ಮೈಸೂರು: ಡಿಸಿಪಿ ಕಾಲಿಗೆ ಬಿದ್ದ ಪಟಾಕಿ ಮಾರಾಟಗಾರ
ಮೈಸೂರು, ನವೆಂಬರ್ 14: ಸರ್ಕಾರ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನ ಜೆ.ಕೆ ಮೈದಾನದಲ್ಲಿರುವ ಪಟಾಕಿ ಮಳಿಗೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇವಲ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡಲು ಮಾರಾಟಗಾರರಿಗೆ ಅನುಮತಿ ನೀಡಲಾಗಿದ್ದು, ಹೀಗಾಗಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ತಾತ್ಕಾಲಿಕವಾಗಿ ಪಟಾಕಿ ವ್ಯಾಪಾರಕ್ಕೆ ತಡೆ ನೀಡಿದ್ದಾರೆ.
ಮೈಸೂರು; ನಗರದ ಕೆಲ ಭಾಗಗಳು ನಿಶ್ಶಬ್ದ ವಲಯಗಳಾಗಿ ಘೋಷಣೆ
ಪರಿಶೀಲನೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. "ನಮಗೆ ಸರ್ಕಾರದ ಆದೇಶಗಳಲ್ಲಿ ಗೊಂದಲವಿದೆ, ಹಾಗಾಗಿ ಇದೊಂದು ಬಾರಿ ಮಾರಾಟಕ್ಕೆ ಅನುಮತಿ ನೀಡುವಂತೆ' ಪಟಾಕಿ ಮಾರಾಟಗಾರರು ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.
ದೃಢೀಕರಣ ಪತ್ರ ನೀಡಬೇಕು
ಏತನ್ಮಧ್ಯೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಹಸಿರು ಪಟಾಕಿ ಮಾರಾಟ ಮಾಡುವುದಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಅಡ್ಡಿ ಇಲ್ಲ. ಆದರೆ ಮಾರಾಟಗಾರರು ತಾವು ಮಾರಾಟ ಮಾಡುತ್ತಿರುವುದು ಹಸಿರು ಪಟಾಕಿ ಎಂಬುದಕ್ಕೆ ದೃಢೀಕರಣ ಪತ್ರ ತರಬೇಕು. ದೃಢೀಕರಣ ಪತ್ರ ತಂದು ಪೊಲೀಸ್ ಇಲಾಖೆಗೆ ನೀಡಿದಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದಿದ್ದಾರೆ.
ಟ್ರೇಡ್ ಮಾರ್ಕ್ ಇರುವ ಪಟಾಕಿ ಮಾತ್ರ ಮಾರಾಟ
ದೃಢೀಕರಣ ಪತ್ರ ನೀಡದಿದ್ದಲ್ಲಿ ಮಾರಾಟಕ್ಕೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಈ ನಡುವೆ ಇಂದು ಡಿಸಿಪಿ ಪ್ರಕಾಶ್ಗೌಡ ಅವರು ಶನಿವಾರ ಪಟಾಕಿ ಮಳಿಗೆಗಳನ್ನು ಪರಿಶೀಲಿಸಿದರು. ಟ್ರೇಡ್ ಮಾರ್ಕ್ ಇರುವ ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಸೂಚನೆ ನೀಡಿದರು.
ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ
ಆ ಸಮಯದಲ್ಲಿ ಡಿಸಿಪಿ ಪ್ರಕಾಶ್ ಗೌಡ ಅವರ ಕಾಲಿಗೆ ಬಿದ್ದ ವ್ಯಾಪಾರಿಯೊಬ್ಬರು, ಈಗಾಗಲೇ ಲಕ್ಷಾಂತರ ರುಪಾಯಿ ಮೌಲ್ಯದ ಪಟಾಕಿ ಖರೀದಿಸಿ ತಂದಿದ್ದೇವೆ. ಇದೊಂದು ಬಾರಿ ಮಾರಾಟ ಮಾಡಲು ಅವಕಾಶ ನೀಡಿ, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆʼ ಎಂದು ಕೇಳಿಕೊಂಡರು.
ಹಣ ವಾಪಸ್ ಕೊಡಿಸುತ್ತೇವೆ
ಈ ವೇಳೆ ಮಾತನಾಡಿದ ಡಿಸಿಪಿ, ನೀವು ಪಟಾಕಿ ಖರೀದಿಸಿದ ರಸೀದಿ ತನ್ನಿ, ಖರೀದಿಸಿದ ಕಂಪೆನಿಗಳಿಂದ ಹಣ ವಾಪಸ್ ಕೊಡಿಸುತ್ತೇವೆ. ಕಾನೂನಿನನ್ವಯ ಖರೀದಿಸಿದ ಪಟಾಕಿಯನ್ನು ಹಿಂಪಡೆಯಬೇಕು. ಒಂದು ವೇಳೆ ಹಿಂಪಡೆಯದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದುʼ ಎಂದು ತಿಳಿಸಿದರು.