ಎರಡನೇ ಬಾರಿಗೆ ಎಸ್ಕೇಪ್ ಆದ ಮೈಸೂರು ಕಾರಗೃಹದ ಕೈದಿ
ಮೈಸೂರು, ಮೇ 22 : ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಮೈಸೂರು ಕಾರಗೃಹದಲ್ಲಿದ್ದ ಕೈದಿಯನ್ನು ಚಾಮರಾಜನಗರ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದಾಗ ಆತ ಪೊಲೀಸರನ್ನು ವಂಚಿಸಿ ಪರಾರಿಯಾಗಿರುವುದು ಇಂದು ಮಂಗಳವಾರ ಬೆಳಕಿಗೆ ಬಂದಿದೆ.
ಮತ್ತೊಂದು ಕಳವು ಪ್ರಕರಣ ಸಂಬಂಧ ವಿಚಾರಣೆಗಾಗಿ ಆತನನ್ನು ಚಾಮರಾಜನಗರದ ನ್ಯಾಯಾಲಯಕ್ಕೆ ಮೈಸೂರು ಪೊಲೀಸರು ಕರೆದೊಯ್ಯುತ್ತಿದ್ದಾಗ ಪರಾರಿಯಾಗಿದ್ದಾನೆ. ಚಾಮರಾಜನಗರ ತಾಲೂಕು ಗಾಳಿಪುರ ಗಾಮದ ನಿವಾಸಿ ರಫೀಕ್ ಅಲಿಯಾಸ್ ಚಂಪೀ ರಫೀಕ್(35) ಪೊಲೀಸರಿಂದ ತಪ್ಪಿಸಿಕೊಂಡ ಕೈದಿ. ಈ ಹಿಂದೆಯೂ ಈತ ಪೊಲೀಸರ ವಶದಿಂದ ಪರಾರಿಯಾಗಿದ್ದ.
ಜೈಲು ಅಧೀಕ್ಷಕರ ಮೇಲೆಯೇ ಹಲ್ಲೆ ನಡೆಸಿದ ಕೈದಿಗಳು
ಚಾಮರಾಜನಗರದ ದೇವಸ್ಥಾನವೊಂದರಲ್ಲಿ ಈ ಹಿಂದೆ ನಡೆದಿದ್ದ ಕಳವು ಪ್ರಕರಣದ ವಿಚಾರಣೆಗಾಗಿ ಪೊಲೀಸ್ ಪೇದೆಗಳಾದ ರಮೇಶ್ ನಾಯಕ ಮತ್ತು ಸತೀಶ್ ಅವರ ಭದ್ರತೆಯಲ್ಲಿ ಕೈದಿ ರಫೀಕ್ ನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿತ್ತು.
ಸೋಮವಾರ ಬೆಳಗ್ಗೆ 10.30ಕ್ಕೆ ರಫೀಕ್ ನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ ಬಳಿಕ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ಮುಂದೂಡಿದರು. ನಂತರ ಮೈಸೂರಿಗೆ ಬಸ್ ಹತ್ತಲು ಪೇದೆಗಳಿಬ್ಬರೂ ಕೈದಿಯನ್ನು ಚಾಮರಾಜನಗರ ಬಸ್ ನಿಲ್ದಾಣಕ್ಕೆ ಕರೆತಂದರು.
ಈ ವೇಳೆ ಆತ, ಮೂತ್ರ ವಿಸರ್ಜನೆಗೆ ಹೋಗಬೇಕೆಂದು ಕೇಳಿದಾಗ ಕಳುಹಿಸಿಕೊಟ್ಟಿದ್ದರು. ಸಮಯ ಸಾಧಿಸಿದ ಆತ ಪೊಲೀಸರ ಕಣ್ತಪ್ಪಿಸಿ ಶೌಚಾಲಯದಿಂದ ಕಾಲ್ಕಿತ್ತಿದ್ದಾನೆ.
ಸ್ವಲ್ಪ ಸಮಯದವರೆಗೆ ಕಾದಿದ್ದ ಪೇದೆಗಳು, ರಫೀಕ್ ವಾಪಸಾಗದಿರುವುದನ್ನು ಕಂಡು ಶೌಚಾಲಯಕ್ಕೆ ತೆರಳಿ ಹುಡುಕಾಡಿದ್ದಾರೆ. ಅಷ್ಟರಲ್ಲಾಗಲೇ ಕೈದಿ ಪರಾರಿಯಾಗಿದ್ದ. ಕೂಡಲೇ ಪೇದೆಗಳಿಬ್ಬರೂ ಚಾಮರಾಜನಗರ ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ಮುಂದುವರಿಸಿದ್ದಾರೆ.
ಬಹಳಷ್ಟು ಸಮಯ ನಗರದಲ್ಲೆಡೆ ಹುಡುಕಾಡಿದರೂ ರಫೀಕ್ ಸಿಗಲೇ ಇಲ್ಲ. ಆತನ ವಿರುದ್ಧ ಚಾಮರಾಜನಗರ ಠಾಣೆಯಲ್ಲಿ ಮೈಸೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳುವುದರಲ್ಲಿ ರಫೀಕ್ ಎತ್ತಿದ ಕೈ. ಈ ಹಿಂದೆ ನಂಜನಗೂಡಿನ ನ್ಯಾಯಾಲಯಕ್ಕೆ ತೆರಳಿದ್ದಾಗಲೂ ಆತ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದ. ಆಗ ಮೂವರು ಪೊಲೀಸ್ ಸಿಬ್ಬಂದಿ ಅಮಾನತುಗೊಂಡಿದ್ದರು.
ಬಹಳ ದಿನಗಳ ಬಳಿಕ ರಫೀಕ್ ನಂಜನಗೂಡು ಪೊಲೀಸರಿಗೆ ತಮಿಳುನಾಡಿನಲ್ಲಿ ಸೆರೆಸಿಕ್ಕಿದ್ದ. ಈಗ ಚಾಮರಾಜನಗರದಿಂದ ತಪ್ಪಿಸಿಕೊಂಡಿದ್ದಾನೆ. ಇದೀಗ ಈ ಘಟನೆ ಮೈಸೂರು, ಚಾಮರಾಜನಗರ ಜಿಲ್ಲೆಗಳ ಪೊಲೀಸರ ನಿದ್ದೆಗೆಡಿಸಿದೆ.