ಬರಗಾಲ ನಿವಾರಣೆಗೆ ಶಿವನಿಗೆ ರಾಜಮಾತೆಯಿಂದ ವಿಶೇಷ ಪೂಜೆ
ಮೈಸೂರು, ಫೆಬ್ರವರಿ 24 : 'ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ' ಆ ಹೆಸರಿನಲ್ಲಿ ಅಂತಹ ಮಹಾನ್ ಚೈತನ್ಯ ವೊಂದು ಅಡಗಿದೆ. ಯಾಕೆಂದರೆ ಅದು ಸಾಮಾನ್ಯನ ಹೆಸರಲ್ಲ ಜಗಕ್ಕೇ ಒಡೆಯನಾದ ಮಹಾದೇವನ ಹೆಸರು.
ಮಹಾಶಿವರಾತ್ರಿಯ ಸಮಯದಲ್ಲಂತೂ ಅವನನ್ನು ಭಜಿಸಿ, ಪೂಜಿಸದವರೇ ಇಲ್ಲವೇನೋ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಮಹಾದೇವನನ್ನು ನೆನೆದು, ಪುನೀತರಾಗುತ್ತಾರೆ. ಎಲ್ಲೆಡೆಯು ಶಿವನಾಮಸ್ಮರಣೆಯೊಂದೇ ಕೇಳಿ ಬರುತ್ತಿದೆ.[ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?]
ತನ್ನನ್ನು ನಂಬಿ ಬರುವ ಭಕ್ತರನ್ನು ಎಂದಿಗೂ ಬರಿಗೈಯ್ಯಲ್ಲಿ ಕಳುಹಿಸದೇ ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು. ಮಹಾಶಿವರಾತ್ರಿಯಂದು ದಿನವಿಡೀ ಶಿವನಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದಾಗಿದ್ದು, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ ಶಿವನನ್ನು ಆರಾಧಿಸುವ ಸಂಪ್ರದಾಯವಿದೆ.
ಮೈಸೂರಿನ ಹಲವು ಶಿವನ ದೇವಾಲಯಗಳಲ್ಲಿಯೂ ಮಹಾಶಿವರಾತ್ರಿಯ ಪ್ರಯುಕ್ತ ಶುಕ್ರವಾರ ಬೆಳಗ್ಗಿನಿಂದಲೇ ಭಕ್ತಾದಿಗಳು ತೆರಳಿ, ವಿಶೇಷ ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂತು.
ಶನೇಶ್ವರ ದೇವಾಲಯದಲ್ಲಿ ರಾಜಮಾತೆಯಿಂದ ವಿಶೇಷ ಪೂಜೆ :
ಮೈಸೂರಿನಲ್ಲಿ ಶಿವರಾತ್ರಿಯ ಪ್ರಯುಕ್ತ ಅರಮನೆ ಆವರಣದ ತ್ರಿನೇಶ್ವರ ದೇವಾಲಯದಲ್ಲಿ ರಾಜಮಾತೆ ಪ್ರಮೋದಾದೇವಿಯವರಿಂದ ವಿಶೇಷ ಪೂಜೆ ನೆರವೇರಿತು. ತ್ರಿನೇಶ್ವರ ದೇವಾಲಯದ ಶಿವಲಿಂಗಕ್ಕೆ ವರ್ಷದಲ್ಲಿ ಒಂದೇ ಬಾರಿ ತೊಡಿಸುವ, 11 ಕೆ.ಜಿ. ಚಿನ್ನದಿಂದ ತಯಾರಿಸಲಾದ ಚಿನ್ನದ ಕೊಳಗವನ್ನು ಮುಂಜಾನೆಯ ಶುಭಮುಹೂರ್ತದಲ್ಲಿ ಧಾರಣೆ ಮಾಡಲಾಯಿತು.
ಚಿನ್ನದ ಮುಖದಿಂದ ಕಂಗೊಳಿಸುವ ಅಪರೂಪದ ಶಿವನನ್ನು ನೋಡಲು ಭಕ್ತಸಾಗರವೇ ಹರಿದು ಬಂದಿತ್ತು. ಭಕ್ತರು ಬೆಳಗ್ಗೆ 6 ಗಂಟೆಯಿಂದಲೇ ಸರತಿಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು. ಅರಮನೆ ದೇವಾಲಯ ಹೊರತುಪಡಿಸಿ ಇತರಡೆಯ ಶಿವನ ದೇವಾಲಯಳಲ್ಲೂ ವಿಶೇಷ ಪೂಜೆ ನೆರವೇರಿತು. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ ನಿವಾರಣೆಗಾಗಿ ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಂದ ವಿಶೇಷ ಪೂಜೆ ಸಲ್ಲಿಸಿದರು.
ಬರಗಾಲ ನಿವಾರಣೆಗಾಗಿ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ಮಂಡಲ ದೀಪ ಹಚ್ಚಿದರು. ಆ ದೀಪವು ಇಂದಿನಿಂದ ನಿರಂತರವಾಗಿ 48 ದಿನಗಳ ಕಾಲ ಬೆಳಗಲಿದೆ. ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಒಳಿತಿಗಾಗಿ ಇಂದಿನಿಂದ 48 ದಿನಗಳ ಕಾಲ ಮಂಡಲ ವ್ರತ ಕೈಗೊಂಡಿರುವುದಾಗಿ ತಿಳಿಸಿದರು. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಕುರಿತು ಕಳವಳ ವ್ಯಕ್ತಪಡಿಸಿದರು.
ಶಿವರಾತ್ರಿ ಪ್ರಯುಕ್ತ ಬಿಲ್ವಪತ್ರೆ ಗಿಡ ವಿತರಣೆ
ಮಹಶಿವರಾತ್ರಿ ಹಬ್ಬದ ಪ್ರಯುಕ್ತ ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 57ರಲ್ಲಿ ಯುವಭಾರತ್ ಸಂಘಟನೆ ವತಿಯಿಂದ ಬಿಜೆಪಿ ಮುಖಂಡರಾದ ಬಿ.ಪಿ. ಮಂಜುನಾಥ ಹಾಗೂ ಮನಪಾ ಉಪಮಹಪೌರರಾದ ರತ್ನ ಲಕ್ಚ್ಮಣ್ ಹಾಗೂ ಬಿ ಆನಂದ್ ರವರ ಸಹಯೋಗದಲ್ಲಿ ವಿಶೇಷವಾಗಿ ಜೆಎಸ್ಎಸ್ ಬಡಾವಣೆಯಲ್ಲಿನ ಮನೆಗೆ ತೆರಳಿ ಬಿಲ್ವಪತ್ರೆ ಹಾಗೂ ತುಳಸಿ ಗಿಡಗಳನ್ನು ವಿತರಿಸಿ ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.