ಮರಿ ಟಿಪ್ಪುಗಳಿಂದ ಗಲಭೆ ಎಂದು ಟೀಕಿಸಿದ ಸಂಸದ ಪ್ರತಾಪ್ ಸಿಂಹ
ಮೈಸೂರು, ಡಿಸೆಂಬರ್ 24: "ಕೊಚ್ಚೆ ಎಲ್ಲಿರುತ್ತೋ ಅಲ್ಲಿಗೆ ಸೊಳ್ಳೆ ಹುಡುಕಿಕೊಂಡು ಹೋಗುತ್ತೆ. ಕಾಂಗ್ರೆಸ್ ಎಲ್ಲಿರುತ್ತೋ ಅಲ್ಲಿ ನಿರುದ್ಯೋಗ, ಅಕ್ಷರತೆ, ದೌರ್ಜನ್ಯ, ಬಡತನ ಇದ್ದೇ ಇರುತ್ತೆ" ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
"ಕಾಂಗ್ರೆಸ್ ನವರು ಕೆಲವರನ್ನು ಇಟ್ಟುಕೊಂಡು ಈ ರೀತಿಯ ಗಲಭೆ ಮಾಡಿಸುತ್ತಿದ್ದಾರೆ. ಈ ಗಲಭೆ ಮಾಡುತ್ತಿರುವವರು ಸಿದ್ದರಾಮಯ್ಯ ಸೃಷ್ಟಿಸಿದ ಮರಿ ಟಿಪ್ಪುಗಳು. ಆಸ್ಪತ್ರೆಗೆ ನುಗ್ಗಿ ಬಾಗಿಲು ಹಾಕಿಕೊಂಡು ರೋಗಿಗಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಇಂಥದ್ದನ್ನೆಲ್ಲ ಟಿಪ್ಪು ವಂಶಸ್ಥರು ಮಾತ್ರ ಮಾಡುವುದಕ್ಕೆ ಸಾಧ್ಯ. ಕಲ್ಲು ತೂರಿದವರನ್ನು ಸಿದ್ದರಾಮಯ್ಯ ಅಮಾಯಕರು ಎಂದು ಹೇಳುತ್ತಾರೆ. ಸಿಸಿ ಟಿವಿ ದೃಶ್ಯ ನೋಡಿ ಈಗ ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಮಾತನಾಡಲಿ" ಎಂದು ಆಗ್ರಹಿಸಿದರು.
ಯುಟಿ ಖಾದರ್ "ಬೆಂಕಿ" ಮಾತಿಗೆ ಪ್ರತಾಪ ಸಿಂಹ ಕಿಡಿ
"ಕಾಂಗ್ರೆಸ್ಗೆ ಅಧಿಕಾರದ ಚಡಪಡಿಕೆ ಶುರುವಾಗಿದೆ. ಬಿಜೆಪಿ ಇದ್ದ ಕಡೆ ಈ ರೀತಿ ಗಲಭೆ ಸೃಷ್ಟಿಸಿ ಅಧಿಕಾರ ಹಿಡಿಯುವ ಹುನ್ನಾರ ಇದು. ಕೋಮು ದಳ್ಳುರಿ ಸೃಷ್ಟಿಸಿ ಅಧಿಕಾರ ಹಿಡಿಯುವ ಅವರ ಉದ್ದೇಶ ಬಹಿರಂಗವಾಗಿದೆ" ಎಂದು ಕಾಂಗ್ರೆಸ್ ಮೇಲೆ ಆರೋಪಿಸಿದ್ದಾರೆ.
"ಪೊಲೀಸರು ಕಲ್ಲೇಟನ್ನೂ ಲೆಕ್ಕಿಸದೇ ಸಾರ್ವಜನಿಕರ ರಕ್ಷಣೆ ಮಾಡಿದ್ದಾರೆ. ಅವರ ಕರ್ತವ್ಯದ ಬಗ್ಗೆ ಟೀಕಿಸುವವರು ತಮ್ಮ ಆತ್ಮಸಾಕ್ಷಿ ಕೇಳಿಕೊಳ್ಳಲಿ. ಸಿದ್ದರಾಮಯ್ಯ, ರಮೇಶ್ ಕುಮಾರ್ ಮಂಗಳೂರಿಗೆ ಘನಂಧಾರಿ ಕೆಲಸ ಮಾಡಲು ಹೋಗಿರಲಿಲ್ಲ. ತಮ್ಮ ಮರಿಟಿಪ್ಪುಗಳು ಮಾಡಿರುವ ತಪ್ಪನ್ನು ಮುಚ್ಚಿಹಾಕುವ ಕಾರಣಕ್ಕಾಗೇ ಹೋಗುತ್ತಿದ್ದರು ಎನ್ನುವುದು ಇದರಲ್ಲಿ ಗೊತ್ತಾಗುತ್ತೆ" ಎಂದು ವಾಗ್ದಾಳಿ ನಡೆಸಿದರು.