ದೀಪಾವಳಿ ಹಬ್ಬ: ಮಾರುಕಟ್ಟೆಯಲ್ಲಿ ದೀಪಗಳ ಖರೀದಿ ಬಲು ಜೋರು
ಮೈಸೂರು, ನವೆಂಬರ್.06: ದೀಪಾವಳಿ...ಹೆಸರು ಕೇಳಿದಾಕ್ಷಣ ಮನಸ್ಸು ಉಲ್ಲಾಸಿತವಾಗುತ್ತದೆ. ಮನೆ, ಮನಗಳಲ್ಲಿ ಸಂಭ್ರಮದ ದೀಪ ಪ್ರಜ್ವಲಿಸುತ್ತದೆ. ಅಂಥ ಮಹತ್ವದ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ದೀಪಗಳ ಖರೀದಿಯ ಭರಾಟೆ ಆರಂಭವಾಗಿದೆ.
ದೀಪಗಳ ಹಬ್ಬದ ವೇಳೆ ಮನೆಯನ್ನು ಪ್ರಜ್ವಲಿಸಲು ಮಣ್ಣಿನ ಹಣತೆಗಳಿಗೆ ಬಲು ಬೇಡಿಕೆ. ಹಣತೆಗಳನ್ನು ಬೆಳಗಿ ಅವುಗಳಿಂದ ಪ್ರಜ್ವಲಿಸುವ ಜ್ವಾಲೆಯನ್ನು ಕಂಡಾಗ ಹಬ್ಬದ ಸಂಭ್ರಮ ಇಮ್ಮಡಿಯಾಗುತ್ತದೆ. ಆದರೆ, ಇಂದು ಮಣ್ಣಿನ ಹಣತೆಗಳು ತೆರೆಮರೆಗೆ ಸರಿಯುತ್ತಿವೆ.
ಆಧುನಿಕತೆಯ ನಾಗಾಲೋಟದಲ್ಲಿ ಪ್ಲಾಸ್ಟಿಕ್, ಪಿಂಗಾಣಿಯಿಂದ ತಯಾರಿಸಿದ ನಾನಾ ಬಗೆಯ ಬಣ್ಣಬಣ್ಣದ ದೀಪಗಳು ಮಾರುಕಟ್ಟೆಗೆ ಬಂದಿವೆ. ನಗರೀಕರಣ ಬದಲಾದ ಸಂಸ್ಕೃತಿಯಿಂದಾಗಿ ದೇಶಿಯ ವಸ್ತುಗಳು ತೆರೆಮರೆಗೆ ಸರಿಯುತ್ತಿವೆ.
ಬೆಂಗಳೂರಲ್ಲಿ ಪಟಾಕಿ ವ್ಯಾಪಾರ ಶೇ 50ರಷ್ಟು ಕುಸಿತ
ಹತ್ತಿಯಿಂದ ಬತ್ತಿ ಹೊಸೆದು ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ಸುರಿದು ಮನೆ ಮುಂದೆ ಸಾಲಾಗಿ ಜೋಡಿಸಿ ದೀಪ ಉರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಇಂತಹ ಹಣತೆಗಳು ಈಗ ಆಧುನಿಕ ಸ್ಪರ್ಶ ಪಡೆದಿವೆ. ಹಲವು ರೂಪಗಳಾಗಿ ಬದಲಾಗಿವೆ. ಮಣ್ಣಿನಿಂದ ತಯಾರಿಸುವ ಸಾಂಪ್ರದಾಯಿಕ ಹಣತೆಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವ ಪಿಂಗಾಣಿ ಹಣತೆಗಳು ರಾರಾಜಿಸುತ್ತಿವೆ. ಬಹುವಿನ್ಯಾಸ ಹೊಂದಿರುವ ಇಂತಹ ಹಣತೆಗಳು ಗ್ರಾಹಕರಿಗೂ ಅಚ್ಚುಮೆಚ್ಚು.
ಮಣ್ಣಿನ ಹಣತೆಗಳಂತೆ ಕಾಣುತ್ತವೆ
"ಕೊಂಚ ಎಚ್ಚರ ತಪ್ಪಿದರೂ ಮಣ್ಣಿನ ದೀಪಗಳು ಒಡೆದು ಹೋಗುತ್ತವೆ. ಆದರೆ, ಪಿಂಗಾಣಿ ದೀಪಗಳು ಒಡೆದು ಹೋಗುವುದಿಲ್ಲ. ಹೀಗಾಗಿ, ಗ್ರಾಹಕರು ಪಿಂಗಾಣಿ ದೀಪಗಳತ್ತ ಮನಸೋಲುತ್ತಿದ್ದಾರೆ. ಎಣ್ಣೆ ಹಾಕಿ ದೀಪ ಉರಿಸುವ ಗೋಜು ಬೇಡ ಎಂದು ವಿದ್ಯುದ್ವೀಪಗಳನ್ನು ಖರೀದಿಸುತ್ತಾರೆ.
