ಅಯೋಧ್ಯೆಗೂ ಮುನ್ನ 'ಸಿದ್ದು' ಹುಟ್ಟೂರಿನಲ್ಲಿ ಶ್ರೀರಾಮನ ದರ್ಶನ
ಮೈಸೂರು, ಏಪ್ರಿಲ್ 18: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಸೋಮವಾರ (ಏ.19) ದಂದು ಮನೆಮನೆಯಲ್ಲೂ ರಾಮಜಪ ನಡೆಯಲಿದೆ.
ಅಯೋಧ್ಯೆಯ ರಾಮಮಂದಿರಕ್ಕೆ ನಿಧಿ ಸಂಗ್ರಹ ಅಭಿಯಾನ ನಡೆಯುತ್ತಿದ್ದ ವೇಳೆ ತಮ್ಮೂರಿನಲ್ಲೂ ರಾಮಮಂದಿರ ನಿರ್ಮಾಣ ಆಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸ್ವಗ್ರಾಮದಲ್ಲಿ ರಾಮ ಮಂದಿರ ಸೋಮವಾರ ಉದ್ಘಾಟನೆ ಆಗಲಿದೆ.
ಈ ಹಿನ್ನೆಲೆಯಲ್ಲಿ ಇಡೀ ಊರು ಸಡಗರದಿಂದ ಕಾಯುತ್ತಿದ್ದು, ರಾಮಜಪ ನಡೆಯಲಿದೆ ಎಂದು ಗೊತ್ತಾಗಿದೆ. ಅಯೋಧ್ಯೆಗೂ ಮುನ್ನ ಸಿದ್ದರಾಮನ ಹುಂಡಿಯಲ್ಲಿ ಶ್ರೀರಾಮನ ದರ್ಶನವಾಗಲಿದ್ದು, ಸೋಮವಾರ ಮನೆ, ಮನೆಯಲ್ಲೂ ರಾಮನ ಜಪ ನಡೆಯಲಿದೆ.
ರಾಮಮಂದಿರ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಲಿದ್ದು, ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರ ಕಾಳಜಿಯಿಂದ ರಾಮನ ದೇವಾಲಯ ತಲೆ ಎತ್ತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ನಿಧಿ ಸಂಗ್ರಹ ಮಾಡಲು ಬಂದಿದ್ದ ಯುವಕರಿಗೆ ಬುದ್ದಿ ಹೇಳಿ ಕಳುಹಿಸಿದ್ದ ಸಿದ್ದರಾಮಯ್ಯ, ಹುಟ್ಟೂರಿನಲ್ಲಿ ಪೂರ್ಣಗೊಂಡಿರುವ ಮಂದಿರದಲ್ಲಿ 'ರಾಮ' ದರ್ಶನ ಪಡೆಯಲು ಸೋಮವಾರ ಹುಟ್ಟೂರು ಸಿದ್ದರಾಮನಹುಂಡಿಗೆ ಆಗಮಿಸಲಿದ್ದಾರೆ.
ಅಲ್ಲದೇ ನೂತನವಾಗಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರಲ್ಲೇ ಗ್ರಾಮಸ್ಥರು ರಾಮನವಮಿ ದಿನದಂದು ರಾಮನ ಆರಾಧನೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.