ಮದ್ಯದ ಅಂಗಡಿ ತೆರವುಗೊಳಿಸಲು ಹೀಗೆ ಮಾಡಿದ ರಮ್ಮನಹಳ್ಳಿ ಗ್ರಾಮಸ್ಥರು
ಮೈಸೂರು, ಫೆ.14: ಮೈಸೂರು ತಾಲೂಕು ರಮ್ಮನಹಳ್ಳಿ ಗ್ರಾಮದಲ್ಲಿ ವಿರೋಧದ ನಡುವೆಯೂ ತೆರೆಯಲಾಗಿದ್ದ ಬಾರನ್ನು ಗ್ರಾಮಸ್ಥರೆಲ್ಲ ಸೇರಿ ಮುಚ್ಚಿಸಿದ ಘಟನೆ ಗುರುವಾರ ನಡೆದಿದೆ. ಈ ಮೂಲಕ ಗ್ರಾಮಸ್ಥರೆಲ್ಲರೂ ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಲು ಪಣತೊಟ್ಟಿದ್ದಾರೆ.
ಕೆಲದಿನಗಳ ಹಿಂದೆ ಗ್ರಾಮಸ್ಥರೆಲ್ಲ ಸೇರಿ ಬಾರನ್ನು ಮುಚ್ಚಿಸಿದ್ದರು. ಆದರೆ ಬಾರ್ ಮಾಲೀಕರು ಪೊಲೀಸರ ನೆರವಿನೊಂದಿಗೆ ನಿನ್ನೆ ಬಾರನ್ನು ತೆರೆದು ಮದ್ಯ ಮಾರಾಟ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ರಮ್ಮನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಲ್ಲದೇ ಬಾರ್ ಗೆ ಮುತ್ತಿಗೆ ಹಾಕಿ ಬಾಗಿಲು ಮುಚ್ಚಿಸುವಲ್ಲಿ ಯಶಸ್ವಿಯಾದರು.
ಪಿಯುಸಿ ಓದಿ ಮೈಸೂರಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದರು ಈ ನಕಲಿ ವೈದ್ಯರು
ರಮ್ಮನಹಳ್ಳಿ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಉಗ್ರನರಸಿಂಹ ವೈನ್ ಸ್ಟೋರ್ ನಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಗ್ರಾಮದ ಬಹುತೇಕ ಪುರುಷರು ಮದ್ಯವ್ಯಸನಿಗಳಾಗಿದ್ದಾರೆ. ಇದರಿಂದ ದುಡಿದ ಹಣವೆಲ್ಲ ಕುಡಿತಕ್ಕೆ ಖರ್ಚಾಗಿ ಸಂಸಾರಗಳು ಬೀದಿಗೆ ಬೀಳುತ್ತದೆ. ಈ ವೈನ್ ಸ್ಟೋರ್ ನಲ್ಲಿ ಮಾರಾಟ ಮಾಡುವ ಮದ್ಯ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಆರೋಪಿಸಲಾಗಿದೆ.
ಈ ಮದ್ಯವನ್ನು ಕುಡಿದು ಸಾಕಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗಿ ಕೆಲವರು ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಸಂಸಾರಗಳು ಬೀದಿಗೆ ಬೀಳಲು ನಮ್ಮ ಗ್ರಾಮದಲ್ಲಿ ಇರುವ ವೈನ್ ಸ್ಟೋರ್ ಕಾರಣ ಎಂದು ಪ್ರತಿಭಟನಾ ನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ ತಮ್ಮ ಗೋಳು ತೋಡಿಕೊಂಡರು.
ವೈನ್ ಸ್ಟೋರ್ ನಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಹರಡಿ ಅನೈರ್ಮಲ್ಯ ಉಂಟು ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಗ್ರಾಮ ಪಂಚಾಯಿತಿ ವತಿಯಿಂದ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ವೃದ್ಧೆಗೆ ಹೊಡೆದು ಚಿನ್ನದ ಸರ ದೋಚಿದ್ದವನಿಗೆ ಏಳು ವರ್ಷ ಸಜಾ
ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಹಾಗೂ ಅಬಕಾರಿ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸುವ ಪ್ರಯತ್ನ ನಡೆಸಿದರು. ಆದರೆ ಇದಕ್ಕೆ ಬಗ್ಗದ ರಮ್ಮನಹಳ್ಳಿ ಗ್ರಾಮಸ್ಥರು ಯಾವುದೇ ಕಾರಣಕ್ಕೂ ವೈನ್ ಸ್ಟೋರ್ ನಮ್ಮ ಗ್ರಾಮದಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ. ಇಲ್ಲಿಂದ ಬೇರೆಡೆ ಸ್ಥಳಾಂತರ ಆಗಲೇಬೇಕು ಎಂದು ಪಟ್ಟು ಹಿಡಿದರು. ಗ್ರಾಮಸ್ಥರ ವಿರೋಧ ಹಾಗೂ ಪ್ರತಿಭಟನೆಗೆ ಮಣಿದ ಬಾರ್ ಸಿಬ್ಬಂದಿಗಳು ವೈನ್ ಸ್ಟೋರ್ ಗೆ ಬಾಗಿಲು ಹಾಕಿ ತೆರಳಿದರು.
ಇಡೀ ಗ್ರಾಮದಲ್ಲಿ ಮುಖಂಡರೆಲ್ಲ ಸೇರಿ ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂಬ ಪಣತೊಟ್ಟಿದ್ದಾರೆ. ಇದಕ್ಕಾಗಿ ಯಾರೇ ಮದ್ಯಪಾನ ಮಾಡಲು ತೆರಳಿದರೆ ಅವರಿಗೆ ದಂಡ ವಿಧಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ.