ಮೈಸೂರು: ಅಪ್ಪು ಭಾವಚಿತ್ರ ಹಿಡಿದು ಚಾಮುಂಡಿ ಬೆಟ್ಟವೇರಿದ ಅಭಿಮಾನಿ!
ಮೈಸೂರು, ಮಾರ್ಚ್ 17: ಎಲ್ಲೆಡೆ ಕನ್ನಡದ ಕಣ್ಮಿಣಿ, ಎಲ್ಲರ ಮುದ್ದಿನ ಅಪ್ಪು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಸಿನಿಮಾದ ಬಿಡುಗಡೆ ಸಮಾರಂಭವನ್ನು ರಾಜ್ಯ ಮಾತ್ರವಲ್ಲದೆ ದೇಶ- ವಿದೇಶಗಳಲ್ಲಿ ಆಚರಿಸಲಾಗುತ್ತಿದೆ. ಈ ನಡುವೆ ಅಭಿಮಾನಿಯೊಬ್ಬ ತನ್ನ ಕುಟುಂಬ ಸಹಿತ ಅಪ್ಪುವಿನ ಭಾವಚಿತ್ರ ಹಿಡಿದು ಚಾಮುಂಡಿ ಬೆಟ್ಟವನ್ನೇರಿ ಪೂಜೆ ಸಲ್ಲಿಸಿ ಹುಟ್ಟುಹಬ್ಬದಂದು ನಮನ ಸಲ್ಲಿಸಿದ್ದಾರೆ.
ಗುರುವಾರ ಎಲ್ಲಿ ನೋಡಿದರಲ್ಲಿ ಅಪ್ಪುವಿನ ಸ್ಮರಣೆ ನಡೆಯುತ್ತಿದ್ದರೆ, ಭಾವಚಿತ್ರಗಳು, ಪೋಸ್ಟರ್ಗಳು ರಾರಾಜಿಸುತ್ತಿವೆ. ಸಿನಿಮಾ ಮಂದಿರಗಳ ಮುಂದೆ ಜಾತ್ರೆ ನೆರೆದಿದೆ. ಇನ್ನೊಂದೆಡೆ ಜನ ಸಂಭ್ರಮದೊಂದಿಗೆ ಅವರನ್ನು ನೆನೆಯುತ್ತಾ ಕಂಬನಿ ಮಿಡಿಯುತ್ತಿದ್ದಾರೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪ್ಪುವಿನ ಸ್ಮರಣೆ ಜೋರಾಗಿಯೇ ನಡೆಯುತ್ತಿದೆ. ಇದಕ್ಕೆ ಸಹೋದರ, ನಟ ಶಿವರಾಜ್ ಕುಮಾರ್ ಸಾಕ್ಷಿಯಾಗಿದ್ದಾರೆ.
ಮೈಸೂರಿನಲ್ಲಿ ಅಪ್ಪುವಿನ ಸ್ಮರಣೆ
ಮೈಸೂರು ನಗರದ ಪಡುವಾರಹಳ್ಳಿಯಲ್ಲಿ ಅಭಿಮಾನಿಗಳು ಅಪ್ಪುವಿಗಾಗಿ ದೇಗುಲವನ್ನು ನಿರ್ಮಿಸಿ ಅನ್ನದಾನ ಮಾಡುತ್ತಿದ್ದಾರೆ. ಇನ್ನೊಂದೆಡೆ ಅಭಿಮಾನಿಗಳು ರೋಗಿಗಳಿಗೆ ಹಣ್ಣುಹಂಪಲು ವಿತರಣೆ, ರಕ್ತದಾನ ಶಿಬಿರ, ಗಿಡಗಳನ್ನು ನೆಡುವ ಮೂಲಕ ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಇದೆಲ್ಲದರ ನಡುವೆ ನಗರದ ಜಯಲಕ್ಷ್ಮಿ ಪುರಂನಲ್ಲಿರುವ ಡಿಆರ್ಸಿ ಮಾಲ್ನಲ್ಲಿ ಜೇಮ್ಸ್ ಸಿನಿಮಾದ ಅಪ್ಪು ಕಟೌಟ್ಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗಿದೆ.
ಅಪ್ಪು ಬಗ್ಗೆ ಶಿವಣ್ಣ ಹೇಳಿದ್ದೇನು?
