ನಂಜನಗೂಡಿನ ಈ ಉದ್ಯಾನಕ್ಕೆ ಕಾಲಿಟ್ಟರೆ ಹಿಡಿಶಾಪ ಹಾಕ್ತೀರಾ..!
ಮೈಸೂರು, ಮಾರ್ಚ್ 12: ದಕ್ಷಿಣಕಾಶಿ ಎಂದೇ ಕರೆಯುವ ನಂಜನಗೂಡಿಗೆ ಶ್ರೀಕಂಠೇಶ್ವರನ ದರ್ಶನ ಪಡೆಯಲು ಪ್ರತಿದಿನವೂ ಸಹಸ್ರಾರು ಮಂದಿ ಭಕ್ತರು ಆಗಮಿಸುತ್ತಾರೆ. ಅದರಲ್ಲೂ ಹುಣ್ಣಿಮೆ ಮತ್ತು ಅಮಾವಾಸ್ಯೆ ಸೇರಿದಂತೆ ಇತರೆ ಹಬ್ಬ ಹರಿದಿನಗಳಲ್ಲಿ ಭಕ್ತರ ಸಂಖ್ಯೆ ದುಪ್ಪಟ್ಟಾಗುತ್ತದೆ.
ಇನ್ನು ನಂಜನಗೂಡು ಐತಿಹಾಸಿಕ ತಾಣವೂ ಆಗಿರುವುದರಿಂದ ಇಲ್ಲಿಗೆ ಭಕ್ತರು ಮಾತ್ರವಲ್ಲದೆ, ಪ್ರವಾಸಿಗರು ಕೂಡ ಆಗಮಿಸಿ ದೇವಾಲಯಗಳನ್ನು ವೀಕ್ಷಿಸಿ ಹಿಂತಿರುಗುತ್ತಾರೆ. ಇಂತಹ ಸುಂದರ ತಾಣದಲ್ಲಿ ಪ್ರವಾಸಿಗರು ಒಂದಷ್ಟು ಸಮಯವನ್ನು ನೆಮ್ಮದಿಯಾಗಿ ಕಳೆಯಲು ಒಂದೊಳ್ಳೆಯ ಉದ್ಯಾನವನವಿಲ್ಲ ಎಂದರೆ ಅಚ್ಚರಿಯಾಗುತ್ತದೆ.
ಉದ್ಯಾನವಲ್ಲ ಕಸ ಸುರಿಯುವ ಸ್ಥಳ
ಇರುವ ಉದ್ಯಾನಕ್ಕೆ ಯಾರಾದರೂ ವಿಶ್ರಾಂತಿ ಪಡೆಯಲೆಂದು ತೆರಳಿದರೆ ಒಂದು ಕ್ಷಣದಲ್ಲಿಯೇ ಹಿಡಿಶಾಪ ಹಾಕಿಕೊಂಡು ಹಿಂತಿರುಗಿ ಬಿಡುತ್ತಾರೆ. ಏಕೆಂದರೆ ಅದು ಯಾವ ಕಡೆಯಿಂದ ನೋಡಿದರೂ ಒಂದು ಉದ್ಯಾನದಂತೆ ಕಾಣದೆ, ಕಸ ಸುರಿಯುವ ಕೊಳಚೆ ನೀರು ಹರಿಯುವ ಕೊಳಕು ಸ್ಥಳವಾಗಿ ಮಾರ್ಪಾಡಾಗಿದೆ. ಐತಿಹಾಸಿಕ ತಾಣದಲ್ಲಿ ಒಂದು ಸುಂದರವಾದ ಉದ್ಯಾನವಿಲ್ಲ ಎಂಬ ಕೊರಗು ಇಲ್ಲಿಗೆ ಭೇಟಿ ನೀಡಿದವರಿಗೆ ಕಾಡುವುದಂತು ಸತ್ಯ.
ಕೊಡಗಿನಲ್ಲಿರುವ ಇರ್ಪುವಿನ ವೈಶಿಷ್ಟ್ಯವೇನು ಗೊತ್ತಾ?
ಉದ್ಯಾನದ ದುಸ್ಥಿತಿ ಅರಿವಾಗುತ್ತದೆ
ನಮ್ಮಲ್ಲೊಂದು ಸಮಸ್ಯೆ ಇದೆ, ಅದೇನೆಂದರೆ ನಮಗೆ ಉದ್ಯಾನ ನಿರ್ಮಾಣ ಮಾಡುವಾಗ ಇರುವ ಉತ್ಸಾಹ ಅದರ ನಿರ್ವಹಣೆ ವೇಳೆ ಇರುವುದಿಲ್ಲ. ಹೀಗಾಗಿ ಬಹುತೇಕ ಉದ್ಯಾನಗಳು ಕಾಡುಪಾಲಾಗಿವೆ. ನಂಜನಗೂಡು ಪಟ್ಟಣದ ಕಪಿಲಾ ನದಿ ಬಳಿಯ ಶ್ರೀಕಂಠೇಶ್ವರ ದೇಗುಲದ ಆವರಣದಲ್ಲಿ ನಿರ್ಮಿಸಿರುವ ಉದ್ಯಾನದ ಸ್ಥಿತಿಯೂ ಇದೇ ಆಗಿದೆ. ದೂರದಿಂದಲೇ ಶಿವನ ಬೃಹತ್ ಸುಂದರ ಪ್ರತಿಮೆ ಎಲ್ಲರನ್ನೂ ಸೆಳೆಯುತ್ತದೆ. ಹೀಗಾಗಿ ಖುಷಿಯಿಂದಲೇ ಜನ ಉದ್ಯಾನದತ್ತ ಹೋಗುತ್ತಾರೆ. ಆದರೆ ಅಲ್ಲಿಗೆ ಹೋದ ಬಳಿಕವಷ್ಟೆ ಉದ್ಯಾನದ ದುಸ್ಥಿತಿ ಅರಿವಾಗುತ್ತದೆ.
ಅವ್ಯವಸ್ಥೆ ನೋಡಿ ಬೆಚ್ಚಿ ಬೀಳ್ತಾರೆ
ಉದ್ಯಾನದಲ್ಲಿ ಶಿವನ ಆಕರ್ಷಕ ಪ್ರತಿಮೆಯನ್ನು ಹೊರತುಪಡಿಸಿದರೆ ಉದ್ಯಾನದ ಯಾವುದೇ ಭಾವನೆಗಳು ಬರಲಾರವು. ನೀರಿಲ್ಲದೆ ಒಣಗಿದ ಹೂಗಿಡಗಳು, ಹುಲ್ಲು ಹಾಸುಗಳು, ಉದ್ಯಾವನ ತುಂಬಾ ಕಸದ ರಾಶಿ, ಚಿಂದಿಬಟ್ಟೆ, ಪಕ್ಕದಲ್ಲೇ ಹರಿದು ಹೋಗುವ ಶೌಚಾಲಯದ ನೀರು ಅಸಹ್ಯ ಮೂಡಿಸುತ್ತದೆ. ಆರಂಭದಲ್ಲಿ ಉದ್ಯಾನ ಸುಂದರವಾಗಿತ್ತು. ಹೂಗಿಡಗಳಿಂದ ಹುಲ್ಲುಹಾಸುಗಳಿಂದ ಹಸಿರಾಗಿ ಕಂಗೊಳಿಸುತ್ತಿತ್ತು. ದೂರದಿಂದ ಬಂದ ಪ್ರವಾಸಿಗರು ಈ ಉದ್ಯಾನದಲ್ಲಿ ಒಂದಷ್ಟು ಹೊತ್ತು ಖುಷಿಯಾಗಿ ಕಳೆದು ಆ ಕ್ಷಣಗಳ ನೆನಪುಗಳನ್ನು ಫೋಟೋಗಳಲ್ಲಿ ಸೆರೆಹಿಡಿದುಕೊಂಡು ಹೋಗುತ್ತಿದ್ದರು. ಆದರೆ ಈಗೇನಾದರೂ ಅವರು ಬಂದರೆ ಇಲ್ಲಿನ ಅವ್ಯವಸ್ಥೆಯನ್ನು ನೋಡಿ ಬೆಚ್ಚಿ ಬೀಳುವುದಂತು ಖಚಿತ.
