ಹಿಂದಿ ಹೇರಿಕೆ; ಕನ್ನಡದ ಆದ್ಯತೆಗೆ ಒತ್ತಾಯಿಸಿ ಮೈಸೂರು ಡಿಸಿ ಕಚೇರಿ ಎದುರು ಪ್ರತಿಭಟನೆ
ಮೈಸೂರು, ಸೆಪ್ಟೆಂಬರ್ 14: ಹಿಂದಿ ಮತ್ತು ಸಂಸ್ಕೃತ ಹೇರಿಕೆಯನ್ನು ತಡೆಗಟ್ಟಿ ಕನ್ನಡ ನಾಡು, ನುಡಿ, ಜೀವನದ ಸ್ವಾಭಿಮಾನಿ ಬೆಳವಣಿಗೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿ ಕನ್ನಡ ಪರ ಮತ್ತು ಪ್ರಗತಿಪರ ಸಂಘಟನೆಗಳು ಸೇರಿ ಇಂದು ಪ್ರತಿಭಟನೆ ನಡೆಸಿದವು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಭಾರತದಲ್ಲಿ ಅತಿಹೆಚ್ಚು ಜನ ಹಿಂದಿ ಭಾಷಿಕರು ಇದ್ದಾರೆ. ಆದ್ದರಿಂದ ಹಿಂದಿ ಭಾಷೆ ದೇಶದ ಅಧಿಕೃತ ಭಾಷೆ ಎಂದು ಆಗಿದೆ ಎಂಬುದಾಗಿ ಹಲವು ವರ್ಷಗಳಿಂದ ಎಲ್ಲರನ್ನೂ ನಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ಇದು ಸತ್ಯವಲ್ಲ. ಹಿಂದಿಯನ್ನು ಬಲವಂತವಾಗಿ ಹೇರುತ್ತಿರುವುದರ ಹಿಂದಿನ ರಾಜಕೀಯ ಹುನ್ನಾರವನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ಸೋತಿದ್ದೇವೆ. ಕನ್ನಡ ಮತ್ತು ಇಂಗ್ಲಿಷ್ ಜೊತೆಗೆ ಮೂರನೆಯ ಭಾಷೆಯಾಗಿ ಕಲಿಸಲು ಪ್ರಾರಂಭಿಸಿದ್ದೇ ಒಂದು ಷಡ್ಯಂತ್ರ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿ ಹೇರಿಕೆ: ಕಿಡಿಕಾರಿದ ಎಚ್ ಡಿ ಕುಮಾರಸ್ವಾಮಿ
ಸಂಸ್ಕೃತ ಭಾಷೆ ಅತ್ಯಂತ ಪ್ರಾಚೀನ ಕಾಲದಿಂದಲೂ ಜನಸಾಮಾನ್ಯರನ್ನು ಪೋಷಣೆ ಮಾಡುತ್ತಿರುವುದಲ್ಲದೆ ಅತ್ಯಂತ ಶ್ರೇಷ್ಠ ಭಾಷೆ ಎಂಬ ಮಿಥ್ಯೆಯನ್ನು ಪ್ರಚಾರ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ರೂಪದಲ್ಲಿ ಸಂಸ್ಕೃತ, ಹಿಂದಿ ಹೇರಿಕೆ ನಡೆಯುತ್ತಲೇ ಇದೆ. ಇದರಿಂದ ಕನ್ನಡ ನಾಡು, ನುಡಿ ಜನಜೀವನವೆಲ್ಲವೂ ಮುಂದಿನ ದಿನಗಳಲ್ಲಿ ನಲುಗುವಂತೆ ಆಗುವುದರಲ್ಲಿ ಆಶ್ಚರ್ಯವಿಲ್ಲ ಎಂದು ದೂರಿದರು.
ಹಿಂದಿ ಹೇರಿಕೆಗೆ ಕಾರಣವಾಗಿರುವ ಸಂವಿಧಾನದ ವಿಧಿ-343-351ರವರೆಗೂ ತಿದ್ದುಪಡಿ ಮಾಡಿ ಹಿಂದಿಗೆ ಇರುವ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಪರ ಸಂಘಟನೆಯ ಅರವಿಂದ ಶರ್ಮ, ಕರಾಹಿಂಜಾವವೇ ಕೆ.ಎಸ್.ಶಿವರಾಮು, ಸಾಹಿತಿ ಪ್ರೊ.ಕೆ.ಎಸ್, ಭಗವಾನ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಂ.ಚಂದ್ರಶೇಖರ್, ರೈತ ಸಂಘಟನೆಯ ಮುಖ್ಯಸ್ಥ ಹೊಸಕೋಟೆ ಬಸವರಾಜು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.