ಪುನೀತ್ ರಾಜ್ಕುಮಾರ್ ಅಣ್ಣ ನಟ ಶಿವರಾಜ್ಕುಮಾರ್ ಅವರು ಮೈಸೂರಿನ ಗಾಯತ್ರಿ ಟಾಕೀಸ್ಗೆ ಆಗಮಿಸಿ ಅಭಿಮಾನಿಗಳನ್ನು ಮಾತನಾಡಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಅಪ್ಪು ಇಲ್ಲದ ಹುಟ್ಟುಹಬ್ಬ ಮತ್ತು ಸಿನಿಮಾ ಬಿಡುಗಡೆ ಬೇಸರ ತಂದಿದೆ. ಚಿತ್ರದ ಡಬ್ಬಿಂಗ್ ಮಾಡುವ ವೇಳೆ ನೋವಾಯಿತು. ಆದರೆ ಎಷ್ಟೇ ನೋವುಗಳಿದ್ದರೂ ಜೀವನ ಮುಂದೆ ಸಾಗಲೇಬೇಕು. ಅಪ್ಪು ಚಿಕ್ಕವನಿರುವಾಗಲೇ ಜನರ ಜೊತೆ ಬೆರೆಯುತ್ತಾ ಬೆಳೆದವನು. ಅವನು ಎಲ್ಲರ ಹೃದಯದಲ್ಲಿ ಇದ್ದಾನೆ ಎಂದರು. ಪ್ರತಿಯೊಬ್ಬರ ಜೊತೆಯೂ ಒಂದು ಮಾನವೀಯ ಬೆಸುಗೆಯಿದೆ. ಚಿತ್ರವನ್ನು ನೋಡಿದ ಪ್ರತಿಯೊಬ್ಬರಿಗೂ ಕೊನೆಯಲ್ಲಿ ಕಣ್ಣಂಚಲ್ಲಿ ನೀರು ಬರುವುದು ಸಹಜ ಎಂದು ತಿಳಿಸಿದರು.
ಇನ್ನು ಫಿಲ್ಮ್ ಸಿಟಿಗೆ ಪುನೀತ್ ರಾಜ್ಕುಮಾರ್ ಹೆಸರಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಪುನೀತ್ ರಾಜ್ಕುಮಾರ್ ಹೆಸರಿಟ್ಟರೆ ಸಂತೋಷನೇ ಆಗುತ್ತದೆ. ಕುಟುಂಬ ಸದಸ್ಯನಾಗಿ ನಾನು ಆ ರೀತಿಯ ಒತ್ತಾಯ ಮಾಡಲ್ಲ. ಏಕೆಂದರೆ ಚಿತ್ರರಂಗದಲ್ಲಿ ದುಡಿದವರು ಇದ್ದಾರೆ. ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.
ಚಾಮುಂಡಿ ಬೆಟ್ಟವೇರಿದ ಅಭಿಮಾನಿ
ಇನ್ನೊಂದೆಡೆ ನಗರದಾದ್ಯಂತ ಅಪ್ಪುವಿನ ಭಾವಚಿತ್ರಗಳು ರಾರಾಜಿಸುತ್ತಿದ್ದು, ಅಭಿಮಾನಿಗಳು ತಮ್ಮ ಅಭಿಮಾನವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಗುರುವಾರ ಮುಂಜಾನೆಯೇ ಶಾರದಾದೇವಿ ನಗರದ ನಿವಾಸಿ ಶ್ರೀಕಾಂತ್ ಎಂಬುವರು ತಮ್ಮ ಕುಟುಂಬದವರೊಂದಿಗೆ ಅಪ್ಪುವಿನ ಭಾವಚಿತ್ರ ಹಿಡಿದು ಬರಿಗಾಲಿನಲ್ಲಿ ಚಾಮುಂಡಿಬೆಟ್ಟದ ಸಾವಿರ ಮೆಟ್ಟಿಲೇರಿ ಚಾಮುಂಡೇಶ್ವರಿ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಾನು ಅಪ್ಪು ಅವರ ಕಟ್ಟಾ ಅಭಿಮಾನಿಯಾಗಿದ್ದೇನೆ. ಪ್ರತಿ ವರ್ಷವೂ ಅವರ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದೆವು. ಆದರೆ ಈ ಬಾರಿ ಅವರಿಲ್ಲದೆ ಹುಟ್ಟುಹಬ್ಬವನ್ನು ಆಚರಿಸುವುದು ಬೇಸರ ತಂದಿದೆ. ಅವರಿಲ್ಲ ಎನ್ನುವುದಕ್ಕಿಂತ ಅವರು ಎಲ್ಲರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.
ಅಭಿಮಾನಿಗಳಿಂದ ಅಭಿಮಾನದ ಹೊಳೆ
ಅಪ್ಪು ಚಾಮುಂಡೇಶ್ವರಿಯ ಭಕ್ತರಾಗಿದ್ದು, ಪ್ರತಿವರ್ಷವೂ ಬರಿಗಾಲಿನಲ್ಲಿ ಅವರು ಚಾಮುಂಡಿಬೆಟ್ಟವನ್ನು ಏರುತ್ತಿದ್ದರು. ಅವರ ನೆನಪಿಗಾಗಿ ಬರಿಗಾಲಿನಲ್ಲಿ ಅವರ ಭಾವಚಿತ್ರ ಹಿಡಿದು ಚಾಮುಂಡಿಬೆಟ್ಟವೇರುತ್ತಿದ್ದೇವೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಹಾಗೆಯೇ ಬಿಡುಗಡೆಯಾದ ಅವರ ಚಿತ್ರ ಜೇಮ್ಸ್ ಯಶಸ್ಸು ಕಾಣಲಿ ಎಂದು ಆಶಿಸಿ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಪ್ರೀತಿಯ ಅಪ್ಪುಗೆ ಅಭಿಮಾನ ಹೊಳೆ ಹರಿಸುತ್ತಿರುವುದು ಎಲ್ಲೆಂದರಲ್ಲಿ ಕಂಡು ಬರುತ್ತಿದೆ.