ಹೋಟೆಲ್ ನಲ್ಲಿ ವೇಶ್ಯಾವಾಟಿಕೆ: ಓರ್ವ ಯುವತಿಯ ರಕ್ಷಣೆ; ಈರ್ವರ ಬಂಧನ
ಮೈಸೂರು, ಫೆಬ್ರವರಿ 23: ಮೈಸೂರು ಸಮೀಪದ ಹುಣಸೂರಿನ ಬೈಪಾಸ್ ರಸ್ತೆಯ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿದ ಪೊಲೀಸರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಓರ್ವ ಯುವತಿಯನ್ನು ರಕ್ಷಿಸಿದ್ದಾರೆ.
ಇಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಕಳೆದ ಮೂರು ತಿಂಗಳುಗಳಿಂದ ಮೈಸೂರು ಮೂಲದ ಎನ್ಜಿಒ ಒಡನಾಡಿ ಸಂಸ್ಥೆಯ ಕಾರ್ಯಕರ್ತರು ನಿಗಾ ಇರಿಸಿದ್ದರು. ಇಂದು ದಂಧೆ ನಡೆಯುತ್ತಿದ್ದ ವೇಳೆ ಪೊಲೀಸರಿಗೆ ಮಾಹಿತಿ ನೀಡಿ ಕಾರ್ಯಕರ್ತರು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ.
ಮದ್ಯದಂಗಡಿ ವಿಚಾರ; ಅಧಿಕಾರಿಗಳಿಗೆ ತಟ್ಟಿದ ಪ್ರತಿಭಟನೆ ಬಿಸಿ!
ಈ ಹೋಟೆಲ್ ನ ರೂಮಿನ ಒಳಗೇ ಯುವತಿ ಅವಿತುಕೊಳ್ಳಲು ಕಬೋರ್ಡ್ ಮಾದರಿಯಲ್ಲಿ ಅಡಗು ದಾಣ ನಿರ್ಮಿಸಲಾಗಿತ್ತು. ಈ ಅಡಗುದಾಣ ಮೇಲ್ನೋಟಕ್ಕೆ ಪ್ಲೈವುಡ್ ಶೀಟ್ ನಿಂದ ಮಾಡಿದ ಕಬೋರ್ಡ್ ನಂತೆ ಕಾಣುತ್ತದೆ. ಇದರ ಅಳತೆ ಕೂಡ 2 ಅಡಿ ಅಗಲ ಮತ್ತು 4 ಅಡಿಗಳಷ್ಟು ಎತ್ತರ ಇದೆ. ಇದರಲ್ಲಿ ಓರ್ವ ಯುವತಿ ಬಗ್ಗಿಕೊಂಡು ಇರಬಹುದು.
ಪೊಲೀಸ್ ದಾಳಿ ನಡೆದಾಗ ಯುವತಿಯು ಈ ಕಬೋರ್ಡ್ ಒಳಗೆ ಹೋಗಿ ಬಗ್ಗಿಕೊಳ್ಳುತ್ತಾರೆ. ಕಬೋರ್ಡ್ ಒಳಗಿನಿಂದ ಲಾಕ್ ಮಾಡಿಕೊಳ್ಳುತ್ತಾರೆ. ಉಸಿರಾಡಲು ಗಾಳಿಗೂ ಇದರಲ್ಲಿ ತೊಂದರೆ ಇದ್ದು, ಹೊರಗಿನಿಂದ ಗೋಡೆಗೆ ತೂತು ಕೊರೆದು ಉಸಿರಾಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು.
ಮತ್ತೊಂದು ಕೋಣೆಯಲ್ಲಿ ಕಬೋರ್ಡ್ ಒಳಗಿನಿಂದ ಹೊರಗೆ ಹೋಗಲು ಸಂಪರ್ಕ ಕಲ್ಪಿಸಲಾಗಿತ್ತು.
ಇದಲ್ಲದೆ ಹೋಟೆಲ್ ನ ಮತ್ತೊಂದು ರೂಮಿನಲ್ಲಿ ಗೋಡೆ ಪಕ್ಕದಲ್ಲೇ ಒಂದು ಅಡಿ ಅಂತರದಲ್ಲಿ ಮತ್ತೊಂದು ಗೋಡೆ ಕಟ್ಟಿ ಒಳಗೆ ಯುವತಿಯು ಕಷ್ಟದಲ್ಲಿ ನಿಂತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿತ್ತು.
ಮಂಗಳವಾರ ದಾಳಿ ನಡೆಸಿದಾಗ ರೂಂ ಒಂದರಲ್ಲಿ ಇದ್ದ ಗಿರಾಕಿ ಸುನಿಲ್ ಮತ್ತು ಓರ್ವ ಯುವತಿ ಸಿಕ್ಕು ಬಿದ್ದಿದ್ದಾರೆ. ಈ ಸಂಬಂಧ ಲಾಡ್ಜ್ ನ ಮ್ಯಾನೇಜರ್ ಪ್ರಶಾಂತ್ ಮತ್ತು ಸುನಿಲ್ ವಿರುದ್ಧ ಮೊಕದ್ದಮೆ ದಾಖಲು ಮಾಡಿಕೊಂಡು ಹುಣಸೂರು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.
ಹುಣಸೂರು ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಿತೇಶ್ ತನಿಖೆ ನಡೆಸುತ್ತಿದ್ದಾರೆ. ಒಡನಾಡಿ ಸಂಸ್ಥೆಯ ಸ್ಟಾನ್ಲಿ ಪರಶು ಪೊಲೀಸರಿಗೆ ನೆರವು ನೀಡಿದರು.