ವ್ಯಾಸರಾಜರ ಬೃಂದಾವನ ಧ್ವಂಸ; ಮೈಸೂರಿನಲ್ಲಿ ಬ್ರಾಹ್ಮಣ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು, ಜುಲೈ 18: ಆನೆಗೊಂದಿಯಲ್ಲಿನ ವ್ಯಾಸರಾಜರ ಬೃಂದಾವನವನ್ನು ಧ್ವಂಸಗೊಳಿಸಿರುವ ದುಷ್ಕೃತ್ಯವನ್ನು ಖಂಡಿಸಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘ ಮತ್ತು ಮೈಸೂರು ಬ್ರಾಹ್ಮಣ ಯುವ ವೇದಿಕೆಯು ಕೃಷ್ಣಮೂರ್ತಿಪುರಂನಲ್ಲಿರುವ ವ್ಯಾಸರಾಯರ ಮಠದ ಮುಂದೆ ಪ್ರತಿಭಟನೆ ನಡೆಸಿತು. ಮಠದ ಭಕ್ತಾದಿಗಳು, ವಿದ್ಯಾರ್ಥಿಗಳು, ಬ್ರಾಹ್ಮಣ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಬೇಕು, ಕಿಡಿಗೇಡಿಗಳನ್ನು ಬಂಧಿಸಬೇಕು, ಸರ್ಕಾರದಿಂದ ಜೀರ್ಣೋದ್ಧಾರ ಕೆಲಸ ಆಗಬೇಕೆಂದು ಆಗ್ರಹಿಸಿ ಘೋಷಣೆ ಕೂಗಿದರು.
ನಿಧಿಗಾಗಿ ಆನೆಗುಂದಿಯಲ್ಲಿ ವ್ಯಾಸರಾಜರ ಬೃಂದಾವನ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ ಪ್ರಕಾಶ್ ಮಾತನಾಡಿ, "ಸನಾತನ ಧರ್ಮ, ಭಾರತೀಯ ಸಂಸ್ಕೃತಿಯನ್ನು ಕಾಪಾಡುತ್ತಾ ವ್ಯಾಸರಾಜ ಮಠ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ದೇಶ ವಿದೇಶಗಳಲ್ಲಿ ವ್ಯಾಸರಾಜ ಮಠದ ಶಿಷ್ಯಕೋಟಿ ಇದೆ. ವ್ಯಾಸರಾಜರ ಬೃಂದಾವನ ಅರಣ್ಯಪ್ರದೇಶವಾದ್ದರಿಂದ ಸೂಕ್ತ ರಕ್ಷಣೆಯಿಲ್ಲ. ಪುರಾತತ್ವ ಇಲಾಖೆ, ಆರಕ್ಷಕ ಇಲಾಖೆ, ಅರಣ್ಯ ಇಲಾಖೆ ಈ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಡಾ. ಕೆ.ರಘುರಾಂ ವಾಜಪೇಯಿ ಮಾತನಾಡಿ, "ಮೈಸೂರಿನ ನರಸೀಪುರದ ಸೋಸಲೆಯ ವ್ಯಾಸತೀರ್ಥರು 500 ವರ್ಷಗಳ ಹಿಂದೆಯೇ ವಿಜಯನಗರ ಸಂಸ್ಥಾನದ ದೋಷವನ್ನು ನಿವಾರಿಸಿ ಆಸ್ಥಾನ ಅಲಂಕರಿಸಿ ಕೃಷ್ಣದೇವರಾಯರ ರಾಜಗುರುಗಳಾಗಿ ವ್ಯಾಸರಾಜರಾಗಿ ಗುರುಪರಂಪರೆ ಸ್ಥಾಪಿಸಿದವರು. ಇಂದು ನಿಧಿ ಸಿಗುವ ಆಸೆಯಿಂದ ಕೆಲವು ಕಿಡಿಗೇಡಿಗಳು ಮಾಡಿರುವ ದುಷ್ಕೃತ್ಯ ನಮ್ಮ ಹಿಂದೂ ಸನಾತನ ಧರ್ಮಕ್ಕೆ ಅಪಮಾನ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೃಂದಾವನ ಧ್ವಂಸ: ಕೃತ್ಯ ಮಾಡಿದವರ ವಂಶ ಸರ್ವನಾಶವಾಗಲಿ ಎಂದ ಜಗ್ಗೇಶ್
ಪ್ರತಿಭಟನೆಯಲ್ಲಿ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಎಚ್.ಎನ್. ಶ್ರೀಧರಮೂರ್ತಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಶ್ರೀಧರಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ ಹಾಗೂ ಮಠದ ಶಿಷ್ಯವೃಂದ ಹಾಜರಿದ್ದರು.