ಗೆಲುವಿನ ಸನಿಹದಲ್ಲಿ ಪ್ರತಾಪ್ ಸಿಂಹ: ಕಾರ್ಯಕರ್ತರಿಂದ ಸಂಭ್ರಮಾಚರಣೆ
ಮೈಸೂರು, ಮೇ 23 : ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಮೈಸೂರು - ಕೊಡಗು ಕ್ಷೇತ್ರದಲ್ಲಿ ಗೆಲುವಿನ ಸನಿಹದಲ್ಲಿರುವ ಪ್ರತಾಪ್ ಸಿಂಹರ ಹೆಸರಿನಲ್ಲಿ ಕಾರ್ಯಕರ್ತರು ಜಯಕಾರ ಹಾಕುತ್ತಿದ್ದಾರೆ.
ಮೈಸೂರಿನ ಬಿಜೆಪಿ ಕಚೇರಿ ಸೇರಿದಂತೆ ಹಲವೆಡೆ ಪ್ರತಾಪ್ ಸಿಂಹ ಅವರ ಗೆಲುವನ್ನು ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಈಗಾಗಲೇ 90 ಸಾವಿರ ಮತದ ಅಂತರವಿರುವ ಸಂಸದ ಪ್ರತಾಪ್ ಸಿಂಹರವರು ಮೈತ್ರಿ ಅಭ್ಯರ್ಥಿ ಸಿ.ಹೆಚ್ ವಿಜಯಶಂಕರ್ ರವರನ್ನು ಹಿಂದಿಕ್ಕಿದ್ದಾರೆ. ಸಂಜೆ ವೇಳೆಗೆ ಫಲಿತಾಂಶ ಏನು ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.
ಮುನ್ನಡೆ ಸಾಧಿಸಿದ ಸಂತಸದಲ್ಲಿ ಪ್ರತಾಪ್ ಸಿಂಹ
ಮೊದಲಿನಿಂದಲೂ ಅಂತರ ಕಾಯ್ದುಕೊಂಡೇ ಬಂದಿದ್ದ ಪ್ರತಾಪ್ ಸಿಂಹರವರು ಎರಡನೇ ಬಾರಿಯೂ ಇದೇ ಕ್ಷೇತ್ರದಲ್ಲಿ ಮುಂದುವರೆಯಲಿದ್ದಾರೆ. ಕಾರ್ಯಕರ್ತರು ಸಿಹಿ ಹಂಚಿ ತಮ್ಮ ಅಭ್ಯರ್ಥಿ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ. ಇದೇ ವೇಳೆ ಮಾತನಾಡಿದ ಶಾಸಕ ಎಲ್ ನಾಗೇಂದ್ರ, ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದವರಿಗೆ ತಕ್ಕ ಉತ್ತರ ಸಿಕ್ಕಿದೆ. ನನ್ನ ಕ್ಷೇತ್ರದಲ್ಲೂ ಉತ್ತಮ ಲೀಡ್ ಸಿಕ್ಕಿದೆ. ಈಗಾಗಲೇ ಪ್ರತಾಪ್ ಸಿಂಹ ಅವರು 1 ಲಕ್ಷ ಅಂತರದಲ್ಲಿದ್ದಾರೆ. ವಿಜಯ ಲಕ್ಷ್ಮೀ ನಮ್ಮ ಕಡೆ ಇದ್ದಾಳೆ. ಮೋದಿಯವರು ಮೈಸೂರಿಗೆ ಬಂದಾಗ ಹೆಚ್ವಿನ ಮತದಲ್ಲಿ ಗೆಲ್ಲಿಸುವಂತೆ ಹೇಳಿದರು. ಆ ಮಾತನ್ನು ಉಳಿಸಿಕೊಂಡಿದ್ದೇವೆ. ಮೋದಿ ಮೈಸೂರಿಗೆ ಬಂದು ಸುಮಲತಾ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಅದೇ ರೀತಿ ಅವರು ಗೆಲುವಿನ ಹಾದಿಯಲ್ಲಿದ್ದಾರೆ ಎಂದರು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ಡಿಟಿಎಸ್ ಫೌಂಡೇಶನ್ ವತಿಯಿಂದ ನರೇಂದ್ರ ಮೋದಿ ಹೆಸರಿನಲ್ಲಿ ತಾಯಿ ಚಾಮುಂಡೇಶ್ವರಿ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು, ನಂತರ ನರೇಂದ್ರ ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.