ಮೈಸೂರು ಟು ಚಾಮರಾಜನಗರ; ರೈಲುಗಳ ವಿಸ್ತರಣೆಗೆ ಪ್ರತಾಪ ಸಿಂಹ ಮನವಿ
ಮೈಸೂರು, ಜುಲೈ 23 : ಮೈಸೂರಿನಿಂದ ಹಲವೆಡೆಗೆ ತೆರಳುವ ಒಟ್ಟು ನಾಲ್ಕು ರೈಲುಗಳನ್ನು ಚಾಮರಾಜನಗರ ಜಿಲ್ಲೆಯವರೆಗೆ ವಿಸ್ತರಿಸಬೇಕೆಂದು ಕೋರಿ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.
"ಮೈಸೂರು - ಬಾಗಲಕೋಟೆ ಎಕ್ಸ್ ಪ್ರೆಸ್, ಮೈಸೂರು - ಧಾರವಾಡ ಎಕ್ಸ್ ಪ್ರೆಸ್, ಹಂಪಿ ಎಕ್ಸ್ ಪ್ರೆಸ್ ಮತ್ತು ಗೋಲಗುಂಬಜ್ ಎಕ್ಸ್ ಪ್ರೆಸ್ ರೈಲುಗಳು ಮೈಸೂರಿನಲ್ಲಿ 6.30ರಿಂದ 8.40 ಗಂಟೆಯವರೆಗೆ ನಿಲ್ಲುತ್ತವೆ. ಇದೇ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಈ ರೈಲುಗಳನ್ನು ಚಾಮರಾಜನಗರದವರೆಗೂ ಮುಂದುವರೆಸಬಹುದು. ಸ್ವಚ್ಛತೆಗಾಗಿ 20 ನಿಮಿಷ ಮೈಸೂರಿನಲ್ಲಿ ನಿಲ್ಲಿಸಿದರೆ ಸಾಕು. ಹೀಗೆ ಮಾಡಿದರೆ ಚಾಮರಾಜನಗರದಿಂದ ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗಕ್ಕೂ ಸಂಪರ್ಕ ಕಲ್ಪಿಸಿದಂತಾಗುತ್ತದೆ" ಎಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ ನಲ್ಲಿ ಮೈಸೂರಿನಿಂದ ಹಾರಲಿವೆ ಮತ್ತೆರಡು ವಿಮಾನ
ಈ ಮನವಿಯು ಕಾರ್ಯರೂಪಕ್ಕೆ ಬಂದಿದ್ದೇ ಆದಲ್ಲಿ, ಚಾಮರಾಜನಗರಕ್ಕೆ ಹೆಚ್ಚು ರೈಲು ಬೇಕೆಂಬ ಜನರ ಬಹುದಿನಗಳ ಬೇಡಿಕೆಯೂ ಈಡೇರಿದಂತಾಗುತ್ತದೆ.
ಮೈಸೂರಿನಿಂದ ಬರಲಿದೆ ಮತ್ತೊಂದು ಹೊಸ ರೈಲು: ಮೈಸೂರು - ಬೆಂಗಳೂರು ನಡುವೆ ಹೆಚ್ಚುವರಿಯಾಗಿ ಮತ್ತೊಂದು ಹೊಸ ರೈಲು ಸೇವೆಯೂ ದೊರೆಯಲಿದೆ. ಅಲ್ಲದೆ ಬೆಂಗಳೂರು- ಕೊಚುವೆಲಿ ಬಳಿ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಮೈಸೂರಿಗೆ ವಿಸ್ತರಣೆ ಮಾಡುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗಿದೆ. ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದು, ಕೂಡಲೇ ಪ್ರಸ್ತಾವವನ್ನು ಪರಿಶೀಲಿಸಿ ಅಂತಿಮ ನಿರ್ಧಾರಕ್ಕಾಗಿ ಕಡತವನ್ನು ರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿಗೆ ಸಲ್ಲಿಸಲಾಗಿದೆ.
ಕೊಡಗಿನಲ್ಲಿ ತುರ್ತು ಆಸ್ಪತ್ರೆಗೆ ಸಂಸದ ಪ್ರತಾಪ್ ಸಿಂಹ ಮನವಿ
"ಸಚಿವರು ಮೈಸೂರಿನ ಯಾವುದೇ ಪ್ರಸ್ತಾವಗಳಿದ್ದರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೈಸೂರಿನಿಂದ ಕೇರಳಕ್ಕೆ ನೇರ ರೈಲು ಸೇವೆಯೂ ದೊರೆಯುವ ವಿಶ್ವಾಸವಿದೆ" ಎಂದು ಹೇಳಿದ್ದಾರೆ ಸಂಸದ ಪ್ರತಾಪ್ ಸಿಂಹ.