ಮದ್ಯದಂಗಡಿ ವಿಚಾರ; ಅಧಿಕಾರಿಗಳಿಗೆ ತಟ್ಟಿದ ಪ್ರತಿಭಟನೆ ಬಿಸಿ!
ಮೈಸೂರು, ಫೆಬ್ರವರಿ 21; ಮದ್ಯದ ಅಂಗಡಿ ತೆರೆಯುವ ವಿಚಾರಕ್ಕೆ ಪರ-ವಿರೋಧ ಚರ್ಚೆಗಳು ನಡೆದು ಕೈಮಿಲಾಯಿಸುವ ಹಂತಕ್ಕೆ ಹೋಯಿತು. ಇದರಿಂದಾಗಿ ಸ್ಥಳ ಪರಿಶೀಲನೆಗೆ ಆಗಮಿಸಿದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದ ಘಟನೆ ಮೈಸೂರು ಜಿಲ್ಲೆಯ ಕೆ. ಆರ್. ನಗರದಲ್ಲಿ ನಡೆದಿದೆ.
ಕೆ. ಆರ್. ನಗರ ಪಟ್ಟಣದ ಚೀರ್ನಹಳ್ಳಿ ರಸ್ತೆಯ ಖಾಸಗಿ ಮಳಿಗೆಯೊಂದರಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿಯನ್ನು ತೆರೆಯುವ ಕುರಿತಂತೆ ಒಂದು ಗುಂಪು ಒತ್ತಾಯಿಸುತ್ತಿದ್ದರೆ, ಮತ್ತೊಂದು ಗುಂಪು ಇದನ್ನು ವಿರೋಧಿಸುತ್ತಲೇ ಬರುತ್ತಿದೆ.
ಮದ್ಯ ಮಾರಾಟ ಕುಸಿತವಾದರೂ ಅಬಕಾರಿ ಇಲಾಖೆಗೆ ಲಾಭ
ಇಲ್ಲಿ ಮದ್ಯದ ಅಂಗಡಿಗೆ ತೆರೆಯುವುದಕ್ಕೆ ವಿರೋಧವಿದ್ದರೂ ಸ್ಥಳ ಪರಿಶೀಲನೆಗೆ ಹುಣಸೂರು ವಿಭಾಗದ ಅಬಕಾರಿ ಉಪ-ಅಧೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಸ್ಥಳೀಯ ಅಬಕಾರಿ ಅಧಿಕಾರಿಗಳು ಆಗಮಿಸಿದ್ದರು.
ಆನ್ಲೈನ್ನಲ್ಲಿ ಮದ್ಯ ಮಾರಾಟ ಬೇಡ, MSIL ಅಂಗಡಿಗೆ ಅವಕಾಶ ಕೊಡಬೇಡಿ
ವಿಷಯ ತಿಳಿದ ಬಡಾವಣೆಯ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಜಮಾಯಿಸಿದರು. ಇಲ್ಲಿ ಮದ್ಯದ ಅಂಗಡಿ ಬೇಡ ಎಂದು ವಿರೋಧ ವ್ಯಕ್ತಪಡಿಸಿದರಯ. ಇದೇ ವೇಳೆ ಮತ್ತೊಂದು ಗುಂಪು ನಮಗೆ ಇಲ್ಲಿಯೇ ಮದ್ಯದ ಅಂಗಡಿ ಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು. ಹೀಗಾಗಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು.
ಕಾಡಿನಲ್ಲಿದ್ದ 6.70 ಲಕ್ಷ ಮೌಲ್ಯದ ಗೋವಾ ಮದ್ಯ ವಶಕ್ಕೆ!
ಈ ಸಂದರ್ಭ ಮಧ್ಯ ಪ್ರವೇಶಿಸಿದ ಪೊಲೀಸರು ಸಮಾಧಾನಪಡಿಸಿ ನಂತರ ಪರ ವಿರೋಧಕ್ಕೆ ಸಂಬಂಧಪಟ್ಟಂತೆ ಸಹಿ ಪಡೆಯಲು ಅವಕಾಶ ಮಾಡಿಕೊಟ್ಟರು. ಬಡಾವಣೆಯ ಮಹಿಳೆಯರು ಈ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟವಿದ್ದು ಪದೇ, ಪದೇ ಅಪಘಾತ ನಡೆಯಲು ಕಾರಣವಾಗಿದೆ.
ಹೀಗಿರುವಾಗ ಮದ್ಯದ ಅಂಗಡಿ ತೆರೆದರೆ ಮತ್ತಷ್ಟು ಅಪಘಾತಕ್ಕೆ ಕಾರಣವಾಗುವುದಲ್ಲದೆ ಮಹಿಳೆಯರು, ಮಕ್ಕಳು ನೆಮ್ಮದಿಯಿಂದ ಓಡಾಡುವುದು ಕಷ್ಟವಾಗುತ್ತದೆ. ಆದ್ದರಿಂದ ಇಲ್ಲಿ ಮದ್ಯದ ಅಂಗಡಿ ತೆರೆಯುವುದು ಬೇಡವೇ ಬೇಡ ಎಂದು ಪಟ್ಟು ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿದರು.
ಆ ನಂತರ ಪರ ಮತ್ತು ವಿರೋಧದ ಗುಂಪುಗಳನ್ನುದ್ದೇಶಿಸಿ ಮಾತನಾಡಿದ ಅಬಕಾರಿ ಅಧೀಕ್ಷಕ ಶ್ರೀನಿವಾಸ್, "ನಾವು ಮದ್ಯದಂಗಡಿ ಆರಂಭಿಸಲು ಬಂದಿಲ್ಲ. ಈ ಹಿಂದೆ ಇಲ್ಲಿ ಎಂಎಸ್ಐಎಲ್ ಮದ್ಯದ ಅಂಗಡಿ ತೆರೆಯಲು ಅನುಮತಿ ಕೇಳಿದಾಗ ನೀವೆಲ್ಲ ದೂರು ನೀಡಿ, ಮನವಿ ಸಲ್ಲಿಸಿ ಬೇಡ ಎಂದಿದ್ದಿರಿ" ಎಂದರು.
"ಈಗ ಸ್ಥಳ ಪರಿಶೀಲನೆಗೆ ಬಂದಿದ್ಧೇವೆ. ನಿಮ್ಮ ಅಭಿಪ್ರಾಯ ತಿಳಿಸಿ ಅದನ್ನು ನಾವು ಇಲಾಖೆ ಹಿರಿಯ ಅಧಿಕಾರಿಗಳಿಗೆ ವರದಿ ಮಾಡುತ್ತೇವೆ. ನಂತರ ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ" ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮುಂದೇನಾಗುತ್ತದೆ?.