"ಬಿಜೆಪಿಯಲ್ಲಿದ್ದರೂ ವಿಶ್ವನಾಥ್ ಅವರಿಗೆ ಪೂರ್ವಾಶ್ರಮದ ಪ್ರಭಾವ ಕಡಿಮೆಯಾಗಿಲ್ಲ"
ಮೈಸೂರು, ಆಗಸ್ಟ್ 29: ಬಿಜೆಪಿಯಲ್ಲಿದ್ದರೂ ವಿಶ್ವನಾಥ್ ಅವರಿಗೆ ಪೂರ್ವಾಶ್ರಮದ ಪ್ರಭಾವ ಕಡಿಮೆಯಾದಂತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಟಿಪ್ಪು ಸುಲ್ತಾನ್ ಸ್ವತಂತ್ರ ಹೋರಾಟಗಾರ, ಈ ನೆಲದ ಮಗ ಎಂಬ ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದರು.
ಟಿಪ್ಪು ಹೊಗಳಿಕೆಯಿಂದ ವಿಶ್ವನಾಥ್ ಕೈ ತಪ್ಪಿತಾ ಮಂತ್ರಿ ಪದವಿ?
ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಕಾಲಿರಿಸಿದ್ದಾರೆ. ಹೀಗಾಗಿ ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದು ಮಾತನಾಡಬೇಕು. ಮೈಸೂರಿನ ಯದುವಂಶವನ್ನು ನಿರ್ನಾಮ ಮಾಡಲು ಹೊರಟವರು ಯಾರು? ಕನ್ನಡ ಭಾಷೆ ಮೇಲೆ ಪ್ರಹಾರ ನಡೆಸಿದ್ದು ಟಿಪ್ಪು. ಆದ್ದರಿಂದ ಟಿಪ್ಪುವನ್ನು ವೀರ, ಶೂರ ಎಂದು ಹೇಳಲಾಗದು ಎಂದು ತಿರುಗೇಟು ನೀಡಿದ ಅವರು, ವಿಶ್ವನಾಥ್ ಮುಂದಾದರೂ ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತನಾಡಲಿ ಎಂದು ಹೇಳಿದರು.
ಇದೇ ವೇಳೆ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿವಾದದ ಕುರಿತು ಮಾತನಾಡಿ, ಶಿವಾಜಿ ಮಹಾರಾಜರು ಸ್ವಾಭಿಮಾನದ ಸಂಕೇತವಾಗಿದ್ದರೆ, ರಾಯಣ್ಣ ಕನ್ನಡ ಅಸ್ಮಿತೆ ಮತ್ತು ಸ್ವಾಭಿಮಾನದ ಸಂಕೇತ. ಹೀಗಾಗಿ ಇಬ್ಬರ ಹೆಸರಿನಲ್ಲಿ ವಿವಾದ ಬೇಡ. ಪ್ರತಿಮೆ ಮತ್ತು ಹೆಸರಿನಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡುತ್ತಿರುವುದರ ಹಿಂದೆ ರಾಜಕೀಯವಿದೆ. ಕಾಂಗ್ರೆಸ್ ಪಿತೂರಿಯಿಂದ ವಿವಾದ ಸೃಷ್ಟಿಯಾಗಿದೆ ಎಂದರು.
ಕನ್ನಡ ಹೋರಾಟಗಾರರ ಮೇಲೆ ವಿನಾಕಾರಣ ಕೇಸ್ ಹಾಕಿದ್ದರೆ, ಆ ಕೇಸ್ ಗಳನ್ನು ವಾಪಸ್ ತೆಗೆದು ಕೊಳ್ಳಲು ಅವಕಾಶವಿದೆ. ರಾತ್ರೋರಾತ್ರಿ ಹೋಗಿ ಪ್ರತಿಮೆ ಸ್ಥಾಪನೆ ಮಾಡಿರುವುದರ ಹಿಂದೆ ರಾಜಕೀಯ ಅಲ್ಲದೆ ಮತ್ತೇನಿದೆ? ಸಿದ್ದರಾಮಯ್ಯ ಅವರು ಸಿಎಂಗೆ ಒಂದು ಮನವಿ ಕೊಟ್ಟಿದ್ದರೂ ಪ್ರತಿಮೆ ಸ್ಥಾಪನೆ ಕೆಲಸ ಆಗುತ್ತಿತ್ತು. ಸಂಗೊಳ್ಳಿ ರಾಯಣ್ಣನಿಗೆ ಯಾರೂ ವಿರೋಧ ಮಾಡಲು ಸಾಧ್ಯವಿಲ್ಲ. ಈ ರೀತಿಯ ವಿವಾದಗಳ ಮೂಲಕ ಸರ್ಕಾರವನ್ನು ಅಲುಗಾಡಿಸುವ ಪ್ರಯತ್ನವನ್ನು ಕಾಂಗ್ರೆಸ್ ಮೊದಲು ನಿಲ್ಲಿಸಲಿ ಎಂದರು.