ನ್ಯೂನತೆ ಮೀರಿ ಸಾಧನೆ ತೋರಿದ ಮೈಸೂರಿನ ವಿಶೇಷ ಚೇತನ ವಿದ್ಯಾರ್ಥಿನಿಯರು
ಮೈಸೂರು, ಆಗಸ್ಟ್ 11: ಮನೋಬಲವೊಂದಿದ್ದರೆ ಸಾಧನೆ ಎನ್ನುವುದು ಕೈಗೆಟುಕದ ಸಂಗತಿಯೇನಲ್ಲ. ಇದಕ್ಕೆ ನಿದರ್ಶನದಂತಿದ್ದಾರೆ ಇಲ್ಲಿನ ರಂಗರಾವ್ ಸ್ಮಾರಕ ವಿಶೇಷ ಚೇತನರ ಶಾಲೆಯ ಮಕ್ಕಳು.
ನಿನ್ನೆಯಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಎಲ್ಲೆಲ್ಲೂ ಮಕ್ಕಳ ಅಂಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ನಡುವೆ ಇಲ್ಲಿನ ರಂಗರಾವ್ ಸ್ಮಾರಕ ವಿಶೇಷ ಚೇತನರ ಶಾಲೆಯು ಈ ಬಾರಿಯೂ ಉತ್ತಮ ಸಾಧನೆ ಮಾಡಿದೆ. ದೈಹಿಕ ನ್ಯೂನತೆ ಎಂದಿಗೂ ಸಾಧನೆಗೆ ಅಡ್ಡಿಯಾಗದು ಎಂದು ಇಲ್ಲಿನ ವಿದ್ಯಾರ್ಥಿನಿಯರು ತೋರಿಸಿಕೊಟ್ಟಿದ್ದಾರೆ.
ಶೇ 92 ಪಡೆದ ಶಾಲೆಯ ವಿದ್ಯಾರ್ಥಿನಿ
ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶಾಲೆಯು ಶೇ 90ರಷ್ಟು ಫಲಿತಾಂಶ ಸಾಧಿಸಿದ್ದು, ಇಲ್ಲಿನ ವಿದ್ಯಾರ್ಥಿನಿ ಕೆ.ಪಿ. ನಂದಿನಿ ಶೇ 92% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಶಾಲೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾದ 11 ವಿದ್ಯಾರ್ಥಿಗಳಲ್ಲಿ, ಇಬ್ಬರು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ನಾಲ್ವರು ಪ್ರಥಮ ದರ್ಜೆ ಮತ್ತು ಮೂವರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎರಡು ವಿದ್ಯಾರ್ಥಿಗಳು ನಪಾಸಾಗಿದ್ದಾರೆ.
ಎಸ್ಎಸ್ಎಲ್ಸಿ ಫಲಿತಾಂಶ: ಪ್ರೇಕ್ಷಾ ಹಾಗೂ ಮನು ಮೈಸೂರು ಜಿಲ್ಲೆಗೆ ಪ್ರಥಮ
ಅಂಧ ಬಾಲಕಿಯರಿಗೆ ಉಚಿತ ವಸತಿ ಶಾಲೆ
ಕರ್ನಾಟಕ ಸರ್ಕಾರದ ವಿಶೇಷ ಮಕ್ಕಳ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಬೆಂಬಲದಿಂದ ನಡೆಸಲಾಗುವ ಈ ಶಾಲೆಯು ಅಂಧ ಬಾಲಕಿಯರಿಗೆ ಸಂಪೂರ್ಣ ಉಚಿತ ವಸತಿ ಶಾಲೆಯಾಗಿದ್ದು, ಇಲ್ಲಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತದೆ. ವಿದ್ಯಾರ್ಥಿಗಳ ಕುರಿತು ಮಾತನಾಡಿದ ಎನ್ಆರ್ ಸಮೂಹದ ಅಧ್ಯಕ್ಷ ಆರ್. ಗುರು, "ಅಂಧ ವಿದ್ಯಾರ್ಥಿಗಳನ್ನು ಸ್ವತಂತ್ರ ಜೀವನ ಸಾಗಿಸುವಷ್ಟು ಸಬಲರನ್ನಾಗಿ ಮಾಡುವುದೇ ಈ ಶಾಲೆಯ ಮುಖ್ಯ ಗುರಿ" ಎಂದರು.
ಮಕ್ಕಳ ಸಾಧನೆಗೆ ಶಾಲೆಯ ಬೆಂಬಲ
ಹಿಂದಿನ ಎಲ್ಲಾ ವರ್ಷಗಳಂತೆ ಈ ವರ್ಷವೂ ಮಕ್ಕಳು ಯಶಸ್ಸು ಪಡೆದಿದ್ದಾರೆ. ಇದು ನಮಗೆ ಅತ್ಯಂತ ಹೆಮ್ಮೆ ಮತ್ತು ಸಂತಸದ ವಿಚಾರ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಎಲ್ಲಾ ಪ್ರಯತ್ನಗಳಲ್ಲಿ ಅತ್ಯುತ್ತಮ ಸಾಧನೆ ಮಾಡಲಿ ಎಂದು ಹಾರೈಸುತ್ತೇವೆ ಮತ್ತು ನಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನೂ ನಾವು ಮುಂದೆಯೂ ನೀಡುತ್ತೇವೆ" ಎಂದು ಹೇಳಿದರು.
SSLC Result: ಆಟೋ ಚಾಲಕನ ಮಗ ದಾವಣಗೆರೆ ಜಿಲ್ಲೆಗೆ ಪ್ರಥಮ
ವಿದ್ಯಾರ್ಥಿನಿ ನಂದಿನಿ ಮಾತು
ಎಸ್ ಎಸ್ ಎಲ್ ಸಿಯಲ್ಲಿ ಶೇ. 92 ಅಂಕ ಪಡೆದುಕೊಂಡಿರುವ ವಿದ್ಯಾರ್ಥಿನಿ ನಂದಿನಿ ಕೆ.ಪಿ.ನಂದಿನಿ ಮಾತನಾಡಿ, "ಈ ಶಾಲೆಯಲ್ಲಿ ಓದುತ್ತಿರುವುದು ನನಗೆ ಹೆಮ್ಮೆಯ ವಿಚಾರ. ಶಾಲೆಯ ಸಂಪೂರ್ಣ ಪ್ರೋತ್ಸಾಹ, ಮಾರ್ಗದರ್ಶನ ಇಲ್ಲದಿದ್ದಲ್ಲಿ ನಾನು ಇಂದು ಈ ಸಾಧನೆ ಮಾಡಲಾಗುತ್ತಿರಲಿಲ್ಲ. ನಾನು ಇನ್ನೂ ಚೆನ್ನಾಗಿ ಓದುತ್ತೇನೆ" ಎಂದು ಸಂತಸ ವ್ಯಕ್ತಪಡಿಸಿದರು.