ಮುಂದಿನ 5 ವರ್ಷದೊಳಗೆ ಮೈಸೂರಿನಿಂದ 25 ವಿಮಾನಗಳ ಹಾರಾಟ:ಪ್ರತಾಪ್ ಸಿಂಹ
ಮೈಸೂರು, ಫೆಬ್ರವರಿ 3 : ಮುಂದಿನ ಐದು ವರ್ಷಗಳಲ್ಲಿ ಮೈಸೂರಿನ ವಿಮಾನ ನಿಲ್ದಾಣದಿಂದ ಹಲವೆಡೆಗೆ 25 ವಿಮಾನಗಳು ಹಾರಾಟ ನಡೆಸಲಿದೆ ಎಂದು ಕೊಡಗು- ಮೈಸೂರು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡಾನ್ ಯೋಜನೆಯಲ್ಲಿ ಮೈಸೂರಿಗೆ ಆರು ವಿಮಾನಗಳು ಸಿಕ್ಕಿದ್ದು, ಮೂರು ತಿಂಗಳೊಳಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಈ ಆರು ವಿಮಾನಗಳು ಹಾರಾಟ ನಡೆಸಲಿವೆ . ಮೈಸೂರು ರೈಲ್ವೆ ನಿಲ್ದಾಣವನ್ನು ಭಾರತದಲ್ಲೇ ಒಂದು ಅತ್ಯುತ್ತಮ ನಿಲ್ದಾಣವನ್ನಾಗಿಸಿ ಉನ್ನತೀಕರಣಗೊಳಿಸಲಾಗುವುದು. ಈ ನಿಟ್ಟಿನಲ್ಲಿ ವಿವಿಧ ಯೋಜನೆ ಜಾರಿಗೆ ಚಿಂತನೆ ನಡೆಸಲಾಗಿದೆ ಎಂದರು.
ಮೈಸೂರಿನಿಂದ ಹೆಚ್ಚುವರಿಯಾಗಿ ಸಂಚರಿಸಲಿವೆ 6 ಹೊಸ ವಿಮಾನಗಳು
2014ರಲ್ಲಿ ನಡೆದಿದ್ದು ಅತ್ಯಂತ ಕಠಿಣವಾದ ಚುನಾವಣೆ. ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರು. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ವಾರಕೊಮ್ಮೆ ಬರುತ್ತಿದ್ದರು. ಇಂಥ ಸಂದರ್ಭದಲ್ಲಿ ನಾನು ಗೆದ್ದಿದ್ದೇನೆ. ಈ ಬಾರಿ ಕೆಲಸ ಮಾಡಿದ್ದೇನೆ. ಎಲ್ಲರ ಪರಿಚಯವಿದೆ. ಹೀಗಾಗಿ, ಗೆಲ್ಲುವ ವಿಶ್ವಾಸವಿದೆ. ವಾರಾಣಸಿ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಆದರೆ, ಆಸೆ ಮತ್ತು ಅರ್ಹತೆಗೂ ವ್ಯತ್ಯಾಸವಿದೆ. ಅರ್ಹತೆ ಕೆಲವರಿಗೆ ಮಾತ್ರ ಇರುತ್ತದೆ. ಆಸೆಯನ್ನು ಯಾರು ಬೇಕಾದರೂ ಹೊಂದಿರಬಹುದು ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಘೋಷಿಸಿರುವ ತೆರಿಗೆ ವಿನಾಯಿತಿಯನ್ನು ದೋಖಾ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ತೆರಿಗೆ ವಿನಾಯಿತಿಯಿಂದ ಏನು ಅನುಕೂಲವಾಗುತ್ತದೆ ಎಂಬುದು ಸಂಬಳ ತೆಗೆದುಕೊಳ್ಳುವ ನೌಕರರಿಗೆ ಮಾತ್ರ ಅರ್ಥವಾಗುತ್ತದೆ. ಕಮಿಷನ್ ಪಡೆಯುವ ರಾಜಕಾರಣಿಗಳಿಗೆ ಇದು ಅರ್ಥವಾಗುವುದಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದರು.