ಸಾಂಸ್ಕೃತಿಕ ನಗರಿಯಲ್ಲಿ ವೇಶ್ಯಾವಾಟಿಕೆ ಜಾಲ ಪತ್ತೆ: ಕಿಂಗ್ ಪಿನ್ ಬಂಧನ
ಮೈಸೂರು, ನವೆಂಬರ್ 24: ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳುವ ಜಾಲವೊಂದು ಮೈಸೂರು ನಗರದಲ್ಲಿ ಪತ್ತೆಯಾಗಿದೆ.
ಹಣ ಮತ್ತು ಉದ್ಯೋಗದ ಆಸೆ ತೋರಿಸಿ ಅಮಾಯಕ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳುವ ಖದೀಮರ ಜಾಲವನ್ನು ಹೆಬ್ಬಾಳ ಠಾಣೆ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಘಟಕ ಮತ್ತು ಒಡನಾಡಿ ಸ್ವಯಂ ಸೇವಾ ಸಂಸ್ಥೆ ಭೇದಿಸಿದೆ.
ಎಚ್.ಡಿ.ಕೋಟೆ ರೆಸಾರ್ಟ್ ರೂಂನಲ್ಲಿ ಕಳ್ಳತನ; 24 ಗಂಟೆಯಲ್ಲಿ ಸಿಕ್ಕಿಬಿದ್ದ ಆರೋಪಿ
ಮೈಸೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ ಮೂಲದ ಟೆಕ್ಕಿಯನ್ನು ಸಂಪರ್ಕಿಸಿದ್ದ ಖದೀಮರು, ಅವರಿಗೆ ಅಪ್ರಾಪ್ತ ಹೆಣ್ಣು ಮಗಳೊಬ್ಬಳನ್ನು ಪರಿಚಯ ಮಾಡಿಸಿದ್ದರು. ನಂತರ ಆತನಿಗೆ ನಿರಂತರವಾಗಿ ಹೆಣ್ಣು ಮಕ್ಕಳನ್ನು ಸರಬರಾಜು ಮಾಡುವ ಮೂಲಕ ಲಕ್ಷಗಟ್ಟಲೇ ಹಣ ವಸೂಲು ಮಾಡುತ್ತಿದ್ದರು.
ಆತ್ಮಹತ್ಯೆಗೂ ಯತ್ನಿಸಿದ್ದ
ಈ ಚಟಕ್ಕೆ ಬಿದ್ದ ಆತ ತನ್ನ ವೇತನದ ಜತೆ ಸಾಲ ಮಾಡಿ ಹಣ ನೀಡುವ ಮೂಲಕ ಹೈರಾಣಾಗಿ ಕೆಲಸಕ್ಕೆ ಸರಿಯಾಗಿ ಹೋಗದೇ ಉದ್ಯೋಗವನ್ನೂ ಕಳೆದುಕೊಂಡಿದ್ದ. ಒಮ್ಮೆ ಆತ್ಮಹತ್ಯೆಗೂ ಯತ್ನಿಸಿದ್ದ. ಈ ವಿಚಾರವನ್ನು ಟೆಕ್ಕಿಯ ಸ್ನೇಹಿತರೊಬ್ಬರು, ಒಡನಾಡಿ ಗಮನಕ್ಕೆ ತಂದಿದ್ದರು. ಈ ವೇಶ್ಯಾವಾಟಿಕೆ ತಂಡದ ಮುಖಂಡ ಮಂಡ್ಯ ಮೂಲದವನು ಎಂದು ತಿಳಿದು ಬಂದಿದ್ದು, ಈತ ಹಲವಾರು ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿ ಬಂದಿರುವುದು ತನಿಖೆಯ ವೇಳೆ ಗೊತ್ತಾಗಿದೆ.
ಲಾಡ್ಜ್ ಗಳಿಗೆ ಹೆಣ್ಣು ಮಕ್ಕಳ ಸರಬರಾಜು
ಆತನೊಡನೆ ಓರ್ವ ಮಹಿಳೆಯೂ ಸೇರಿಕೊಂಡಿದ್ದಳು. ಮೈಸೂರು ನಗರದ ಹೆಬ್ಬಾಳದಲ್ಲಿ ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದ ಮಹಿಳೆ, ಯಾರಿಗೂ ಅನುಮಾನ ಬಾರದಂತೆ ಅಲ್ಲಿಂದಲೇ ದಂಧೆ ನಡೆಸುತ್ತಿದ್ದಳು. ಪಿಂಪ್ ಗಳ ಸಹಕಾರದೊಂದಿಗೆ ನಗರದ ವಿವಿಧ ಲಾಡ್ಜ್ ಗಳಿಗೆ ಹೆಣ್ಣು ಮಕ್ಕಳ ಸರಬರಾಜು ಮಾಡುತ್ತಿದ್ದಳು. ಜತೆಗೆ ಹೆಬ್ಬಾಳು, ವಿಜಯನಗರ ಆಸುಪಾಸಿನ ಕೆಲ ಮನೆಗಳಲ್ಲಿಯೂ ಈ ತಂಡ ಹೆಣ್ಣು ಮಕ್ಕಳನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು ಒಡನಾಡಿ ಸಂಸ್ಥೆ ಪತ್ತೆ ಮಾಡಿತ್ತು.
ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ
ನಿನ್ನೆ ಪೊಲೀಸರ ಸಹಾಯದಿಂದ ನಗರದ ವಸತಿಗೃಹದ ಮೇಲೆ ದಾಳಿ ನಡೆಸಿ, ಅಲ್ಲಿದ್ದ ಅಪ್ರಾಪ್ತ ಬಾಲಕಿಯೊಬ್ಬಳನ್ನು ರಕ್ಷಣೆ ಮಾಡಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ಇನ್ನೊಂದು ಮನೆ ಮೇಲೆ ದಾಳಿ ನಡೆಸಿ ಮತ್ತೋರ್ವ ಅಪ್ರಾಪ್ತ ಬಾಲಕಿ, ಹೆಣ್ಣು ಮಕ್ಕಳನ್ನು ಸರಬರಾಜು ಮಾಡುತ್ತಿದ್ದ ಕೆ.ಆರ್.ಪೇಟೆ ಮೂಲದ ಮಹಿಳೆ ಮತ್ತು ಆಕೆಯ ಸಹಾಯಕನನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.
ಶ್ರೀಮಂತರು ಹಾಗೂ ಪ್ರತಿಷ್ಠಿತರ ಪಟ್ಟಿ
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಅಪ್ರಾಪ್ತ ಬಾಲಕಿಯರನ್ನು ಬಳಸಿಕೊಂಡವರಲ್ಲಿ ಶ್ರೀಮಂತರು ಹಾಗೂ ಪ್ರತಿಷ್ಠಿತರ ಪಟ್ಟಿಯೇ ಇರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಳಕೆಯಾದ ಐಷಾರಾಮಿ ಕಟ್ಟಡ ನಗರಪಾಲಿಕೆ ಮಾಜಿ ಸದಸ್ಯರೊಬ್ಬರಿಗೆ ಸೇರಿದೆ. ಸುಮಾರು ಐದು ಅಂತಸ್ತಿನ ಕಟ್ಟಡದಲ್ಲಿ ಒಂದು ಮಹಡಿ ಐದು ಕೊಠಡಿಗಳನ್ನು ವೇಶ್ಯಾವಾಟಿಕೆಗೆ ಮೀಸಲಿಡಲಾಗಿತ್ತು ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬರೀ ಅಪ್ರಾಪ್ತ ಯುವತಿಯರನ್ನೆ ಹೊಂದಿದೆ
ಈ ಕುರಿತು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿದ ಒಡನಾಡಿ ಸಂಸ್ಥೆಯ ನಿರ್ದೇಶಕ ಇದು ಬರೀ ವೇಶ್ಯಾವಾಟಿಕೆ ದಂಧೆಯಲ್ಲ. ಇದು ಅಪ್ರಾಪ್ತ ವಯಸ್ಸಿನ ಬಾಲಕಿಯರ ಲೈಂಗಿಕ ಶೋಷಣೆ ಆಗಿದ್ದು, ಇದರಲ್ಲಿ ಭಾಗಿಯಾಗಿರುವ ಪುರುಷರೆಲ್ಲರೂ ಅತ್ಯಾಚಾರದ ಆರೋಪಿಗಳೇ ಆಗುತ್ತಾರೆ ಎಂದು ಹೇಳಿದರು. ಈ ಜಾಲವು ಬರೀ ಅಪ್ರಾಪ್ತ ಯುವತಿಯರನ್ನೆ ಹೊಂದಿದ್ದು, ಬಾಲ್ಯ ವಿವಾಹ ಮಾಡಿಕೊಳ್ಳುವಾಗ ಪೊಲೀಸರು ರಕ್ಷಿಸಿದ ಹೆಣ್ಣು ಮಕ್ಕಳು, ಪ್ರೇಮದ ಬಲೆಗೆ ಬಿದ್ದಿರುವ ಅಪ್ರಾಪ್ತರನ್ನೇ ಈ ತಂಡ ಟಾರ್ಗೆಟ್ ಮಾಡಿಕೊಳ್ಳುತ್ತಿತ್ತು ಎಂದರು. ಅಲ್ಲದೆ ಈ ತಂಡವು ಅಪ್ರಾಪ್ತರನ್ನು ಸೆಳೆಯಲು ಲವರ್ ಬಾಯ್ ಗಳನ್ನೂ ನೇಮಿಸಿಕೊಂಡಿದೆ ಎಂದೂ ತಿಳಿದುಬಂದಿದೆ ಅಂದು ಅವರು ತಿಳಿಸಿದರು.