ಹುಣಸೂರಲ್ಲಿ ಶುದ್ಧ ಕುಡಿಯವ ನೀರಿನ ಘಟಕ ತೆರೆದಿದ್ದರೂ ಬಳಕೆಯಾಗುತ್ತಿಲ್ಲ, ಏನಿದು ಅವಸ್ಥೆ?
ಮೈಸೂರು, ಅಕ್ಟೋಬರ್.26: ಹುಣಸೂರು ಪಟ್ಟಣದ ಮೂಲಕವೇ ಲಕ್ಷ್ಮಣತೀರ್ಥ ನದಿ ಹರಿದು ಹೋಗುತ್ತಿದ್ದರೂ ಕುಡಿಯಲು ಶುದ್ಧ ನೀರನ್ನು ಒದಗಿಸುವಲ್ಲಿ ಇಲ್ಲಿನ ಜನಪ್ರತಿನಿಧಿಗಳು ಗಮನಹರಿಸದಿರುವುದು ಎದ್ದು ಕಾಣುತ್ತಿದ್ದು ಪರಿಣಾಮ ಸಾರ್ವಜನಿಕರು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ.
ಪಟ್ಟಣದ ಮಧ್ಯೆ ಲಕ್ಷ್ಮಣತೀರ್ಥ ನದಿ ಹರಿಯುತ್ತಿದ್ದರೂ ಅದನ್ನು ಸಮರ್ಪಕ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗಿರುವುದು ಎದ್ದು ಕಾಣುತ್ತಿದೆ. ಜತೆಗೆ ಪಟ್ಟಣದ ತ್ಯಾಜ್ಯವೆಲ್ಲವೂ ನೇರವಾಗಿ ಈ ನದಿಗೆ ಸೇರುತ್ತಿದ್ದು ಪರಿಣಾಮ ನದಿ ಕಲುಷಿತಗೊಂಡು ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ಗೋಚರಿಸುತ್ತಿದೆ.
ತಾತನಹಳ್ಳಿಯವರಿಗೆ ಕೆರೆಯ ನೀರು ಉಳಿಸಿಕೊಳ್ಳುವುದೇ ಸಮಸ್ಯೆಯಾಯಿತಾ?
ಮಳೆಗಾಲದಲ್ಲಿ ಸ್ವಚ್ಛವಾಗುವ ನದಿ ಬೇಸಿಗೆ ಬರುತ್ತಿದ್ದಂತೆಯೇ ಜೊಂಡು ಹುಲ್ಲು, ಇತರೆ ಜಲಸಸ್ಯಗಳು ಬೆಳೆದು ನೀರು ಹರಿಯದೆ ನಿಂತು ಗಬ್ಬು ನಾರುತ್ತಿದೆ. ಈ ನದಿಯನ್ನು ಸ್ವಚ್ಛಗೊಳಿಸುವ ಮತ್ತು ತ್ಯಾಜ್ಯ ನೀರು ನದಿಗೆ ಹರಿಯುವುದನ್ನು ತಡೆಯುವ ಕೆಲಸವನ್ನ ಇದುವರೆಗೆ ಯಾರೂ ಮಾಡಿಲ್ಲ ಎಂಬುದೇ ಬೇಸರದ ಸಂಗತಿಯಾಗಿದೆ.
'ಹಾಸನದ ಕೆರೆಗಳಿಗೆ ನೀರು ತುಂಬಲು 330 ಕೋಟಿ ರು ಯೋಜನೆ'
ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ರ ಬೇಜವಬ್ದಾರಿ ಹಾಗೂ ಹಾಲಿ ಶಾಸಕ ಎಚ್.ವಿಶ್ವನಾಥ್ರ ನಿರ್ಲಕ್ಷ್ಯದಿಂದ ಪಟ್ಟಣದ ಜನತೆಗೆ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ. ಜತೆಗೆ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯ 60 ಲಕ್ಷ ರೂ. ಹಣ ನೀರು ಪಾಲಾಗಿರುವ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಳಕೆಯಾಗುತ್ತಿಲ್ಲ ನೀರು
ಕೈಗೆ ಎಟುಕುವಂತೆ ನದಿಯಿದ್ದರೂ ಅದನ್ನು ಬಳಸಿಕೊಳ್ಳುವಂತಿಲ್ಲ. ಹೀಗಾಗಿ ಜನ ಕೊಳವೆಬಾವಿ ಇನ್ನಿತರ ನೀರನ್ನು ಬಳಸಿಕೊಳ್ಳಬೇಕಾಗಿದೆ. ಶುದ್ಧ ಕುಡಿಯವ ನೀರಿನ ಘಟಕ ತೆರೆದಿದ್ದರೂ ಅದು ಬಳಕೆಯಾಗುತ್ತಿಲ್ಲ. ಕಾಯಿನ್ ಹಾಕಿ ನೀರುಪಡೆಯುವ ಯೋಗ ಇಲ್ಲಿನವರಿಗಿಲ್ಲದಂತಾಗಿದೆ.
