ಪೇಟೆರೌಡಿಗೆ ಹೋಲಿಸಿ ಮಾತನಾಡಿದ ಸುಮಲತಾ ಮೇಲೆ ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರು, ನವೆಂಬರ್ 17: ಸಂಸದ ಪ್ರತಾಪ್ ಸಿಂಹ ಹಾಗೂ ಸಂಸದೆ ಸುಮಲತಾ ಅವರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಪ್ರತಾಪ್ ಸಿಂಹ ಅವರನ್ನು ಪೇಟೆ ರೌಡಿಗೆ ಹೋಲಿಸಿ ಮಾತನಾಡಿದ ಸುಮಲತಾ ಅವರಿಗೆ ಪ್ರತಾಪ್ ಸಿಂಹ ಮತ್ತೆ ತಿರುಗೇಟು ನೀಡಿದ್ದಾರೆ.
"ಸುಮಲತಾ ಅವರ ಹೇಳಿಕೆಯನ್ನು ಸೀರಿಯಸ್ ಆಗಿ ತಗೋಬೇಡಿ. ಸುಮಲತಾ ಅವರು ಸಿನಿಮಾ ಜಗತ್ತಿನಿಂದ ಬಂದವರು, ಬಣ್ಣದ ಲೋಕದಿಂದ ಬಂದವರು. ಮಾಧ್ಯಮದವರ ಪ್ರಶ್ನೆಗೆ ನಾಗರಹಾವು ಸಿನಿಮಾ ಜಲೀಲ ನೆನಪಾಗಿ ಡೈಲಾಗ್ ಹೊಡೆದಿರ್ತಾರೆ. ನೀವು ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ" ಎಂದು ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ಸಂಸದೆ ಸುಮಲತಾ ಅಂಬರೀಶ್!
ಮಂಡ್ಯ ಜಿಲ್ಲೆಯ ಯಾವುದೇ ಕೆಲಸ ಇದ್ದರೂ ನನಗೆ ಹೇಳಿ, ಆ ಯಮ್ಮ ಏನೂ ಕೆಲಸ ಮಾಡುವುದಿಲ್ಲ ಎಂದು ಸಂಸದೆ ಸುಮಲತಾ ಅವರನ್ನು ಪ್ರತಾಪ್ ಸಿಂಹ ಟೀಕಿಸಿ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಸೋಮವಾರ ತಿರುಗೇಟು ನೀಡಿದ್ದ ಸುಮಲತಾ, "ಪ್ರತಾಪ್ ಸಿಂಹ ಅವರು ನಮ್ಮ ಕ್ಷೇತ್ರದ ಪಕ್ಕದ ಕ್ಷೇತ್ರದ ಸಂಸದರು. ಅವರು ಎರಡು ಬಾರಿ ಸಂಸದರಾಗಿದ್ದಾರೆ. ಅದನ್ನು ಅರಿತು ಮಾತನಾಡಬೇಕಾಗುತ್ತದೆ. ಪೇಟೆ ರೌಡಿಯ ತರಹ ಅವರು ಮಾತನಾಡಬಾರದು" ಎಂದು ಹೇಳಿದ್ದರು.
ಇದೀಗ ಸುಮಲತಾ ಹೇಳಿಕೆಗೆ ಪ್ರತಾಪ್ ಸಿಂಹ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ಪಾಳೇಗಾರಿಕೆ ಮನಸ್ಥಿತಿ ಪ್ರಜಾಪ್ರಭುತ್ವದಲ್ಲಿ ನಡೆಯೋದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಏನು ಬೇಕಾದರೂ ಆಗಬಹುದು. ನಾನು, ನನ್ನ ಕುಟುಂಬ ಅನ್ನುವ ಪಾಳೇಗಾರಿಕೆ ನಡೆಯೋದಿಲ್ಲ. ನಾನು ಯಾವ ಸ್ಟಾರ್ ಅಲ್ಲ. ನನಗೆ ಯಾವ ಅಭಿಮಾನಿಯೂ ಬಂದು ಓಟು ಹಾಕೋಲ್ಲ. ನನಗೆ ನನ್ನ ಕೆಲಸವೇ ಕಾಯೋದು. ಹಾಗಾಗಿ ನನಗೆ ಕೆಲಸದ ಮೇಲೆ ನಂಬಿಕೆಯಿದೆ" ಎಂದಿದ್ದಾರೆ.
"10 ಪಥದ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಮಂಡ್ಯ ಜನರು ಅಡ್ಡ ಹಾಕಿ ನನ್ನನ್ನು ಕೇಳಿದರು. ಆಗ ನಾನು ಅಂಡರ್ ಪಾಸ್ ಹಾಗೂ ಫ್ಲೈ ಓವರ್ ಮಾಡಿಸಿಕೊಡುವ ಭರವಸೆ ಕೊಟ್ಟೆ. ಇದು ಮಂಡ್ಯ ರಾಮನಗರ ಮೈಸೂರು ಜಿಲ್ಲೆಯ ಜನರಿಗೆ ಅನುಕೂಲ ಆಗಲಿದೆ. ಅದಕ್ಕಾಗಿ ನಾನು ಭರವಸೆ ಕೊಟ್ಟೆನೇ ವಿನಃ ಬೇರೆ ಮಾತನಾಡಿಲ್ಲ. 10 ಪಥದ ಹೆದ್ದಾರಿ ಅನುಕೂಲ ಮಾಡೋದಷ್ಟೆ ನನ್ನ ಉದ್ದೇಶ. ಅದನ್ನು ಬಿಟ್ಟು ಬೇರೇನೂ ನನಗೆ ಗೊತ್ತಿಲ್ಲ" ಎಂದರು.