ವಿರೋಧದ ಹಿನ್ನೆಲೆ ಉದ್ದೇಶಿತ ಬಂಡಿಪುರ ಪ್ರವಾಸೋದ್ಯಮ ಸಫಾರಿ ಸ್ಥಗಿತ
ಮೈಸೂರು, ಅಕ್ಟೋಬರ್ 27; ಅರಣ್ಯ ಇಲಾಖೆಯು ಬಂಡೀಪುರ ಹುಲಿಧಾಮ ವ್ಯಾಪ್ತಿಗೆ ಬರುವ ಜಿಲ್ಲೆಯ ಸರಗೂರು ತಾಲ್ಲೂಕಿನ ನುಗು ವನ್ಯಜೀವಿ ವಲಯದಲ್ಲಿ ಅನುಮತಿ ಪಡೆಯದೇ ಆರಂಭಿಸಲು ಉದ್ದೇಶಿಸಿದ್ದ ಪ್ರವಾಸೋದ್ಯಮ ಸಫಾರಿಗೆ ಪರಿಸರವಾದಿಗಳಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಫಾರಿ ಆದೇಶವನ್ನು ತತ್ ಕ್ಷಣ ಸ್ಥಗಿತಗೊಳಿಸಲಾಗಿದೆ.
ಈ ವನ್ಯಜೀವಿ ವಲಯವು ಹುಲಿ ಸಂರಕ್ಷಿತ ಪ್ರದೇಶವಲ್ಲದೇ ಅತೀ ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದು, ನುಗುವಿನಲ್ಲಿ ಅಕ್ಟೋಬರ್ 30ರಿಂದ ಬೆಳಗ್ಗೆ ಹಾಗೂ ಸಂಜೆ ಸಫಾರಿ ನಡೆಸಲು ಇಲಾಖೆ ಪ್ರಕಟಣೆ ಹೊರಡಿಸಿತ್ತು. ಆದರೆ ಇದಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿದ್ದರಿಂದ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ನುಗು ವನ್ಯಧಾಮದಲ್ಲಿ ಮತ್ತೆ ಆರಂಭವಾಗುತ್ತಾ ಸಫಾರಿ?
ಬಂಡೀಪುರದ ಹುಲಿ ಯೋಜನೆಯ ನಿರ್ದೇಶಕ ಟಿ. ಬಾಲಚಂದ್ರ ಅವರು ಅ.30ರಂದು ನಿವೃತ್ತರಾಗಲಿದ್ದು, ಇದಕ್ಕೆ ಮುನ್ನ ಸಫಾರಿ ಉದ್ಘಾಟಿಸಿ ಹೋಗಲು ನಿರ್ಧರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಬಾಲಚಂದ್ರ, ʻಕಣ್ತಪ್ಪಿನಿಂದ ಪ್ರಕಟಣೆ ಹೊರ ಹೋಗಿದೆ. ಸಫಾರಿ ಆರಂಭಿಸುತ್ತಿಲ್ಲʼ ಎಂದು ತಿಳಿಸಿದ್ದಾರೆ. ಬಂಡೀಪುರದಲ್ಲಿ ಮಂಗಲ ವಲಯ ಎ, ಹೆಡಿಯಾಲ ವಲಯ ಬಿ ಎಂಬ ಪ್ರವಾಸೋದ್ಯಮ ವಲಯಗಳಿದ್ದು, ಮೈಸೂರು ಜಿಲ್ಲೆ ಸರಗೂರು ತಾಲ್ಲೂಕು ವ್ಯಾಪ್ತಿಯ ನುಗುವಿನಲ್ಲಿ ಈಗ ಸಫಾರಿ ಮೂಲಕ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಲು ಯೋಜಿಸಲಾಗಿತ್ತು.
2012ರಲ್ಲಿ ಶಾಸಕರಾಗಿದ್ದ ಮಹಾದೇವ ಪ್ರಸಾದ್, ಚಿಕ್ಕಮಾದು, ಶ್ರೀನಿವಾಸ ಪ್ರಸಾದ್, ಹಾಲಿ ಶಾಸಕ ಪುಟ್ಟರಂಗಶೆಟ್ಟಿ, ಸಂದೇಶ್ ನಾಗರಾಜ್ ಹಾಗೂ ಸ್ಥಳೀಯರು ಸಭೆ ನಡೆಸಿ ಈಗಿರುವ ಪ್ರವಾಸೋದ್ಯಮ ವಲಯವನ್ನು ವಿಸ್ತರಿಸಬಾರದು ಎಂದು ನಿರ್ಣಯಿಸಿದ್ದರು.
ಮೈಸೂರು: 7 ತಿಂಗಳ ನಂತರ ನಾಗರಹೊಳೆ ಸಫಾರಿ ಪುನರಾರಂಭ
ನುಗು ಭಾಗದಲ್ಲಿ ಮಾಜಿ ಸಚಿವರೊಬ್ಬರ ಪುತ್ರನಿಗೆ ಸೇರಿದ ಜಮೀನು ಇದ್ದು, ಅವರ ಪ್ರಭಾವದಿಂದ ಸಫಾರಿ ಆರಂಭಿಸಲಾಗುತ್ತಿದೆಯೇ ಎನ್ನುವ ಅನುಮಾನ ಹುಟ್ಟಿಕೊಂಡಿದೆ. ನುಗು ಪ್ರದೇಶವು ಮಾನವ - ಆನೆಗಳ ಸಂಘರ್ಷ ಇರುವ ಪ್ರದೇಶವಾಗಿದ್ದು, ಪ್ರವಾಸೀ ಚಟುವಟಿಕೆ ಆರಂಭಗೊಂಡರೆ ಸಂಘರ್ಷ ಹೆಚ್ಚಲು ದಾರಿಯಾಗಬಹುದು ಎಂಬ ಆತಂಕವಿದೆ.
ನುಗು ಅರಣ್ಯ ಎಕೋ ಸೆನ್ಸಿಟಿವ್ ಝೋನ್ ವ್ಯಾಪ್ತಿಯಲ್ಲಿದ್ದು, ಪ್ರವಾಸೋದ್ಯಮ ಚಟುವಟಿಕೆಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಅನುಮತಿ ಬೇಕು. ಅವರೂ ಅನುಮತಿ ನೀಡುವುದು ಕಷ್ಟ. ಎನ್ಟಿಸಿಎ ಗಮನಕ್ಕೆ ತಾರದೇ ಆರಂಭಿಸಲಾಗುತ್ತಿತ್ತೆ ಎನ್ನುವ ಅನುಮಾನವೂ ಇದೆ. ಹಾಲಿ ಬಂಡೀಪುರ ನಿರ್ದೇಶಕ ಹಾಗೂ ಅರಣ್ಯ ಸಂರಕ್ಷಣಾಧಿಕಾರಿ ಟಿ.ಬಾಲಚಂದ್ರ 31ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದು, ತರಾತುರಿಯಲ್ಲಿ ನುಗು ಸಫಾರಿ ಆರಂಭಿಸಲು ಮುಂದಾಗಿದ್ದು ಚರ್ಚೆಗೆ ಗ್ರಾಸವಾಗಿದೆ.