ಮೈಸೂರು: ಸಂಕನಹಳ್ಳಿಯಲ್ಲಿ ಮಾಂಸಾಹಾರ ಸೇವನೆ ನಿಷಿದ್ಧ..!
ನದಿಯಿದ್ದರೂ ನೀರಿಲ್ಲದೆ ಒಣಗಿದ ಗಿಡಗಳು
ಈ ಉದ್ಯಾನದ ಬಳಿಯೇ ಕಪಿಲಾ ನದಿ ಹರಿದು ಹೋಗುತ್ತಿದೆ. ಆದರೂ ಈ ಉದ್ಯಾನವನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ. ಇಲ್ಲಿರುವ ಗಿಡಗಳಿಗೆ ಸಮರ್ಪಕವಾಗಿ ನೀರು ಹಾಯಿಸದೆ ಅವುಗಳು ಒಣಗಿವೆ ಎನ್ನುವುದೇ ಬೇಸರದ ಸಂಗತಿಯಾಗಿದೆ. ಇನ್ನು ಈ ಉದ್ಯಾನದ ಪಕ್ಕದಲ್ಲೇ ಗಬ್ಬುನಾರುತ್ತಿರುವ ಶೌಚಾಲಯವಿದ್ದು, ಈ ಶೌಚಾಲಯದ ಗುಂಡಿ ತುಂಬಿ ಕಲ್ಮಶ ನೀರು ಹೊರಗೆ ಬರುತ್ತಿದ್ದು, ಇದರಿಂದ ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದೆ. ಇದರಿಂದ ಈ ಉದ್ಯಾನದೊಳಗೆ ಹೋಗಲು ಭಕ್ತರು ಮನಸ್ಸು ಮಾಡುವುದಿಲ್ಲ. ಜತೆಗೆ ಗಾಳಿಬೀಸಿದರೆ ದುರ್ವಾಸನೆ ಬರುವುದರಿಂದ ಈ ವ್ಯಾಪ್ತಿಯ ರಸ್ತೆಯಲ್ಲಿ ಸಾಗುವವರು ಮೂಗು ಮುಚ್ಚಿಕೊಂಡು ತೆರಳುವಂತಾಗಿದೆ.
ಉದ್ಯಾನಕ್ಕೊಂದು ಸುಂದರತೆಯ ಸ್ಪರ್ಶ ನೀಡಲಿ
ಸಾರ್ವಜನಿಕರ ಹಿತದೃಷ್ಟಿಯಿಂದ ಇಲ್ಲೊಂದು ನೂತನ ಶೌಚಾಲಯವನ್ನು ನಿರ್ಮಾಣ ಮಾಡಿದ್ದರೂ ಅದರ ಉದ್ಘಾಟನೆ ಇನ್ನೂ ಆಗಿಲ್ಲ. ಹೀಗಾಗಿ ಹಳೆಯ ಶೌಚಾಲಯವನ್ನು ತೆರವುಗೊಳಿಸಿ ನೂತನ ಶೌಚಾಲಯದ ಬಳಕೆಗೆ ಅವಕಾಶ ಮಾಡಿಕೊಡಿ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಇನ್ನಾದರೂ ಸಂಬಂಧಿಸಿದವರು ಉದ್ಯಾನದತ್ತ ಗಮನಹರಿಸಿ, ಅದರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ. ದೂರದಿಂದ ಬರುವ ಪ್ರವಾಸಿಗರು ಮತ್ತು ಭಕ್ತರು ಒಂದಷ್ಟು ಸಮಯವನ್ನು ಉದ್ಯಾನದಲ್ಲಿ ಕಳೆಯಲು ಇಷ್ಟಪಡುವುದರಿಂದ ಈ ಉದ್ಯಾನಕ್ಕೆ ಸುಂದರತೆಯ ಸ್ಪರ್ಶ ನೀಡುವುದು ಅಗತ್ಯವಾಗಿದೆ.