ಪ್ರತಾಪ್ ವೃಥಾ ಕಾಲಹರಣ ಮಾಡುತ್ತಿದ್ದಾರೆ : ಬ್ರಿಜೇಶ್ ಕಾಳಪ್ಪ
ಸೂರು, ಮಾರ್ಚ್ 06 : ರಾಜ್ಯದಲ್ಲಿ ಭೀಕರ ಬರಪರಿಸ್ಥಿತಿ ಎದುರಾಗಿದ್ದು, ಕೇಂದ್ರದಿಂದ ಬರಪರಿಹಾರ ತರಿಸುವ ಕುರಿತು ಯೋಚಿಸುವುದನ್ನು ಬಿಟ್ಟು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಟ್ವೀಟ್ ಮಾಡುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ಮೈಸೂರಿನ ಜಲದರ್ಶಿನಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬ್ರಿಜೇಶ್ ಕಾಳಪ್ಪ ಮಾತನಾಡಿ, ಸೈನಿಕರೋರ್ವರ ಮಗಳನ್ನು ದಾವೂದ್ ಗೆ ಹೋಲಿಸಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ ಅದರ ಕುರಿತು ಗಮನ ಹರಿಸಲು ಸಂಸದರಿಗೆ ಪುರುಸೊತ್ತಿಲ್ಲ. ಬರ ಪರಿಹಾರವನ್ನು ತರುವುದು ಬಿಟ್ಟು ವೃಥಾ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ವಾಕ್ ಪ್ರಹಾರ ನಡೆಸಿದರು.[ತಂದೆಯ ತ್ಯಾಗವನ್ನು ದುರ್ಬಳಕೆ ಮಾಡಿಕೊಂಡ ಗುರ್ಮೆಹರ್: ಪ್ರತಾಪ್ ಸಿಂಹ]
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ನೂರಾಹತ್ತು ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಆದರೆ ಮೋದಿ ಯಾವ ಸೈನಿಕರ ಮನೆಗೂ ಭೇಟಿ ನೀಡಿಲ್ಲ. ಮೋದಿ ಸರ್ಕಾರಕ್ಕೆ ಸೈನಿಕರ ಕುರಿತು ಕಾಳಜಿಯಿಲ್ಲ. ಸೈನಿಕರ ಪರಾಕ್ರಮದ ಹೆಸರಿನಲ್ಲಿ ಮೋದಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂದು ನರೇಂದ್ರ ಮೋದಿಯನ್ನು ಕಾಳಪ್ಪ ಟೀಕಿಸಿದರು.[ನಿಮ್ಮ ತಂದೆಯನ್ನು ಕೊಂದ ದೇಶ ಯಾವುದಮ್ಮಾ? ಕೌರ್ ಗೆ ಪ್ರತಾಪ್ ಪ್ರಶ್ನೆ]
2018ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲಿದೆ. ಮೋದಿ ಸರ್ಕಾರದಿಂದ ಜನತೆ ರೋಸಿ ಹೋಗಿದ್ದಾರೆ. ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ. ವಿ. ಶ್ರೀನಿವಾಸ್ ಪ್ರಸಾದ್ ಅವರು ಕೀಳುಮಟ್ಟದ ಭಾಷೆಯನ್ನು ಉಪಯೋಗಿಸುತ್ತಿದ್ದಾರೆ. ಅವರಿಗೆ ಸೋಲು ಖಚಿತ ಎನ್ನುವುದು ತಿಳಿದಿದೆ. ಆದರಿಂದಲೇ ಇಂತಹ ಭಾಷೆಗಳ ಉಪಯೋಗವಾಗುತ್ತಿದೆ. ನಂಜನಗೂಡು-ಗುಂಡ್ಲುಪೇಟ್ ಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೆಲವರ ಪಕ್ಷಾಂತರದ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣಾ ಸಮಯದಲ್ಲಿ ವಲಸೆಹಕ್ಕಿಗಳು ಕಾಣಿಸಿಕೊಳ್ಳುವುದು ಸಹಜ. ಅಂಥವರು ಎಲ್ಲ ಪಕ್ಷಗಳಲ್ಲಿಯೂ ಇದ್ದಾರೆ ಎಂದು ಕಾಳಪ್ಪ ಪ್ರತಿಕ್ರಿಯಿಸಿದರು.