ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ ದಸರಾ ಸಿದ್ಧತೆ
ಮೈಸೂರು, ಸೆಪ್ಟೆಂಬರ್ 20: ನಗರದಲ್ಲಿ ನಾಡಹಬ್ಬ ದಸರಾ ಮಹೋತ್ಸವದ ರಂಗು ನಿಧಾನವಾಗಿ ವ್ಯಾಪಿಸುತ್ತಿದೆ. ಒಂದೆಡೆ ಯುವಸಂಭ್ರಮ ಕಾರ್ಯಕ್ರಮದೊಂದಿಗೆ ಸಂಭ್ರಮ ಮನೆ ಮಾಡಿದ್ದರೆ, ಮತ್ತೊಂದೆಡೆ ರಸ್ತೆ ದುರಸ್ತಿ ಕಾರ್ಯ, ವಿದ್ಯುತ್ ದೀಪಗಳ ಅಳವಡಿಕೆ ಹೀಗೆ ವಿವಿಧ ಕಾರ್ಯಗಳು ಭರದಿಂದ ಸಾಗುತ್ತಿದೆ.
ಜಗಮಗಿಸುವ ಮೈಸೂರು ಅರಮನೆಯ ನೋಟದ ಸುತ್ತ...
ಈ ಬಾರಿ ದಸರಾವನ್ನು ಅತ್ಯುತ್ತಮವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಜಿಲ್ಲಾ ಉಸ್ತುವಾರಿ ಸಚಿವರು ನಿರ್ಧರಿಸಿದ್ದು, ಈ ಸಂಬಂಧ ಅಧಿಕಾರಿಗಳ ಸಭೆ ನಡೆಸುವುದರೊಂದಿಗೆ ಸಿದ್ಧತಾ ಕಾರ್ಯಕ್ರಮಗಳನ್ನು ಪರಿಶೀಲಿಸಿ ಸಲಹೆಗಳನ್ನು ನೀಡುತ್ತಿದ್ದಾರೆ.
ಲೋಪವಾಗದಂತೆ ಕ್ರಮ ವಹಿಸಲು ಸೂಚನೆ
ಗುರುವಾರ ಮೈಸೂರು ಅರಮನೆ, ದಸರಾ ಕುಸ್ತಿ ಅಖಾಡ ಹಾಗೂ ವಸ್ತುಪ್ರದರ್ಶನ ಆವರಣಕ್ಕೆ ಭೇಟಿ ನೀಡಿ, ಅಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳ ಪರಿಶೀಲನೆ ನಡೆಸಿ ಜಂಬೂಸವಾರಿ ಸಾಗುವ ಮಾರ್ಗ, ನಾಡದೇವಿಗೆ ಪುಷ್ಪಾರ್ಚನೆ ಮಾಡುವ ಸ್ಥಳ, ಗಣ್ಯಾತಿಗಣ್ಯರು ಕೂರುವ ಸ್ಥಳ ಸೇರಿದಂತೆ ಜನಸಾಮಾನ್ಯರ ಪ್ರವೇಶದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೆ, ಜನಸಾಮಾನ್ಯರ ಪ್ರವೇಶ ಹಾಗೂ ಆಸನ ವ್ಯವಸ್ಥೆಯಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ಹಾಗೂ ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಿದರು. ಕುಸ್ತಿ ಅಖಾಡ ಹಾಗೂ ವಸ್ತುಪ್ರದರ್ಶನ ಆವರಣದಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿದರು.
ಈ ಬಾರಿ ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಏನೇನಿದೆ?
6.45 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ
ಪಂಜಿನ ಕವಾಯತು ಪ್ರದರ್ಶನ ನಡೆಯುವ ಬನ್ನಿಮಂಟಪಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಕವಾಯತು ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಪಂಜಿನ ಕವಾಯತು ಮೈದಾನ 30 ಎಕರೆ ವಿಸ್ತೀರ್ಣ ಹೊಂದಿದ್ದು, ಇದುವರೆಗೆ 22 ಸಾವಿರ ಆಸನ ವ್ಯವಸ್ಥೆ ಹೊಂದಿತ್ತು. ಈ ಬಾರಿ ಈ ಆಸನ ಸಾಮರ್ಥ್ಯವನ್ನು 32 ಸಾವಿರಕ್ಕೆ ವಿಸ್ತರಿಸಲಾಗಿದೆ. ಆ ಮೂಲಕ ಪಂಜಿನ ಕವಾಯತು ಪ್ರದರ್ಶನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನಸಾಮಾನ್ಯರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 6.45 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಎಲ್ಲ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ಯಾರಿಗೂ ತೊಂದರೆಯಾಗದ ರೀತಿ ನಾಡಹಬ್ಬ ಆಚರಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 2ರಂದು ಏರ್ ಶೋ
ಅಕ್ಟೋಬರ್ 2ರಂದು ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋ ನಡೆಸಲು ಯೋಜಿಸಲಾಗಿದೆ. ವೈಮಾನಿಕ ಪ್ರದರ್ಶನವನ್ನು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಜನಾಕರ್ಷಣೀಯವಾಗಿ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ನಡುವೆ ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ದಸರಾ ಕ್ರೀಡಾಕೂಟಕ್ಕೆ ರಾಜ್ಯ ಮಟ್ಟದ ಸ್ವರೂಪ ನೀಡಲಾಗುವುದು ಎಂದು ತಿಳಿಸಿದರು.
ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆಎಸ್ಆರ್ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ
ದಸರಾ ಕ್ರೀಡಾಕೂಟಕ್ಕೆ ಆಧುನಿಕತೆಯ ಸ್ಪರ್ಶ
ಗ್ರಾಮೀಣ ಭಾಗದ ಕ್ರೀಡಾಪಟುಗಳು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಉನ್ನತ ಸಾಧನೆ ಮಾಡುವಂತಾಗಲು ದಸರಾ ಕ್ರೀಡಾಕೂಟವು ಉತ್ತಮ ವೇದಿಕೆ. ಈ ಹಿನ್ನೆಲೆಯಲ್ಲಿ ಈ ದಸರಾ ಕ್ರೀಡಾಕೂಟವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಿ, ಆಧುನಿಕತೆಯ ಸ್ಪರ್ಶ ನೀಡಲು ಚಿಂತಿಸಲಾಗಿದೆ.
ಕ್ರೀಡಾಪಟುಗಳು ಸೋಲು ಗೆಲುವನ್ನು ಲೆಕ್ಕಿಸದೆ ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸೋಮಣ್ಣ ಕಿವಿಮಾತು ಹೇಳಿದರು.