ವಿದ್ಯಾಶ್ರೀ ಯೋಜನೆಗೆ ಸುತ್ತೂರು ರಾಜೇಂದ್ರ ಶ್ರೀ ಪ್ರೇರಣೆ: ಸಿಎಂ
ಮೈಸೂರು, ಆಗಸ್ಟ್ 30: ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು ಹಾಸ್ಟೆಲ್ ಗಳನ್ನು ಆರಂಭಿಸಿದರು. ಅವರ ಪ್ರೇರಣೆಯಿಂದ ವಿದ್ಯಾಶ್ರೀ ಯೋಜನೆ ಜಾರಿಗೆ ತರಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳಲ್ಲಿ ಉಳಿದುಕೊಂಡ ವಿದ್ಯಾಭ್ಯಾಸ ಮಾಡುವುದು ಕಷ್ಟವಾಗಿದ್ದ ಕಾಲದಲ್ಲಿ ಶ್ರೀಗಳು ಉಚಿತ ವಿದ್ಯಾರ್ಥಿ ನಿಲಯಗಳನ್ನು ಆರಂಭಿಸಿ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು ಎಂದರು.[ದಸರಾ : ಕಾವಡಿ, ಮಾವುತರ ಮಕ್ಕಳ ಟೆಂಟ್ ಶಾಲೆ ನೋಡಿ]
ವರ್ಷಕ್ಕೆ 15 ಸಾವಿರ ರುಪಾಯಿ: ಇವತ್ತು ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳು ಖಾಸಗಿಯಾಗಿ ರೂಂ, ಸ್ವತಃ ಅಡುಗೆ ಮಾಡಿಕೊಂಡು ಓದುತ್ತಾರೆ. ಅಂಥ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಪ್ರತಿ ತಿಂಗಳು 1500 ರು.ಗಳಂತೆ ವರ್ಷದ 10 ತಿಂಗಳಿಗೆ 15000 ರು.ಗಳನ್ನು ನೀಡಲಾಗುತ್ತದೆ. ರಾಜ್ಯದಲ್ಲಿ 1 ಲಕ್ಷ ವಿದ್ಯಾರ್ಥಿಗಳಿಗೆ ಈ ನೆರವು ನೀಡಲಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ವರ್ಷಗಳ ಕಾಲ ಬಹು ಸಂಖ್ಯಾತ ಜನ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. 1930 ಹಾಗೂ 1940ರ ದಶಕದಲ್ಲಿ ರಾಜೇಂದ್ರ ಶ್ರೀಗಳು ಎಲ್ಲರಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಹಳ್ಳಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಬಡ ಕುಟುಂಬದವರಿಗೆ, ದಲಿತ ವರ್ಗದವರಿಗೆ, ಮಹಿಳೆಯರಿಗೆ ಶಿಕ್ಷಣ ಸಿಗುವಂತೆ ಮಾಡಿದರು ಎಂದು ಹೇಳಿದರು.[ಇನ್ನು ಕರ್ನಾಟಕದ ಆನೆಗಳಿಗೂ ಆಧಾರ್ ಸಂಖ್ಯೆ]
60 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ: ದೇಶ ಅಭಿವೃದ್ಧಿ ಕಾಣಬೇಕಾದರೆ ಸಾಕ್ಷರತೆ ಮುಖ್ಯವಾಗುತ್ತದೆ. ನೂರಕ್ಕೆ ನೂರರಷ್ಟು ಸಾಕ್ಷರತೆ ಸಾಧಿಸಿದರೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ. ಎಲ್ಲರಿಗೂ ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ಸಿಗದಿದ್ದರೆ ಮನುಷ್ಯನ ವಿಕಾಸ ಕಷ್ಟದ ಕೆಲಸ ಎಂದರು.
ಸುತ್ತೂರು ಮಠದ ವತಿಯಿಂದ ನಡೆಸುವ ಶಿಕ್ಷಣ ಸಂಸ್ಥೆಗಳಲ್ಲಿ 60 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 15 ಸಾವಿರ ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ನಡೆಯುತ್ತಿದೆ. 1800 ಹಾಸಿಗೆಯ ಆಸ್ಪತ್ರೆಯ ಮೂಲಕ ಆರೋಗ್ಯ ಸೇವೆ ನೀಡಲಾಗುತ್ತಿದೆ. ಇವೆಲ್ಲವೂ ಒಂದು ರೀತಿಯ ಪವಾಡ ಎಂದು ಹೇಳಿದರು.[ಮೈಸೂರಿನ ದೇವರಾಜ ಮಾರುಕಟ್ಟೆ ಕುಸಿತ]
ಸಚಿವರಾದ ಎಚ್.ಎಸ್.ಮಹದೇವ ಪ್ರಸಾದ್, ಎಂ.ಬಿ.ಪಾಟೀಲ್, ತನ್ವೀರ್ ಸೇಠ್, ರುದ್ರಪ್ಪ ಮಾನಪ್ಪ ಲಮಾಣಿ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಸಂಸದ ಧ್ರುವ ನಾರಾಯಣ, ರಾಜ್ಯಸಭಾ ಸದಸ್ಯರಾದ ಪ್ರಭಾಕರ ಬಿ. ಕೋರೆ, ಶಾಸಕರಾದ ಎಂ.ಕೆ.ಸೋಮಶೇಖರ್, ಸಿ.ಜಯಣ್ಣ, ಪುಟ್ಟರಂಗಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಆರ್. ಧರ್ಮಸೇನ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಮತ್ತಿತರರಿದ್ದರು.
ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು, ಹರಿಯಾಣ ಮತ್ತು ಹರಿದ್ವಾರದ ಸ್ವಾಮಿ ಅವಧೇಶಾನಂದ್ ಗಿರಿ ಮಹಾರಾಜ್, ಇಸ್ಲಾಂ ಧರ್ಮಗುರು ಮಹಮದ್ ತನ್ವೀರ್ ಅಜ್ಮಿ, ಮೈಸೂರಿನ ಕುಂದೂರು ಮಠದ ಡಾ.ಇಮ್ಮಡಿ ಶಿವಬಸವ ಸ್ವಾಮಿಗಳು ಮತ್ತಿತರು ಸಾನ್ನಿಧ್ಯ ವಹಿಸಿದ್ದರು.
ಇದಕ್ಕೂ ಮೊದಲು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಕಳ್ಳಿ ವಿಮಾನ ನಿಲ್ದಾಣದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಮಾನ ನಿಲ್ದಾಣದ ಆವರಣದಲ್ಲಿ ಖಾಲಿ ಇರುವ ಸ್ಥಳದಲ್ಲಿ ಸುಮಾರು 500 ಬೀಟೆ ಹಾಗೂ ಹೊನ್ನೆ ಸಸಿಗಳನ್ನು ನೆಡಲು ಅರಣ್ಯ ಇಲಾಖೆ ಯೋಜನೆ ರೂಪಿಸಿದೆ.