ಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನ
ಮೈಸೂರು, ಜೂನ್ 25 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಬೆನ್ನಲ್ಲೇ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಹತ್ಯೆ ಮಾಡಲು ಹಂತಕರು ಸಿದ್ಧತೆ ನಡೆಸಿದ್ದರು. ಭಗವಾನ್ ಹತ್ಯೆಗೆ ಪಿಸ್ತೂಲು ಸಾಗಾಟ ಮಾಡುವ ವೇಳೆ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.
ನವೀನ್ ಬಂಧನದ ಬಳಿಕ ಇಡೀ ಹಂತಕರ ತಂಡ ಎಸ್ ಐಟಿ ಬಲೆಗೆ ಬಿದ್ದಿತ್ತು. ಇನ್ನು ವಿಚಾರಣೆ ನಡೆಸುತ್ತಿರುವ ಹಂತದಲ್ಲೇ ಅನೇಕ ಒಳಸುಳಿವುಗಳು ಸಿಗತೊಡಗಿವೆ. ಹಾಗಾದರೆ ಈ ಎಲ್ಲಾ ಬೆಳವಣಿಗೆಗಳಿಂದ ಭಗವಾನ್ ಅವರಿಗೆ ನಿಜವಾಗಲೂ ಭಯ ಶುರುವಾಗಿದೆಯೇ? ಅವರ ಅಭಿಪ್ರಾಯವೇನು ಎಂಬುದರ ಕುರಿತಾಗಿ ಸ್ವತಃ ಅವರೇ ಮಾತನಾಡಿದ್ದಾರೆ.
ಕೆಎಸ್ ಭಗವಾನ್ ಹತ್ಯೆಗೆ ಕೊಳ್ಳೇಗಾಲ ಕಾಡಲ್ಲಿ ತರಬೇತಿಯೂ ಮುಗಿದಿತ್ತು!
ಸೈದ್ಧಾಂತಿಕ ಭಿನ್ನಾಭಿಪ್ರಾಯ ಮತ್ತಿತರ ಕಾರಣಗಳಿಗೆ ಒಬ್ಬ ವ್ಯಕ್ತಿಯನ್ನೇ ಇಲ್ಲವಾಗಿಸುವ ಆಲೋಚನೆ ಎಂಥ ಅಪಾಯಕಾರಿ ಎಂಬುದನ್ನು ಖಂಡಿತಾ ವಿವರಿಸುವ ಅಗತ್ಯವಿಲ್ಲ. ಗೌರಿ ಲಂಕೇಶ್ ಹಂತಕರು ತಾವು ಕೊಲ್ಲಲು ನಿರ್ಧರಿಸಿದ್ದ ಪ್ರಗತಿಪರರೊಂದು ಪಟ್ಟಿಯೇ ಮಾಡಿಟ್ಟುಕೊಂಡಿದ್ದರು ಎಂಬ ಸುದ್ದಿ ಹಿನ್ನೆಲೆಯಲ್ಲಿ ಕೆ.ಎಸ್.ಭಗವಾನ್ ಅವರನ್ನು ಒನ್ಇಂಡಿಯಾ ಕನ್ನಡಕ್ಕಾಗಿ ಸಂದರ್ಶನ ಮಾಡಲಾಗಿದೆ.
ಪ್ರಶ್ನೆ: ನಿಮ್ಮನ್ನೇ ಕೊಲೆ ಮಾಡಬೇಕು ಎಂಬ ಆಲೋಚನೆ ಏಕೆ ಬಂದಿರಬಹುದು? ಇದರ ಹಿಂದಿನ ಕಾರಣವಾದರೂ ಏನಿರಬಹುದು?
ಕೆ.ಎಸ್.ಭಗವಾನ್: ಅದನ್ನು ಹೊಟ್ಟೆ ಮಂಜ ಹಾಗೂ ಇತರ ಆರೋಪಿಗಳೇ ಸ್ಪಷ್ಟಪಡಿಸಬೇಕಿದೆ. ಅವನು ನಮ್ಮ ಮನೆಯ ಸುತ್ತ -ಮುತ್ತ ಸುತ್ತಾಡಿ ಇಲ್ಲೇನೂ ಮಾಡುವುದಕ್ಕಾಗುವುದಿಲ್ಲ ಎಂದು ಹಿಂತಿರುಗಿದ್ದ. ಮಾಧ್ಯಮಗಳಲ್ಲಿ ಹೆಸರು ಬಂದ ಮೇಲೆಯೇ, ಈ ಮಾಹಿತಿ ಗೊತ್ತಾದ ಮೇಲೆ ನನಗೇ ಆಶ್ಚರ್ಯವಾಗುತ್ತದೆ.
