ಶಾಸಕ ವಿಶ್ವನಾಥ್ ವಿರುದ್ಧ ಮೈಸೂರಿನಲ್ಲಿ ಪ್ರತಿಭಟನೆ
ಮೈಸೂರು, ಜುಲೈ 8: ಜೆಡಿಎಸ್ ಗೆ ರಾಜೀನಾಮೆ ಕೊಟ್ಟ ಶಾಸಕ ಎಚ್.ವಿಶ್ವನಾಥ್ ಅವರು ಅತೃಪ್ತ ಶಾಸಕರೊಂದಿಗೆ ಸೇರಿ ಒಳಸಂಚು ನಡೆಸುತ್ತಿರುವುದನ್ನು ಖಂಡಿಸಿ ಹುಣಸೂರು ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಪಕ್ಷದ ಕಚೇರಿ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿದರು.
ಕುಮಾರಸ್ವಾಮಿ ವಿರುದ್ಧವೇ ಬಾಣ ತಿರುಗಿಸಿದ ರೆಬೆಲ್ ಶಾಸಕ ವಿಶ್ವನಾಥ್
ಕಚೇರಿ ಮುಂಭಾಗ ಸೇರಿದ ಕಾರ್ಯಕರ್ತರು 'ಪಕ್ಷಕ್ಕೆ ಮೋಸ ಮಾಡಿದ ಶಾಸಕರಿಗೆ ಧಿಕ್ಕಾರ', 'ದೇವೇಗೌಡರಿಗೆ ಮೋಸ ಮಾಡಿದವರಿಗೆ ಧಿಕ್ಕಾರ' ಎಂದು ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರು, 'ರಾಜಕೀಯ ಅಂತ್ಯಕಾಲದಲ್ಲಿ, ಇವರು ಶಾಸಕರಾಗಲು ದೇವೇಗೌಡರು ಕಾರಣರಾಗಿದ್ದಾರೆ. ಆದರೆ ಈಗ ತಾಲ್ಲೂಕಿನ ಜನತೆಗೂ ತಿಳಿಸದೇ, ಪಕ್ಷದ ಹಿರಿಯರ ಬಳಿ ಚರ್ಚಿಸದೇ ಇದ್ದಕ್ಕಿದ್ದಂತೆ ಅತೃಪ್ತರೊಡನೆ ಸೇರಿಕೊಂಡು ರಾಜೀನಾಮೆ ನೀಡುವ ಮೂಲಕ ಪಕ್ಷದ ಗೌರವಕ್ಕೆ ಧಕ್ಕೆಯುಂಟು ಮಾಡಿದ್ದಾರೆ. ದೇವರಾಜ ಅರಸರ ಒಡನಾಡಿ ಎಂದು ಹೇಳಿಕೊಳ್ಳುವ ವಿಶ್ವನಾಥ್, ಇಂದು ಅರಸರ ಹೆಸರಿಗೆ ಮಸಿ ಬಳಿದಿದ್ದಾರೆ. ವಿಶ್ವನಾಥ್ ತಾಲ್ಲೂಕಿನ ಜನತೆ ಮುಂದೆ ಬಂದು ವಿವರ ನೀಡಬೇಕು' ಎಂದು ಒತ್ತಾಯಿಸಿದರು.