ನಾಮಕಾವಸ್ಥೆಗೆ ಚಾಲನೆ
ಕಳೆದೊಂದು ವರ್ಷದ ಹಿಂದೆ ಶಾಸಕ ಹೆಚ್.ಪಿ.ಮಂಜುನಾಥ್ ಅವರ ಅವಧಿಯಲ್ಲಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ನಗರದ ಎಚ್.ಡಿ.ಕೋಟೆ ಸರ್ಕಲ್, ಮಾರುತಿ ಪೆಟ್ರೋಲ್ ಬಂಕ್ ಬಳಿ, ಚಿಕ್ಕ ಹುಣಸೂರು ಬಳಿ, ಸದಾಶಿವನಕೊಪ್ಪಲು ಬಳಿ, ಕಲ್ಕುಣಿಕೆ ಸರ್ಕಲ್ ಹಾಗೂ ರಂಗನಾಥ ಬಡಾವಣೆ ಸೇರಿದಂತೆ ಆರು ಕಡೆಗಳಲ್ಲಿ ಶುದ್ಧ ಕುಡಿಯುವ ನೀರು ಘಟಕಗಳನ್ನು ಸ್ಥಾಪಿಸಲಾಯಿತಾದರೂ ಚಾಲನೆ ಸಿಗದೆ ನೆನೆಗುದಿಗೆ ಬಿದ್ದಿತ್ತು.
ಈ ವಿಚಾರವಾಗಿ ಆನೇಕ ಸಂಘಟನೆಗಳು ಅಂದಿನ ಶಾಸಕರ ವಿರುದ್ಧ ಹಾಗೂ ತಾಲೂಕು ಹಾಗೂ ನಗರಸಭೆ ಆಡಳಿತ ವಿರುದ್ಧ ಪ್ರತಿಭಟನೆಗಳನ್ನು ಹಮ್ಮಿಕೊಂಡ ಪರಿಣಾಮ ನಾಮಕಾವಸ್ಥೆಗೆ ಚಾಲನೆ ನೀಡಿದರು.
14 ವರ್ಷಗಳ ನಂತರ ತುಂಬಿತು ಮಲ್ಲಯ್ಯನ ಕೆರೆ, ತಂಡೋಪತಂಡವಾಗಿ ಬಂದ ರೈತರು
ರೋಗ ಹರಡುವ ಭಯ
ಆದರೆ ನಂತರದ ದಿನಗಳಲ್ಲಿ ಈ ಶುದ್ಧ ನೀರಿನ ಘಟಕ ದುರಸ್ತಿಗೀಡಾಗಿದ್ದು, ಅದನ್ನು ದುರಸ್ತಿಗೊಳಿಸುವ ಕೆಲಸವನ್ನು ಯಾರೂ ಮಾಡದ ಕಾರಣದಿಂದಾಗಿ ಸದ್ಯ ಶುದ್ಧಕಡಿಯುವ ನೀರು ಜನಕ್ಕೆ ದೊರಕದಂತಾಗಿದೆ. ರಾಜ್ಯದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಸ್ಥಾಪಿಸಿರುವ ಕುಡಿನೀರು ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ.
ಆದರೆ ಇಲ್ಲಿರುವ ನೀರಿನ ಘಟಕಗಳನ್ನು ದುರಸ್ತಿ ಮಾಡಲು ಸಂಬಂಧಿಸಿದವರು ಮುಂದಾಗದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಲಕ್ಷ್ಮಣತೀರ್ಥ ನದಿ ಸಂಪೂರ್ಣ ಕಲುಷಿತಗೊಂಡಿರುವ ಕಾರಣ ಸಾಂಕ್ರಾಮಿಕ ರೋಗ ಹರಡುವ ಭಯವೂ ಇದೆ.
ಭಾರೀ ಸಮಸ್ಯೆ
ಬಹಳ ಗ್ರಾಮಗಳ ಜನ ಅನಿವಾರ್ಯವಾಗಿ ಈ ನದಿ ನೀರನ್ನು ಬಳಸುತ್ತಿದ್ದು, ಅವರು ಕೂಡ ರೋಗಕ್ಕೀಡಾಗುವ ಭಯದಿಂದ ದಿನ ಕಳೆಯುವಂತಾಗಿದೆ. ನದಿ ಸ್ವಚ್ಛಗೊಳಿಸುವ ಕಾರ್ಯವನ್ನು ಸಂಘಟನೆಗಳಾಗಲೀ, ಸರ್ಕಾರವಾಗಲಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.