ನಾನು ಯಾವುದೇ ರೀತಿ ಸಮಾಜವಿರೋಧಿ ಕೆಲಸ ಮಾಡಿಲ್ಲ. ನಾನು ಮಾಡಿರುವುದು ಸರ್ವ ಜನರ ಏಳಿಗೆಯ ಕೆಲಸ. ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತಗಳನ್ನು ಎತ್ತಿ ಹಿಡಿದ್ದೇನೆ. ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸರ ಸಿದ್ಧಾಂತವನ್ನೇ ರೂಢಿಸಿಕೊಂಡಿದ್ದೇನೆ. ಆರೋಪಿಗಳು ಅವರ ತಪ್ಪು ತಿಳಿವಳಿಕೆಯನ್ನು ಮೊದಲು ಸರಿಪಡಿಸಿಕೊಂಡು ನಡೆಯಬೇಕು ಎಂಬುದು ನನ್ನ ಅಪೇಕ್ಷೆ.
ಪ್ರಶ್ನೆ: ನಿಮ್ಮ ನೇರ ನುಡಿ, ಪ್ರಗತಿಪರ ಧೋರಣೆಯೇ ನಿಮ್ಮ ವಿರುದ್ಧ ಈ ಪರಿ ಸಿಟ್ಟಿಗೆ ಕಾರಣವಾಯಿತೇ ?
ಕೆ.ಎಸ್.ಭಗವಾನ್: ಖಂಡಿತಾ ಇಲ್ಲ. ಆ ಪರಿಸ್ಥಿತಿಯನ್ನು ತಂದಿದ್ದು ನನ್ನನ್ನು ಕೊಲ್ಲಲು ಸಂಚುಹಾಕಿದ ಆರೋಪಿಗಳೇ. ಅವರು ಇಂತಹ ಸಂಕುಚಿತ ಮನೋಭಾವವನ್ನು ಮೊದಲು ಬಿಡಬೇಕು.
ಪ್ರಶ್ನೆ: ನೀವು ಎಡಫಂಥೀಯರಾ ಅಥವಾ ಬಲಪಂಥೀಯರಾ ?
ಕೆ.ಎಸ್.ಭಗವಾನ್: ನಾನು ಎರಡೂ ಅಲ್ಲ, ಮಧ್ಯದವನೂ ಅಲ್ಲ. ಪಕ್ಕಾ ಮಾನವತಾವಾದಿ. ಎಲ್ಲರೂ ಮನುಷ್ಯರು ಎನ್ನುವ ಮನುಷ್ಯ ನಾನು. ಸಂಘಜೀವನದಲ್ಲಿ ಬದುಕುತ್ತಿರುವವನು ನಾನು. ಯಾವ ಪಂಕ್ತಿಗೂ ಸೇರಿಲ್ಲ. ಮನುವಾದವನ್ನು ನಾನು ಹರಡುತ್ತಿಲ್ಲ. ಈ ಮನುವಾದವನ್ನು ಒಂದು ಪಕ್ಷ ಹರಡುತ್ತಿದೆ. ನಾನು ಅದರ ವಿರೋಧಿಯಷ್ಟೇ. ನನಗೆ ಬೇಕಾದದ್ದು ಮನುವಾದವಲ್ಲ, ಮಾನವತಾವಾದ.
ಪ್ರಶ್ನೆ: ನಿಮ್ಮ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಸತ್ಯ ಹೊರಬಂದ ಮೇಲೆ ಹೆಚ್ಚಿನ ಭದ್ರತೆ ಬೇಕು ಅನಿಸುತ್ತಿದೆಯಾ?
ಕೆ.ಎಸ್.ಭಗವಾನ್: ನಾನು ಯಾವ ಭದ್ರತೆ ಹಾಗೂ ಅಂಗರಕ್ಷಕರನ್ನು ಕೇಳಿಲ್ಲ. ಎಸ್ಐಟಿಯವರು ಭದ್ರತೆ ಕುರಿತಾಗಿ ಸಂಪರ್ಕಿಸಿಲ್ಲ. ಈ ಕುರಿತಾಗಿ ಅವರೇ ವರದಿ ತರಿಸಿಕೊಂಡು ಪರಿಶೀಲಿಸಿದ್ದಾರೆ ಎಂದು ಮಾಹಿತಿ ಬಂದಿದೆ. ಬಹುಶಃ ಮುಂದಿನ ದಿನಗಳಲ್ಲಿ ಇನ್ನಿಬ್ಬರು ಅಂಗರಕ್ಷಕರನ್ನು ನೇಮಕ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಶ್ನೆ: ಈ ಎಲ್ಲ ವಿದ್ಯಮಾನಗಳಿಂದ ನಿಮಗೆ ಭಯ ಶುರುವಾಗಿದೆಯೇ ?
