಪ್ರದರ್ಶನ ನೀಡುತ್ತೇವೆ. ಅರಮನೆ ವೇದಿಕೆಯಲ್ಲಿ ಕಾರ್ಯಕ್ರಮ ನೀಡಲು ಅವಕಾಶ ನೀಡಿ ಎಂದಿದ್ದಾರೆ.
ಈ ಬಾರಿಯ ದಸರಾ ಉದ್ಘಾಟಿಸಲಿದ್ದಾರಾ ಡಾ.ಸಿ.ಎನ್ ಮಂಜುನಾಥ್?
ಪ್ರತಿ ಬಾರಿ ನವರಾತ್ರಿಯಲ್ಲಿ ರಂಗಾಯಣ ರಂಗು ಪಡೆಯುತ್ತಿತ್ತು. ದಸರಾ ಮಹೋತ್ಸವದ ಒಂಬತ್ತು ದಿನಗಳ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದೆವು. ನಮಗೂ ಪ್ರದರ್ಶನ ನೀಡಲು ಅವಕಾಶ ನೀಡಿ. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಲಾವಿದರಿಗೆ ಸಂಭಾವನೆ ದೊರೆಯುತ್ತದೆ ಎಂದು ಮನವಿ ಮಾಡಿದ್ದಾರೆ.
ಕಲಾವಿದರಿಗೆ ಅನುಕೂಲ ಮಾಡಿಕೊಡುವುದಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಾರ್ಯಕ್ರಮ ಮಾಡಿದರೆ ಒಳ್ಳೆಯದು. ಎಲ್ಲಾ ಕಲಾವಿದರ ಬೆಂಬಲಕ್ಕೆ ರಂಗಾಯಣವಿದೆ. ಮೈಸೂರು ಹಬ್ಬ ನಡೆಸಲು ಪಾಲಿಕೆ ಚಿಂತನೆ ಮಾಡಿರುವುದು ಒಳ್ಳೆಯದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂಬತ್ತು ದಿನಗಳು ವಿವಿಧ ಕಾರ್ಯಕ್ರಮ ಆಯೋಜನೆ ಮಾಡಿದರೆ ಕಲಾವಿದರಿಗೆ ನೆರವಾಗಲಿದೆ. ರಂಗಾಯಣ ಸದಾ ಇಂತಹ ಕಾರ್ಯಕ್ರಮಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.