ಮೈಸೂರು: ಸಾಮಾನ್ಯ ಸಭೆಯಲ್ಲಿ ಕಣ್ಣೀರಿಟ್ಟ ಜಿ.ಪಂ ಅಧ್ಯಕ್ಷೆ
ಮೈಸೂರು, ಮಾರ್ಚ್ 7 : ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ್ ರಾಜೀನಾಮೆಗೆ ಜೆಡಿಎಸ್ ಪಕ್ಷದ ಸದಸ್ಯರಿಂದಲೇ ಒತ್ತಡ ಹೆಚ್ಚಾಗಿದ್ದು, ಜೆಡಿಎಸ್ ಸದಸ್ಯರ ಆರ್ಭಟಕ್ಕೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲೇ ಅಧ್ಯಕ್ಷೆ ನಯಿಮಾ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಇಂದು ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯನ್ನು ಕೋರಂ ಕೊರತೆಯಿಂದ ಅರ್ಧ ಗಂಟೆ ಮುಂದೂಡಲಾಗಿತ್ತು. ಈ ಸಂದರ್ಭದಲ್ಲಿ ಅಧ್ಯಕ್ಷ ನಯಿಮಾ ಸುಲ್ತಾನ್ ರಾಜೀನಾಮೆಗೆ ಜೆಡಿಎಸ್ ಸದಸ್ಯರು ಒತ್ತಡ ಹಾಕಿದರು. ಸಾಮಾನ್ಯ ಸಭೆ ಮುಗಿದ ಬಳಿಕ ರಾಜೀನಾಮೆ ಕೊಡುತ್ತೇನೆ ಎಂದರೂ ಕೂಡ ಜೆಡಿಎಸ್ ಸದಸ್ಯರು ಬಾಯಿಗೆ ಬಂದಂತೆ ನಿಂದಿಸಿದರು ಎಂದು ಮಾಧ್ಯಮದವರೊಂದಿಗೆ ತಮ್ಮ ನೋವನ್ನು ಅವರು ಹಂಚಿಕೊಂಡಿದ್ದಾರೆ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯೊಂದಿಗೆ ನಯಿಮಾ ಸುಲ್ತಾನ್ ಜಿಪಂ ಅಧ್ಯಕ್ಷರಾಗಿದ್ದರು. ಈಗ ನಯಿಮಾ ಸುಲ್ತಾನ್ ರಾಜೀನಾಮೆಗಾಗಿ ಜೆಡಿಎಸ್ ಜಿಲ್ಲಾ ಪಂಚಾಯಿತಿ ಸದಸ್ಯರು ಪಟ್ಟು ಹಿಡಿದಿದ್ದು, ಸದಸ್ಯರು ಹಾಗೂ ಅಧ್ಯಕ್ಷೆ ನಡುವೆ ಮಾತಿನ ಚಕಮಕಿ ನಡೆಯಿತು.
ಇನ್ನು ಮಧ್ಯಾಹ್ನ ಬೆಳಿಗ್ಗೆ 11 ಕ್ಕೆ ಆರಂಭವಾಗಬೇಕಾಗಿದ್ದ ಸಭೆ ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾಯಿತು. ನಿಲುವಳಿ ಸೂಚನೆ ಹಾಗೂ ಶಿಷ್ಟಾಚಾರ ಉಲ್ಲಂಘನೆ ಮೇಲೆ ಚರ್ಚೆ ಮಾಡಲು ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಸಿಎಂ ತವರು ಕ್ಷೇತ್ರ ವರುಣಾ ಕ್ಷೇತ್ರದಲ್ಲಿ ಅಂಬೇಡ್ಕರ್ ಭವನ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಜಿಪಂ ಸದಸ್ಯೆ ಪ್ರೇಮಾ ಮಹದೇವಯ್ಯ ಅವರನ್ನು ಕಾರ್ಯಕ್ರಮಕ್ಕೆ ಕರೆಯದೆ ಜಿಪಂ ಸಿಇಒ ಶಿವಶಂಕರ್ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಈ ವಿಚಾರವಾಗಿ ಜಿಪಂ ಸಾಮಾನ್ಯ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡುವಂತೆ ಬಿಜೆಪಿ ಸದಸ್ಯರಾದ ಸದಾನಂದ, ಮಂಗಳಗೌರಿ ಹಾಗೂ ವೆಂಕಟಸ್ವಾಮಿ ಅವರು ಪಟ್ಟು ಹಿಡಿದರು.
ಜಿಪಂ ಸಭೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಚಾರ ಮಾರ್ದನಿಸಿದ್ದು ವರುಣಾ, ಚಾಮುಂಡೇಶ್ವರಿ, ಟಿ. ನರಸಿಪುರ, ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರಗಳ ಜಿಪಂ ಸದಸ್ಯರಿಂದ ಡಾ. ಯತೀಂದ್ರ ಹಾಗೂ ಅಧಿಕಾರಿಗಳ ವಿರುದ್ಧ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರು ಶಿಷ್ಟಾಚಾರ ಉಲ್ಲಂಘನೆ ಆರೋಪ ಮಾಡಿದ್ದಾರೆ.