ಕೆಲವು ವಿದ್ಯುತ್ ದೀಪಗಳ ಮಾದರಿಗಳು ಮಣ್ಣಿನ ಹಣತೆಗಳಂತೆ ಕಾಣುತ್ತವೆ. ಮಣ್ಣಿನ ಹಣತೆಗಳಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವುದರಿಂದ ಮಣ್ಣಿನ ದೀಪಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ" ಎಂದು ಅಗ್ರಹಾರದಲ್ಲಿರುವ ಹಣತೆ ವ್ಯಾಪಾರಿ ರಾಜು ಬೇಸರವ್ಯಕ್ತಡಿಸಿದರು.
ಆಕರ್ಷಕವಾದ ದೀಪಗಳು ಲಭ್ಯ
"ಆಕರ್ಷಕವಾದ ದೀಪಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಮಣ್ಣಿನ ಮ್ಯಾಜಿಕ್ ದೀಪಗಳು, ತೆಂಗಿನಕಾಯಿ ಮಾದರಿಯ ದೀಪಗಳು, ಗಣಪತಿಯ ಹಿನ್ನೆಲೆಯನ್ನು ಹೊಂದಿರುವ ದೀಪಗಳು ಮಾರುಕಟ್ಟೆಯಲ್ಲಿವೆ. ಇವುಗಳನ್ನು ತಯಾರಿಸುವ ವೆಚ್ಚವೂ ಹೆಚ್ಚಿದೆ. ತಯಾರಾದ ಹಣತೆಗಳನ್ನು ಮಾರಾಟಕ್ಕೆ ವಿವಿಧ ಪಟ್ಟಣಗಳ ಸಂತೆಗಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ" ಎಂದು ಕುಂಬಾರಿಕೆ ವೃತ್ತಿ ಮಾಡುವ ವಿಜಯನ್ ತಿಳಿಸಿದ್ದಾರೆ.
ಬದುಕಿನ ದೀವಟಿಗೆ ಹಚ್ಚುವ ದೀಪಾವಳಿಯ ಎರಡು ಮುಖಗಳು
ವ್ಯಾಪಾರ ಹೆಚ್ಚಾಗಬಹುದು
ವಿಜಯನ್ ಹೇಳುವ ಹಾಗೆ ಸಾಗಣೆ ವೇಳೆ ಕೆಲವು ದೀಪಗಳು ಹಾನಿಗೊಳಗಾಗುತ್ತವೆ. ಅಂಥವುಗಳು ವ್ಯರ್ಥವಾಗುತ್ತವೆ. ಮಾರಾಟದ ವೇಳೆಯೂ ಅಷ್ಟೇ. ಕಡಿಮೆ ಬೆಲೆಗೆ ವಸ್ತುಗಳನ್ನು ಕೇಳುತ್ತಾರೆ. ಕೆಲವು ಬಾರಿ ಅನಿವಾರ್ಯವಾಗಿ ನೀಡಬೇಕಾಗುತ್ತದೆ. ಈ ಎಲ್ಲ ಕಾರಣಗಳಿಂದ ಹೆಚ್ಚು ಲಾಭ ಸಿಗುವುದಿಲ್ಲ.
ಪ್ರತಿ ವರ್ಷ ದೀಪಾವಳಿ, ಕಾರ್ತಿಕ ಹಾಗೂ ಇತರ ಹಬ್ಬಗಳಲ್ಲಿ ಮಣ್ಣಿನ ಹಣತೆಗೆ ಬೇಡಿಕೆ ಹೆಚ್ಚುತ್ತದೆ. ಒಂದು ಡಜನ್ ಹಣತೆಗೆ 80 ರೂಪಾಯಿಗಳಂತೆ ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ಉತ್ತಮ ಮಳೆ ಆಗಿ ರೈತರು ಖುಷಿಯಾಗಿದ್ದಾರೆ. ಈ ಕಾರಣದಿಂದ ಅವರಲ್ಲೂ ಹಬ್ಬದ ಸಂಭ್ರಮ ಹೆಚ್ಚು ಇರಬಹುದು. ಈ ಕಾರಣದಿಂದ ನಮಗೂ ವ್ಯಾಪಾರ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ವಿಜಯನ್ ಹೇಳಿದರು.
ಹಬ್ಬದ ಸಂಭ್ರಮ ಹೆಚ್ಚಿಸೋಣ
ಪರಿಸರಕ್ಕೂ ಪೂರಕವಾದ, ಕರಕುಶಲ ವಸ್ತುವೂ ಆದ ಮಣ್ಣಿನ ಹಣತೆಗಳನ್ನು ಹಚ್ಚಿ ಹಬ್ಬವನ್ನು ಸಂಭ್ರಮಿಸೋಣ. ಪ್ಲಾಸ್ಟಿಕ್, ವಿದ್ಯುತ್ ದೀಪಗಳ ಬಳಕೆ ಕಡಿಮೆ ಮಾಡಿ ಪ್ರಕೃತಿಗೆ ನೆರವಾಗುತ್ತಾ ಹಬ್ಬದ ಸಂಭ್ರಮ ಹೆಚ್ಚಿಸೋಣ.