ಕೆ.ಎಸ್.ಭಗವಾನ್: ನಾನು ಸಂವಿಧಾನ ವಿರೋಧಿ ಕೆಲಸ ಮಾಡಿಲ್ಲ. ಹಿಂದೂ ಧರ್ಮದಲ್ಲಿರುವ ತಪ್ಪುಗಳ ಬಗ್ಗೆ ಮಾತನಾಡಿದ್ದೇನೆ. ಅದನ್ನೇ ತಪ್ಪು ಎಂದುಕೊಂಡರೆ ನಾನೇನು ಮಾಡಲಾದೀತು? ಸ್ವಾಮಿ ವಿವೇಕಾನಂದ ಅವರ ವಿಚಾರಧಾರೆಗಳನ್ನು ಅನುಸರಿಸುತ್ತಿರುವ ನಾನು ಯಾರಿಗೂ ಹೆದರುವುದಿಲ್ಲ. ಆತ ನನ್ನ ಪುಸ್ತಕಗಳನ್ನು ಓದಿದ್ದಾನೋ ಇಲ್ಲವೋ ಗೊತ್ತಿಲ್ಲ. ನಾನು ಹಿಂದೂ ಧರ್ಮದ ವಿರೋಧಿಯಲ್ಲ. ಆದರೆ ಧರ್ಮದಲ್ಲಿರುವ ಮೇಲು, ಕೀಳು, ಅಸ್ಪೃಶ್ಯತೆ, ಜಾತೀಯತೆ, ಮೌಢ್ಯಗಳ ವಿರೋಧಿ. ಉಪನಿಷತ್ತು, ವೇದಾಂತವನ್ನು ನಾನು ಬಹಳವಾಗಿ ಇಷ್ಟಪಡುತ್ತೇನೆ. ಹೀಗಿದ್ದರೂ, ನನ್ನ ಬಗ್ಗೆ ತಪ್ಪು ತಿಳಿವಳಿಕೆ ಏಕೆ ಎಂದು ಅರ್ಥವಾಗುತ್ತಿಲ್ಲ
ಪ್ರಶ್ನೆ: ಎಸ್ಐಟಿ ತನಿಖೆ ಇನ್ನಷ್ಟು ಚುರುಕುಗೊಳ್ಳಬೇಕು ಎಂದು ನಿಮಗೆ ಅನ್ನಿಸುತ್ತಾ?
ಕೆ.ಎಸ್.ಭಗವಾನ್: ಸದ್ಯಕ್ಕೆ ಅದ್ಭುತ ಕೆಲಸವನ್ನು ನಡೆಸುತ್ತಿದೆ ಎಸ್ಐಟಿ ತಂಡ. ಪಾನ್ಸಾರೆ, ಧಾಬೋಲ್ಕರ್ ಹತ್ಯೆ ಕೂಡ ಗೌರಿ ಹತ್ಯೆಯ ಕೇಸ್ ನೊಳಗಿನಿಂದಲೇ ಹೊರಬರುತ್ತಿದೆ. ಹತ್ಯೆಕೋರರು ತಾವು ಬಹಳ ಚಾಣಾಕ್ಷರು ಎಂದುಕೊಂಡಿದ್ದಾರೆ. ಆದರೆ ಅವರನ್ನು ಬಡಿದುಹಾಕಲು ರಾಜ್ಯ ಪೊಲೀಸ್ ನಿಯೋಗವೇ ಸಾಕು. ಸದ್ಯದ ಅವರ ಕಾಯಕ ಪ್ರಶಂಸನಾರ್ಹವೇ ಸರಿ.
ಕಾನೂನಿನ ಮೇಲೆ ನಂಬಿಕೆ ಮೂಡುವಂಥ ಇಂದಿನ ಬೆಳವಣಿಗೆಗೆ ಪ್ರಮುಖ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಎಲ್ಲರೂ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಿ ಎಂದು ಒತ್ತಡ ಹೇರಿದಾಗಲೂ ಬಿಡದೇ ನಮ್ಮ ಎಸ್ ಐಟಿ ತಂಡಕ್ಕೆ ತನಿಖೆ ವಹಿಸಿದ್ದರು. ಅದು ಈ ಹಂತಕ್ಕೆ ತಲುಪಿರುವುದು ಪ್ರಶಂಸನಾರ್ಹವೇ ಸರಿ. ನನಗೆ ಸೂಕ್ತ ಸಂದರ್ಭದಲ್ಲಿ ಬದುಕು ಕೊಟ್ಟ ಸಿದ್ದರಾಮಯ್ಯಗೆ ನಾನು ಋಣಿ. ಅವರು ನನ್ನ ಪ್ರಾಣ ಉಳಿಸಿದ ಮಹಾನುಭಾವರು.