ಕೊರೊನಾ ವೈರಸ್ 3ನೇ ಅಲೆ ಎದುರಿಸಲು ಜೆಎಸ್ಎಸ್ ಆಸ್ಪತ್ರೆ ಸನ್ನದ್ಧ
ಮೈಸೂರು, ಮೇ 17: ಮೈಸೂರು ಜಿಲ್ಲೆಯಾದ್ಯಂತ ಕೊರೊನಾ ಎರಡನೇ ಅಲೆಯ ಆತಂಕ ನಿವಾರಣೆಯಾಗುವ ಮೊದಲೇ ಮೈಸೂರಿನ ಪ್ರತಿಷ್ಠಿತ ಜೆಎಸ್ಎಸ್ ಆಸ್ಪತ್ರೆಯಲ್ಲಿ 3ನೇ ಅಲೆಯ ಕೊರೊನಾಘಾತ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಮುಂದಿನ ಕೆಲವೇ ದಿನಗಳಲ್ಲಿ ಕೊರೊನಾ ಮೂರನೇ ಅಲೆಯ ಆಘಾತ ಎದುರಾಗುವ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಜೆಎಸ್ಎಸ್ ಆಸ್ಪತ್ರೆಯಲ್ಲಿ 3ನೇ ಅಲೆಯನ್ನು ಎದುರಿಸಲು ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಹೆಚ್ಚಿಸಲಾಗಿದೆ. ಈ ಸಂಬಂಧ ಸ್ವತಃ ಸುತ್ತೂರು ಶ್ರೀಗಳೇ ಆಸ್ಪತ್ರೆಯ ಆಡಳಿತ ಮಂಡಳಿ ಜತೆಗೆ ಸಭೆ ನಡೆಸಿ, ಅಗತ್ಯ ಸಿದ್ಧತೆಗಳ ಕುರಿತು ಮಾಹಿತಿ ಪಡೆದರು.
ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ
ಈ ಕುರಿತಂತೆ ಮಾತನಾಡಿದ ಸುತ್ತೂರು ಶ್ರೀಗಳು, ಈಗಾಗಲೇ ಜೆಎಸ್ಎಸ್ ಆಸ್ಪತ್ರೆಯಿಂದ ಸರ್ಕಾರಕ್ಕೆ 411 ಬೆಡ್ ನೀಡಲಾಗಿದ್ದು, ಸರ್ಕಾರ ಮತ್ತೆ 300 ಬೆಡ್ ಕೇಳಿದೆ. ಆದರೆ ಅದಕ್ಕೆ ಬೇಕಾದ ಆಕ್ಸಿಜನ್ ಇಲ್ಲದ ಕಾರಣ ಬೆಡ್ ನೀಡಿಲ್ಲ. ಆಕ್ಸಿಜನ್ ಬಂದ ತಕ್ಷಣ ಬೆಡ್ ನೀಡುತ್ತೇವೆ ಎಂದು ತಿಳಿಸಿದರು.
ಅಲ್ಲದೇ, 5000 ಕೆ.ಎಲ್ ಯೂನಿಟ್ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ಖರೀದಿ ಮಾಡುತ್ತಿದ್ದೀವೆ. ನಿಮಿಷಕ್ಕೆ 500ಲೀ ಆಕ್ಸಿಜನ್ ಉತ್ಪಾದಿಸುವ ಜನರೇಟರ್ ಸಹ ಖರೀದಿಗೆ ಸಿದ್ಧತೆ ನಡೆದಿದೆ. ಇಷ್ಟು ಆಕ್ಸಿಜನ್ ಸಿಕ್ಕಿದರೆ ಇನ್ನು 500-600 ಬೆಡ್ ಹೆಚ್ಚಲಿದ್ದು, ಸರ್ಕಾರಕ್ಕೆ ಆಸ್ಪತ್ರೆಯಿಂದ ನೀಡಬಹುದಾದ ಎಲ್ಲ ಸಹಕಾರ ನೀಡುತ್ತೇವೆ ಎಂದರು.
ಮೂರನೇ ಅಲೆ ಬಂದರೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಅಂತ ಈ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸೌಲಭ್ಯ ಹೆಚ್ಚಿಸಿ ಚಿಕಿತ್ಸೆ ನೀಡಬಹುದು. ಆದರೆ ಶೇ.100 ಆರೋಗ್ಯ ನೀಡಲು ಸಾಧ್ಯವಿಲ್ಲ. ಹೀಗಾಗಿ ಜನರು ತಮ್ಮ ಎಚ್ಚರಿಕೆಯಿಂದ ಇದ್ದು ಕೊರೊನಾದಿಂದ ಪಾರಾಗಿ ಎಂದು ಕಿವಿಮಾತು ಹೇಳಿದರು.
2ನೇ ಡೋಸ್ ಲಸಿಕೆ ಪಡೆದ ಶ್ರೀಗಳು
ಇದಕ್ಕೂ ಮುನ್ನ ಸುತ್ತೂರು ಶ್ರೀಗಳು ಜೆಎಸ್ಎಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆಯ 2ನೇ ಡೋಸ್ ಲಸಿಕೆ ಪಡೆದರು. ಲಸಿಕೆ ಪಡೆದ ನಂತರ ಆಸ್ಪತ್ರೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸ್ವಾಮೀಜಿ, ಆಸ್ಪತ್ರೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರಲ್ಲದೆ, ಕೋವಿಡ್ ಕೇರ್ ಸೆಂಟರ್ ರೋಗಿಗಳಿಗೆ ಸಾಂತ್ವನ ಹೇಳಿದರು.