ಮೈಸೂರಿನಲ್ಲಿ ಪ್ರೊ.ಕೆಎಸ್ ಭಗವಾನ್ ವಿರುದ್ಧ ಎಫ್ ಐಆರ್ ದಾಖಲು
ಮೈಸೂರು, ಜನವರಿ 1: ಪ್ರಗತಿಪರ ಚಿಂತಕ ಪ್ರೊ .ಕೆ.ಎಸ್. ಭಗವಾನ್ ಅವರ ವಿರುದ್ಧ ಪೊಲಿಸರು 295(ಎ) ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ರಾಮ ಮಂದಿರ ಏಕೆ ಬೇಕು?' ಪುಸ್ತಕಗಳನ್ನು ವಶಕ್ಕೆ ಪಡೆದು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಪ್ರೊ.ಭಗವಾನ್ ಅವರು ಈ ಹಿಂದೆಯೇ ರಾಮ ಮಂದಿರ ಏಕೆ ಬೇಕು?' ಎಂಬ ಪುಸ್ತಕವನ್ನು ಬರೆದಿದ್ದರು. ಇದೀಗ ಅದು ಎರಡನೇ ಮುದ್ರಣ ಕಂಡಿದೆ. ಈ ಪುಸ್ತಕದಲ್ಲಿ ವಾಲ್ಮೀಕಿ ಅವರು ಕಂಡಂತೆ ಶ್ರೀರಾಮನು ದೇವರಲ್ಲ, ಆತ ಮಾಂಸ ಭಕ್ಷಣೆ ಮಾಡುತ್ತಿದ್ದ, ಮದ್ಯ ಸೇವಿಸುತ್ತಿದ್ದ. ಸ್ತ್ರೀಯರ ನೃತ್ಯವನ್ನು ವೀಕ್ಷಿಸುತ್ತಿದ್ದ ಎಂಬ ಸಾಲುಗಳನ್ನು ಬರೆದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ರಾಮ ಮರ್ಯಾದಾ ಪುರುಷೋತ್ತಮನೇ ಅಲ್ಲ ಎಂದ ಭಗವಾನ್ ಸಂದರ್ಶನ
ಈ ಹಿನ್ನೆಲೆಯಲ್ಲಿ ಮೂರು ದಿನಗಳ ಹಿಂದೆ ಹಿಂದೂಪರ ಸಂಘಟನೆಗಳು ಪ್ರೊ. ಕೆ.ಎಸ್. ಭಗವಾನ್ ಅವರ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದ್ದರು.
ಕುವೆಂಪುನಗರ, ನಜರ್ ಬಾದ್, ವಿದ್ಯಾರಣ್ಯಪುರಂ ಸೇರಿದಂತೆ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಭಗವಾನ್ ಅವರ ವಿರುದ್ಧ ದೂರು ದಾಖಲಿಸಿದ್ದರು. ಅದರಂತೆ ಕುವೆಂಪುನಗರ ಪೊಲೀಸ್ ಠಾಣೆ ಯಲ್ಲಿ ಕೂಡ ದೂರು ದಾಖಲಾಗಿದ್ದು, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ 295(ಎ) ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿರುವ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ:ಪ್ರೊ.ಕೆ.ಎಸ್. ಭಗವಾನ್
ಇದೇ ವೇಳೆ ವಿವಾದಿತ ಪುಸ್ತಕದ ಪ್ರತಿಗಳನ್ನೂ ಕೂಡ ವಶಕ್ಕೆ ಪಡೆದಿರುವ ಪೊಲೀಸರು, ಅದರಲ್ಲಿನ ವಿವಾದಿತ ಅಂಶಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಜನರ ಧಾರ್ಮಿಕ ಭಾವನೆಗಳೂ ಹಾಗೂ ನಂಬಿಕೆಗಳಿಗೆ ಧಕ್ಕೆ ತರುವುದೂ ಕೂಡ ಕ್ರಿಮಿನಲ್ ಮೊಕದ್ದಮೆ ವ್ಯಾಪ್ತಿಗೆ ಬರುತ್ತದೆ. ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದಲ್ಲಿ ಕನಿಷ್ಠ 3 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಉಪನಿಷತ್, ವೇದಾಂತ ಮೆಚ್ಚುವ ನನ್ನ ಮೇಲೇಕೆ ಸಿಟ್ಟು?: ಭಗವಾನ್ ಸಂದರ್ಶನ
ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನದಲ್ಲಿ ಜನರಲ್ಲಿ ಮೂಢನಂಬಿಕೆ ಹಾಗೂ ಮೌಢ್ಯಗಳನ್ನು ಬಿತ್ತಬಾರದು ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದರೆ, ಕೆಲ ಪಟ್ಟಭದ್ರರು, ಜನರ ಭಾವನೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮೂಲಕ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾನು ಮಾಡಿದ್ದೇನೆ. ಇದರಲ್ಲಿ ನನಗೆ ಯಾವುದೇ ಭಯವಿಲ್ಲ ಎಂದು ಭಗವಾನ್ ತಿಳಿಸಿದ್ದಾರೆ.