ಹೆಂಡತಿ ಜೊತೆ ವೈಮನಸ್ಸು; ರೈಲ್ವೆ ಪೊಲೀಸ್ ಪೇದೆ ಆತ್ಮಹತ್ಯೆ
ಮೈಸೂರು, ಜೂನ್ 26: ಹೆಂಡತಿ ಕಿರುಕುಳದಿಂದ ಬೇಸತ್ತು ರೈಲ್ವೇ ಪೊಲೀಸ್ ಪೇದೆಯೊಬ್ಬರು ತಮ್ಮ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್ ನಗರದ ಹೊಸ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.
ಮಂಡ್ಯ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಗೋಪಿಕೃಷ್ಣ (35) ಅಕ್ಷತಾ ಅವರೊಂದಿಗೆ ಕಳೆದ ವರ್ಷ ವಿವಾಹವಾಗಿದ್ದರು. ಮಂಡ್ಯದಲ್ಲಿಯೇ ದಂಪತಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ವಿತ್ತ ಸಚಿವಾಲಯದ ಸಮೀಪ ಆತ್ಮಹತ್ಯೆ ಮಾಡಿಕೊಂಡ ಕಾನ್ಸ್ ಟೇಬಲ್
ಮದುವೆಯಾದಾಗಿನಿಂದಲೂ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ. ವೈಮನಸ್ಸು ಉಂಟಾಗಿತ್ತು. ಅಕ್ಷತಾ ಗಂಡನ ಜೊತೆ ಇರುವುದಕ್ಕಿಂತ ಹೆಚ್ಚಾಗಿ ತವರು ಮನೆಯಲ್ಲಿಯೇ ಇರುತ್ತಿದ್ದರು. ಗೋಪಿಕೃಷ್ಣ ಪದೇ ಪದೇ ಮಂಡ್ಯಕ್ಕೆ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ಇಬ್ಬರ ನಡುವೆ ಮನಸ್ತಾಪ ಹೆಚ್ಚಾಗಿತ್ತು.
ಇದಾದ ಬಳಿಕ ಗೋಪಿಕೃಷ್ಣ ಸೋಮವಾರ ಮಂಡ್ಯದಿಂದ ಕರ್ತವ್ಯ ಮುಗಿಸಿಕೊಂಡು ಪತ್ನಿಯ ತವರು ಮನೆಗೆ ಹೋಗಿದ್ದಾರೆ. ಅಲ್ಲಿ ಅಕ್ಷತಾ ಜೊತೆ ಮತ್ತೆ ಜಗಳವಾಗಿದೆ. ಅಕ್ಷತಾ ಮತ್ತು ಮನೆಯವರು ಗೋಪಿಕೃಷ್ಣ ಅವರೊಂದಿಗೆ ಜಗಳವಾಡಿದ್ದಾರೆ. ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಗೋಪಿಕೃಷ್ಣ ಪೋಷಕರು ದೂರು ದಾಖಲಿಸಿದ್ದಾರೆ.