ರಾಜ್ಯದ ಎಲ್ಲ ಗಡಿಗಳನ್ನು ಬಂದ್ ಮಾಡಲು ಪ್ರತಾಪ ಸಿಂಹ ಮನವಿ
ಮೈಸೂರು, ಮಾರ್ಚ್ 21: ಕೊರೊನಾ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕದ ಗಡಿಗಳನ್ನು ಸಂಪೂರ್ಣ ಮುಚ್ಚುವಂತೆ ಸಂಸದ ಪ್ರತಾಪ ಸಿಂಹ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿದರು.
ಮೈಸೂರು ಪತ್ರಕರ್ತರ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭಾರತಕ್ಕೆ ವಿಮಾನಯಾನ ರದ್ದು ಮಾಡಲಾಗಿದೆ. ಅದೇ ರೀತಿ ರಾಜ್ಯಕ್ಕೆ ಹೊರರಾಜ್ಯದ ಗಡಿಯಿಂದ ಬರುವವರನ್ನು ತಡೆಯುವ ಪ್ರಯತ್ನ ಮಾಡಬೇಕಿದೆ. ಈ ಪ್ರಯತ್ನವನ್ನು ಹಿಮಾಚಲ ಪ್ರದೇಶ ಮಾಡಿದೆ. ಅದೇ ರೀತಿ ಕರ್ನಾಟಕ ಸುರಕ್ಷತೆ ದೃಷ್ಟಿಯಿಂದ ಗಡಿ ಸೀಲ್ ಮಾಡಿ ಹೊರರಾಜ್ಯದಿಂದ ಸೋಂಕಿತರು ರಾಜ್ಯ ಪ್ರವೇಶ ಮಾಡದಂತೆ ನೋಡಿಕೊಳ್ಳಿ. ನಮ್ಮ ಜನರ ಸುರಕ್ಷತೆಗಾಗಿ ಈ ಗಡಿ ಸೀಲ್ ಮಾಡುವ ಅವಶ್ಯಕತೆಯಿದೆ" ಎಂದರು.
ಕೊರೊನಾ; ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಒಂದೊಂದು ದಿಕ್ಕು!
ಕೊರೊನಾ ಹರಡದಂತೆ ಎಲ್ಲರೂ ಜನತಾ ಕರ್ಫ್ಯೂ ಪಾಲಿಸುವುದು ಅವಶ್ಯವಾಗಿದೆ. ಈಗಾಗಲೇ ಇದಕ್ಕೆ ಪಕ್ಷಾತೀತವಾಗಿ, ಧರ್ಮಾತೀತವಾಗಿ ಜನತೆ ಬೆಂಬಲ ನೀಡಿದ್ದಾರೆ. ದೇವಸ್ಥಾನ, ಚರ್ಚ್ ಸೇರಿದಂತೆ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಐವತ್ತಕ್ಕೂ ಹೆಚ್ಚು ಜನರು ಸೇರದಂತೆ ಜಾಗ್ರತೆ ವಹಿಸಲಾಗಿದೆ. ಹತ್ತು ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷದ ಮೇಲ್ಪಟ್ಟ ಹಿರಿಯರು ಮನೆಯಿಂದ ಹೊರಗೆ ಬರಬಾರದು. ಅಗತ್ಯವಿದ್ದರೆ ಮಾತ್ರ ಆರೋಗ್ಯ ತಪಾಸಣೆಗೆ ಹೊರಗೆ ಬನ್ನಿ, ಇಲ್ಲದಿದ್ದರೆ ಬೇಡ. ಸಾಮಾನ್ಯ ಆರೋಗ್ಯ ತಪಾಸಣೆಗಿದ್ದರೆ ಆದಷ್ಟು ಮುಂದೂಡಿ ಎಂದು ತಿಳಿಸಿದರು.
ಕೊರೊನಾ ಮಹಾಮಾರಿ ಮೂರನೇ ಹಂತಕ್ಕೆ ವಿಸ್ತರಣೆ ಆಗದಂತೆ ತಡೆಯಲು ಸಂಯಮ ಮತ್ತು ಸಂಕಲ್ಪದ ಅಗತ್ಯವಿದೆ ಎಂದು ಮೋದಿಯವರೇ ತಿಳಿಸಿದ್ದಾರೆ. ಅದನ್ನು ಜನರು ಪಾಲಿಸುವ ಅಗತ್ಯವಿದೆ. ದಿನಗೂಲಿ ನೌಕರರು ಹಾಗೂ ಕಾರ್ಮಿಕರ ಭತ್ಯೆಗಳನ್ನು ತಡೆಹಿಡಿಯಬೇಡಿ. ಕೊರೊನಾ ತಡೆಗಟ್ಟುವ ಸೇವೆಯಲ್ಲಿ ನಿರತರಾಗಿರುವ ಎಲ್ಲಾ ಸಿಬ್ಬಂದಿಗೆ ನಾಳೆ ಸಾಯಂಕಾಲ 5ಗಂಟೆಗೆ ಮನೆಯಲ್ಲೇ ಚಪ್ಪಾಳೆ ತಟ್ಟುವ ಕೃತಜ್ಞತೆ ಸಲ್ಲಿಸೋಣ ಎಂದು ಪ್ರತಾಪ್ ಸಿಂಹ ಕರೆ ನೀಡಿದರು.
ಡಿಕೆಶಿ ಮನೆಮುಂದೆ ಜನಜಾತ್ರೆ: ಹಬ್ಬ ಮುಗಿಯವರೆಗೂ ಬರಬೇಡಿ
ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಎಲ್ಲಾ ವಾರ್ಡ್ ಗಳಲ್ಲಿ ಅಗತ್ಯ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಕಂಡುಬಂದಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರೇ ನಿಮ್ಮ ಮನೆ ಬಾಗಿಲಿಗೆ ಬಂದು ಸಹಾಯ ನೀಡಲಿದ್ದಾರೆ. ನಾಳೆಯಿಂದ ಕಾರ್ಯಕರ್ತರ ಪಡೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಕರೆಗೆ ಓಗೊಟ್ಟು ಜನತೆ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಪ್ರಧಾನಿಯವರ ನಿರ್ಧಾರವನ್ನು ಬೆಂಬಲಿಸುವ ಅನಿವಾರ್ಯತೆ ಇದೆ. ಜನತಾ ಕರ್ಫ್ಯೂ ಆಚರಿಸುವುದರಿಂದ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ತಿಳಿಸಿದರು.