ಮಳೆರಾಯನ ಓಲೈಕೆಗೆ ಎಚ್ಡಿ ಕೋಟೆಯಲ್ಲಿ ಕಪ್ಪೆ ಮೆರವಣಿಗೆ
ಮೈಸೂರು, ಏಪ್ರಿಲ್ 18 : ಬೇಸಿಗೆಯ ಬಿಸಿಲು ತಲೆಸುಡುತ್ತಿದ್ದರೆ, ಗಿಡಮರಗಳು ಒಣಗುತ್ತಿವೆ. ಭೂಮಿ ಕಾದು ಕಬ್ಬಿಣವಾಗುತ್ತಿದೆ. ಬೆಳೆ ಬೆಳೆಯುವುದಿರಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೀಗ ನಿರ್ಮಾಣವಾಗಿದೆ. ಹೋಮಹವನ ಮಾಡಿದಾಗಲೂ ವರುಣದೇವ ಬಗ್ಗದಿದ್ದಾಗ ಜನರಿಗೆ ಉಳಿದದ್ದು ಒಂದೇ ದಾರಿ, ಕಪ್ಪೆ ಮೆರವಣಿಗೆ!
ಇದೇನಪ್ಪಾ ಕಪ್ಪೆ ಮೆರವಣಿಗೆ ಎಂದು ಅಚ್ಚರಿಪಡಬೇಡಿ. ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದರೆ ಮತ್ತೆ ಕೆಲವೆಡೆ ಒಂದೇ ಒಂದು ಹನಿಯೂ ಜಿನುಗಿಲ್ಲ. ಬೆವರಿನಿಂದ ಅಂಗಿ ಒದ್ದೆಯಾಗುತ್ತಿದೆಯೇ ಹೊರತು ಇಳೆ ತಣಿಯುತ್ತಿಲ್ಲ. ಮಳೆ ಬಾರದೆ ಇರುವ ಕಾರಣ ಮಳೆಗಾಗಿ ವಿವಿಧ ಆಚರಣೆಗಳನ್ನು ಜನ ಮಾಡುತ್ತಿದ್ದು ಅದರಲ್ಲಿ ಇದೂ ಒಂದಾಗಿದೆ.
ಮಳೆಗಾಲ ಹತ್ತಿರ ಬಂದಂತೆಲ್ಲ ಚರಂಡಿಯಲ್ಲಿ ಕುಳಿತ ಕಪ್ಪೆಗಳು ಒಡರ್ ಒಡರ್ ಎಂದು ಸದ್ದು ಮಾಡುವುದು ಸಾಮಾನ್ಯ ಸಂಗತಿ. ಈ ಕಾರಣದಿಂದಲೋ ಏನೋ ಹಳ್ಳಿಗಳಲ್ಲಿ ಕಪ್ಪೆಗಳ ಮೆರವಣಿಗೆ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳುವ ನಂಬಿಕೆ ಜಾರಿಯಲ್ಲಿದೆ. ಇದನ್ನು ಮೂಢನಂಬಿಕೆ ಅಂದರೂ ಮಳೆಗಾಗಿ ಜನರು ಎಷ್ಟು ಪರಿತಪಿಸುತ್ತಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆ. [ಮುನಿಸಿಕೊಂಡಿರುವ ವರುಣ ಮಹಾಶಯನಿಗಾಗಿ ಕತ್ತೆಗಳ ಮದುವೆ]
ಹಿಂದಿನ ಕಾಲದಲ್ಲಿ ಮಳೆ ಬಾರದಿದ್ದಾಗ ಏನೇನೆಲ್ಲ ಸಂಪ್ರದಾಯವನ್ನು ಮಾಡುತ್ತಿದ್ದರೋ ಅದನ್ನು ಈಗ ಮಾಡಲು ಆರಂಭಿಸಿದ್ದಾರೆ. ತಾತಮುತ್ತಾಂದಿರ ಕಾಲದಲ್ಲಿ ನಡೆಯುತ್ತಿದ್ದ ಆಚರಣೆಯನ್ನು ಮೌಢ್ಯ ಎಂದು ಟೀಕಿಸುತ್ತಲೇ ಬಂದಿದ್ದರೂ ಇದೀಗ ಕೆಲವೆಡೆ ಆವತ್ತಿನ ಸಂಪ್ರದಾಯವನ್ನು ಮತ್ತೆ ಆಚರಣೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸುತ್ತಿರುವುದು ಕಂಡು ಬರುತ್ತಿದೆ.
ಕೆಲ ದಿನಗಳ ಹಿಂದೆಯಷ್ಟೆ ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಕತ್ತೆಗೆ ಮದುವೆ ಮಾಡಲಾಗಿತ್ತು. ಇದೀಗ ಎಚ್.ಡಿ.ಕೋಟೆ ತಾಲೂಕಿನ ಸರಗೂರು ಸಮೀಪವಿರುವ ಎನ್ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಕ್ಕಹಳ್ಳಿ ಕಾಲೋನಿ ಗ್ರಾಮದಲ್ಲಿ ಮಳೆಗಾಗಿ ಮಕ್ಕಳು ಒನಕೆಯಲ್ಲಿ ಕಪ್ಪೆಯನ್ನು ಕಟ್ಟಿ ಊರಿನ ತುಂಬಾ ಮೆರವಣಿಗೆ ಮಾಡಿದ್ದಾರೆ. [ಕತ್ತಿ ಲಗ್ನಾ ಮಾಡಿದ್ರ... ಮಳಿ ಹೆಂಗ ಬರತದ?]
ಪ್ರತಿ ಮನೆಗಳಿಗೆ ತೆರಳಿ ಕಪ್ಪೆಗೆ ನೀರು ಹಾಕಿಸಿ ತಾವು ನೀರು ಹಾಕಿಸಿಕೊಂಡು ಹುಯ್ಯೋ ಹುಯ್ಯೋ ಮಳೆರಾಯ ಎಂದು ಕರೆಯುತ್ತಾ ಜನರಿಂದ ಕಪ್ಪೆಗೆ ಪೂಜೆ ಮಾಡಿಸಿಕೊಂಡು, ಮನೆಮನೆಯಿಂದ ಸಂಗ್ರಹಿಸಿದ ಆಹಾರ ಪದಾರ್ಥದಿಂದ ಅಡುಗೆ ಮಾಡಿ ಸಹಭೋಜನ ನಡೆಸಲಾಯಿತು. ಕಪ್ಪೆ ಮೆರವಣಿಗೆಯಿಂದ ಮಳೆ ಬರುತ್ತಾ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.