ಇನ್ಮುಂದೆ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಕಚೇರಿಗೆ ಹೋಗಬೇಕಿಲ್ಲ
ಮೈಸೂರು, ಮಾರ್ಚ್ 03: ಆಸ್ತಿ ತೆರಿಗೆ ಪಾವತಿಸಲು ಇನ್ಮುಂದೆ ಪಾಲಿಕೆ ಕಚೇರಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ತೆರಿಗೆ ಪಾವತಿಸಬಹುದು. ಆಸ್ತಿ ತೆರಿಗೆಯನ್ನು ಇನ್ಮುಂದೆ ಆನ್ ಲೈನ್ ನಲ್ಲೂ ಪಾವತಿಸಬಹುದು.
ಏಪ್ರಿಲ್ 1 ರಿಂದ ನಿಮ್ಮ ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕವೇ ಪಾವತಿಸಬಹುದು. ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸಲು ಮೈಸೂರು ಮಹಾನಗರ ಪಾಲಿಕೆ ಅವಕಾಶ ಕಲ್ಪಿಸಿದ್ದು, ನೂತನ ಆರ್ಥಿಕ ವರ್ಷದಿಂದ ಆನ್ ಲೈನ್ ಸೌಲಭ್ಯ ಲಭ್ಯವಾಗಲಿದೆ.
"ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಬಜೆಟ್ ನಲ್ಲಿ ಹಣ ಮೀಸಲಿಡಿ'
ಏಪ್ರಿಲ್ 1 ರಿಂದಲೇ ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾಹಿತಿ ನೀಡಿದರು. ಪಾಲಿಕೆಯಲ್ಲಿರುವ ಅವರ ಕಛೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ""ಆನ್ ಲೈನ್ ನಲ್ಲಿ ನಲವತ್ತಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಏಪ್ರಿಲ್ ಒಂದರಿಂದ ಆನ್ ಲೈನ್ ಮೂಲಕ ಪಾವತಿಸಲು ಅವಕಾಶ ಮಾಡಿಕೊಡಲಾಗುವುದು'' ಎಂದರು.
ವಿವಿಧ ಆ್ಯಪ್ ಗಳ ಮೂಲಕ ತೆರಿಗೆ ಪಾವತಿಸಬಹುದಾಗಿದೆ. ಇದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತಿದ್ದು, ಅವರ ಆಸ್ತಿ ತೆರಿಗೆ ಬಗ್ಗೆ ಮಾಹಿತಿ ದೊರೆಯಲಿದೆ. ಜೊತೆಗೆ ಜನರು ಕೌಂಟರ್ ನಲ್ಲಿ ನಿಂತು ತೆರಿಗೆ ಪಾವತಿ ಮಾಡುವುದು ತಪ್ಪುತ್ತದೆ. ಇದರಿಂದ ಪಾಲಿಕೆ ಕೂಡ ಹೆಚ್ಚು ತೆರಿಗೆ ಸಂಗ್ರಹಿಸಲು ನೆರವಾಗುತ್ತದೆ. ಜನರಿಗೂ ಹಾಗೂ ಪಾಲಿಕೆಗೂ ಇದರಿಂದ ಅನುಕೂಲ ಆಗಲಿದೆ ಎಂದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಲು ಪಾಲಿಕೆ ಸಜ್ಜಾಗಿದೆ ಎಂದು ಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು. ಮೈಸೂರು ನಗರದಲ್ಲಿ ನಾಲ್ಕು ಭಾಗಗಳಾಗಿ ವಿಂಗಡಿಸಿ ಕ್ರಮ ಕೈಗೊಳ್ಳಲಾಗುವುದು, ನೀರಿನ ಸಮಸ್ಯೆ ಬಂದ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ವಾಟರ್ ಮನ್ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಎನ್.ಆರ್ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉದ್ಬವವಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಮೇಗಳಾಪುರದ ವಾಟರ್ ಸಫ್ಲೈ ಯೋಜನೆ ಪೂರ್ಣಗೊಂಡರೆ ಎನ್.ಆರ್ ಕ್ಷೇತ್ರದ ನೀರಿನ ಸಮಸ್ಯೆ ಬಗೆಹರಿಯಲಿದೆ. ಮೇಗಳಾಪುರದ ಯೋಜನೆಯ ಪ್ರಗತಿ ಬಗ್ಗೆ ಪ್ರತಿದಿನ ಮಾಹಿತಿ ಪಡೆಯುತ್ತಿದ್ದೇವೆ.
ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣವಾಗುವುದಾಗಿ ವಾಟರ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ. ನೀರು ಪೋಲಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಅನಧಿಕೃತ ಕನೆಕ್ಷನ್ ಗಳನ್ನು ಅಧಿಕೃತಗೊಳಿಸಲು ಸೂಚನೆ ನೀಡಲಾಗಿದೆ. ನೀರು ಸೋರಿಕೆ ತಡೆಗಟ್ಟಲು ಎಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗಡೆ ತಿಳಿಸಿದರು.