ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಘೋಷಣೆ
ಮೈಸೂರು, ಫೆ. 12: ರಾಜ್ಯದ ಪ್ರತಿಷ್ಠಿತ ಮೈಸೂರು ಸಂಸ್ಥಾನದ ಉತ್ತರಾಧಿಕಾರಿ ಆಯ್ಕೆ ವಿವಾದ ಅಂತ್ಯಗೊಂಡಿದೆ. ದಿವಂಗತ ಶ್ರೀಕಂಠದತ್ತ ಒಡೆಯರ್ ಅವರ ಹಿರಿಯ ಸಹೋದರಿ ಗಾಯತ್ರಿ ಅವರ ಮೊಮ್ಮಗ ಯದುವೀರ್ ಗೋಪಾಲರಾಜೇ ಅರಸ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿರುವುದಾಗಿ ಮಹಾರಾಣಿ ಪ್ರಮೋದಾದೇವಿ ಅವರು ಘೋಷಿಸಿದ್ದಾರೆ.
ಈ ಕುರಿತು ಮೈಸೂರಿನ ಅರಮನೆಯಲ್ಲಿ ಗುರುವಾರ ಪ್ರಮೋದಾ ದೇವಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜಮನೆತನದ ಸಂಪ್ರದಾಯದಂತೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದೇವೆ. ಅರಮನೆ ಕುರಿತು ಮಾಹಿತಿ ಹೊಂದಿರುವ ವ್ಯಕ್ತಿಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಪ್ರಮೋದಾ ದೇವಿ ತಿಳಿಸಿದರು. [ಯದುರಾಜ್ ಗೆ ಪಟ್ಟಾಭಿಷೇಕ]
ಉತ್ತರಾಧಿಕಾರಿ ನೇಮಿಸುವ ಮೊದಲು ಕುಟುಂಬದ ಸದಸ್ಯರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು. ಉತ್ತರಾಧಿಕಾರಿಯಾಗಿ ಯದುವೀರ್ ಗೋಪಾಲರಾಜೇ ಅರಸ್ ಅವರನ್ನು ನೇಮಿಸಿರುವ ಕುರಿತು ದಾಖಲೆ ಪ್ರದರ್ಶಿಸಿದರು.
ಫೆ. 23ರಂದು ದತ್ತು ಸ್ವೀಕಾರ : ಸನಾತನ ಧರ್ಮದ ಪ್ರಕಾರ ಯದುವೀರ್ ಅವರನ್ನು ಪ್ರಮೋದಾದೇವಿ ದತ್ತು ಪಡೆಯಲಿದ್ದಾರೆ. ಫೆ. 23ರಂದು ಯದುವೀರ್ ಅವರನ್ನು ದತ್ತು ಸ್ವೀಕರಿಸಲಾಗುವುದು. ರಾಜಗುರು ಪರಕಾಲ ಮಠದ ಶ್ರೀಗಳು ಸಮಾರಂಭದ ನೇತೃತ್ವ ವಹಿಸುವರು. [ಮೈಸೂರು ಯದುವಂಶದ ವಂಶಾವಳಿ]
ಕುಟುಂಬದವರು ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ಪ್ರವೇಶ ನೀಡಲಾಗುವುದು. ಸಂಜೆ ಸಾರ್ವಜನಿಕ ಮೆರವಣಿಗೆ ನಡೆಸುವ ಉದ್ದೇಶವಿದೆ. ಸಂಪೂರ್ಣ ಕಾರ್ಯಕ್ರಮದ ರೂಪುರೇಷೆಯನ್ನು ಇನ್ನೂ ಸಿದ್ಧಪಡಿಸಿಲ್ಲ ಎಂದು ಪ್ರಮೋದಾದೇವಿ ತಿಳಿಸಿದರು. [ಉತ್ತರಾಧಿಕಾರಿ ಯಾರು?]
ಮೈಸೂರು ಯದುವಂಶದ ಕುಟುಂಬ ಸದಸ್ಯರು, ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ಯದುವೀರ್ ಅರಸ್ ಅವರ ತಂದೆ ಹಾಗೂ ತಾಯಿ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.